Friday, December 26, 2008

sihikadubu

Wednesday, December 17, 2008

Tamarind Rice / ಹುಳಿ ಚಿತ್ರಾನ್ನ:

ಹುಳಿ ಚಿತ್ರಾನ್ನ:


ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ತಯಾರಿಸುವ ವಿಧಾನ:

ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಜೀರಿಗೆ, ಕರಿಬೇವು ,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಹುಣಸೇಹುಳಿಯ ಚಿತ್ರಾನ್ನ ತಯಾರಾಗುತ್ತದೆ.

Tuesday, December 16, 2008

ಹುರುಳಿಕಾಳಿನ ಮಸಾಲೆ ಸಾರು / Horse Gram Curry


ಹುರುಳಿಕಾಳು ಎಂದರೆ ಕೆಲವರು ಮೂಗು ಮುರಿಯುವುದುಂಟು! ಏಕೆಂದರೆ ಇದನ್ನು ಕುದುರೆ ಮತ್ತು ಹಸುಗಳಿಗೆ ಹಾಕಲು ಉಪಯೋಗಿಸುತ್ತಾರೆ.ಅವುಗಳಿಗೆ ಇದು ದಿನನಿತ್ಯದ ಆಹಾರ.ಇದರ ಹೆಸರೇ ಇಂಗ್ಲಿಷಿನಲ್ಲಿ Horse Gram ಎಂದು ಕರೆಯುತ್ತಾರೆಂದು ಎಲ್ಲರಿಗು ತಿಳಿದಿರುವ ವಿಷಯ.ಈ ಹುರುಳಿಕಾಳುಗಳನ್ನು ಕುದುರೆಗೆ ತಿನ್ನಿಸಲು ಹೆಚ್ಚಾಗಿ ಬಳಸುತ್ತಾರೆ. ಈ ಕಾಳುಗಳು ತುಂಬಾ ಪೌಷ್ಠಿಕವಾಗಿವೆ. ಇದು ತುಂಬಾ ಶಕ್ತಿ ಉಳ್ಳದ್ದಾಗಿದೆ. ಕೆಲವರು ಇದರಿಂದ ಸುಮಾರು ರೀತಿ ಅಡಿಗೆ ತಯಾರಿಸುತ್ತಾರೆ. ಇಲ್ಲಿ ತಿಳಿಸಿರುವುದು ನಾವು ತಯಾರಿಸುವಂತ ರುಚಿಯಾದ ಮೊಳಕೆ ಹುರುಳಿಕಾಳಿನ ಸಾರು.

ಹುರುಳಿಕಾಳಿನ ಮಸಾಲೆ ಸಾರು:

ಬೇಕಾಗುವ ಸಾಮಗ್ರಿಗಳು:

ಹುರುಳಿಕಾಳು- ಒಂದು ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ತೆಂಗಿನಕಾಯಿ -ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ -ಕ್ಯಾರೆಟ್
ಆಲೂಗೆಡ್ಡೆ
ಬದನೆಕಾಯಿ
ನವಿಲುಕೋಸು
ಹೂಕೋಸು
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.ಮೊಳಕೆ ಕಾಳು ತಯಾರಿಸುವ ಬಗೆ;

ಹುರುಳಿಕಾಳನ್ನು ಚೆನ್ನಾಗಿ ತೊಳೆದು, ಇವತ್ತು ಕಾಳುಗಳು ಬೇಕೆಂದರೆ ಅದನ್ನು ಎರಡು ದಿನದ ಹಿಂದಿನ ರಾತ್ರಿ ನೆನೆಸಿ, ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.


ಮಸಾಲೆ ತಯಾರಿಸಲು:

ಒಂದು ಚಮಚ ಎಣ್ಣೆಯನ್ನು ಪ್ಯಾನ್ ಗೆ ಹಾಕಿ ,ಈರುಳ್ಳಿಯನ್ನು, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು, ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಅಚ್ಚಖಾರದ ಪುಡಿ, ಧನಿಯಾಪುಡಿ,ಗಸಗಸೆ,ಹುರಿಗಡಲೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ಹೆಚ್ಚಿದ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು,ಕಾಳುಗಳನ್ನು ಹಾಕಿ ಅದನ್ನು ಐದು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ನೀರು ಹಾಕಿ ಬೆರೆಸಿ ಮುಚ್ಚಿಟ್ಟು ಬೇಯಿಸಿ. ಕಾಳುಗಳು ಬೇಯುವವರೆಗು ಬೇಯಿಸಿ. ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ಇಳಿಸಿ. ಹುರುಳಿಕಾಳು ಸಾರು ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ &ಪರೋಟ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಈ ರೀತಿಯ ಸಾರುಗಳು ಮಾರನೆ ದಿನ ಹೆಚ್ಚು ರುಚಿಯಾಗಿರುತ್ತವೆ. ಹುರುಳೀಕಾಳು ತುಂಬಾ ಶಕ್ತಿದಾಯಕ ಮತ್ತು ಉಷ್ಣ . ಮೊಳಕೆ ಬರಿಸಿ ಉಪಯೋಗಿಸಿದರೆ ಸ್ವಲ್ಪ ತಂಪು. ಈ ಕಾಳುಗಳನ್ನು ತಿನ್ನುವುದರಿಂದ ಯಾವ ತೊಂದರೆಯು ಇಲ್ಲ. ಆರೋಗ್ಯಕ್ಕೂ ಒಳ್ಳೆಯದು.

Wednesday, December 3, 2008

Cardamom Rice - ಏಲಕ್ಕಿ ಅನ್ನ:

ಏಲಕ್ಕಿ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ಲವಂಗ -ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಜೀರಿಗೆ ಏಲಕ್ಕಿ ಮತ್ತು ಲವಂಗ ಹಾಕಿ ಹುರಿದು, ಅದಕ್ಕೆ ನೆನೆಸಿದ ಅಕ್ಕಿ ಹಾಕಿ, ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ, ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ. ಬೇಯಿಸಿ. ಅನ್ನವನ್ನು ತಯಾರಿಸಿ. ಏಲಕ್ಕಿ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Tuesday, December 2, 2008

Avalakki / Poha Uppittu -ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:

ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:

ಬೇಕಾಗುವ ಸಾಮಗ್ರಿಗಳು;
ಅವಲಕ್ಕಿ - ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ


ತಯಾರಿಸುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು,ಒಳ್ಳೆಯ ನೀರಿನಲ್ಲಿ ಎರಡು ನಿಮಿಷ ನೆನೆಸಿ,ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು ,ಕಡ್ಲೆಬೇಳೆ, ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಅವಲಕ್ಕಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ನಿಂಬೆರಸ ಹಾಕಿ.ಇದೆಲ್ಲವನ್ನು ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಚೆನ್ನಾಗಿ ಕಲೆಸಿಡಿ. ಒಲೆಯಿಂದ ಇಳಿಸಿ. ಬಿಸಿಬಿಸಿ ಅವಲಕ್ಕಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಇದು ತುಂಬಾ ಹಗುರವಾದ ತಿಂಡಿ. ಬೇಸಿಗೆಯಲ್ಲಿ ಒಳ್ಳೆಯದು.
* ಅವಲಕ್ಕಿಯಲ್ಲಿ ವಿವಿಧ ಬಗೆ ಇದೆ. ತೆಳು ಅವಲಕ್ಕಿ,ಗಟ್ಟಿ ಅವಲಕ್ಕಿ,ದಪ್ಪ ಮತ್ತು ಮೀಡೀಯಂ ಅಂತ,ಈ ತಿಂಡಿಗೆ ಗಟ್ಟಿ ಅವಲಕ್ಕಿಯಾದರೆ ಚೆನ್ನಾಗಿರುತ್ತದೆ.

Wednesday, November 19, 2008

Seemebadanekaayi Sabji - ಸೀಮೆಬದನೆಕಾಯಿ ಪಲ್ಯ

ಸೀಮೆಬದನೆಕಾಯಿ ಪಲ್ಯ:

ಸಾಮಗ್ರಿಗಳು:
ಸೀಮೆಬದನೆಕಾಯಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಮೊದಲು ಸೀಮೆಬದನೆಕಾಯಿಯನ್ನು ತುರಿದುಕೊಳ್ಳಿ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಸೀಮೆಬದನೆಕಾಯಿತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಇದು ಬೇಗ ಬೇಯುವುದರಿಂದ ಒಂದೆರಡು ಚಮಚ ಮಾತ್ರ ನೀರು ಚಿಮುಕಿಸಿ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Sunday, November 16, 2008

Cucumber Green Salad/ಸೌತೆಕಾಯಿ ಗ್ರೀನ್ ಸಲಾಡ್

ಸೌತೆಕಾಯಿ ಗ್ರೀನ್ ಸಲಾಡ್:

ಸೌತೆಕಾಯಿ
ನಿಂಬೆರಸ
ಹಸಿಮೆಣಸಿನಕಾರ
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.


ಸೌತೆಕಾಯಿಯನ್ನು ದಪ್ಪ ಚೂರುಗಳಾಗಿ ಹೆಚ್ಚಿಕೊಂಡು,ಅದಕ್ಕೆ ನಿಂಬೆರಸ,ಉಪ್ಪು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾರ ಹಾಕಿ ಚೆನ್ನಾಗಿ ಬೆರೆಸಿ. ತಕ್ಷಣ ತಿನ್ನಿ.

Wednesday, November 12, 2008

Tamarind gojju / ಹುಣಸೆಗೊಜ್ಜು


ಹುಣಸೆಹಣ್ಣಿನ ಹುಳಿಗೊಜ್ಜು:

ಸಾಮಗ್ರಿಗಳು:

ಹುಣಸೆಹಣ್ಣಿನರಸ - ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಹಸಿಮೆಣಸಿನಕಾಯಿ -ಒಂದು ಉದ್ದಕ್ಕೆ ಹೆಚ್ಚಿ
ಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು

ವಿಧಾನ:
ಹುಣಸೆಹಣ್ಣಿನ ರಸವನ್ನು ಸ್ವಲ್ಪ ನೀರು ಹಾಕಿ ಬೆರೆಸಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ,ಕಾರದ ಪುಡಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಿವುಚಿ. ಸ್ವಲ್ಪ ಸಾರಿನ ಪುಡಿ ಬೇಕಾದರೂ ಹಾಕಬಹುದು. ಹುಣಸೆಗೊಜ್ಜು ರೆಡಿ. ಇದು ಉಪ್ಪಿಟ್ಟಿನ ಜೊತೆ ಒಳ್ಳೆಯ ಜೊತೆ. ಅದಕ್ಕೆ ಕಲಸಿಕೊಂಡು ತಿನ್ನಬಹುದು. ಅನ್ನಕ್ಕೂ ಸೈ. ಅರುಚಿ ಆದವರಿಗೂ ಮತ್ತು ಪಿತ್ತಕ್ಕೂ ಒಳ್ಳೆಯದು.

Friday, November 7, 2008

Sugar Puris / ಸಿಹಿ ಪೂರಿ

ಸಿಹಿ ಪೂರಿ

ಸಾಮಗ್ರಿಗಳು:
ಮೈದಾಹಿಟ್ಟು - ಒಂದು ಬಟ್ಟಲು
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಸಕ್ಕರೆ ಪುಡಿ ಎರಡು ದೊಡ್ಡ ಚಮಚ
ಕೊಬ್ಬರಿತುರಿ ಸ್ವಲ್ಪ
ಸಕ್ಕರೆಪುಡಿ ಸ್ವಲ್ಪ
ಎಣ್ಣೆ ಕರಿಯಲು


ತಯಾರಿಸುವ ವಿಧಾನ:

ಮೈದಾ, ಸಕ್ಕರೆಪುಡಿ ಮತ್ತು ಡಾಲ್ಡ ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಹಿಟ್ಟಿನಿಂದ ದಪ್ಪನೆಲ್ಲಿಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಪೂರಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಆಮೇಲೆ ಅದನ್ನು ಕಾದಿರುವ ಎಣ್ಣೆಯಲ್ಲಿ ತೆಗೆದು ಹಾಕಿ. ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ಬಂಗಾರದ ಬಣ್ಣ ಬಂದ ನಂತರ ಬೇಗ ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ತಕ್ಷಣವೇ ಅದರ ಎರಡು ಕಡೆಗೂ ಸಕ್ಕರೆಪುಡಿ ಮತ್ತು ಕೊಬ್ಬರಿ ತುರಿ ಉದುರಿಸಿ, ಬಿಸಿ ಇರುವಾಗಲೆ ಉದುರಿಸಿದರೆ, ತಕ್ಷಣ ಸಕ್ಕರೆ ಹೀರಿಕೊಳ್ಳುತ್ತದೆ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ತಿನ್ನಬಹುದು ಅಥವಾ ಬಿಸಿ ಇರುವಾಗಲು ನೀಡಬಹುದು, ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.
*ಸಕ್ಕರೆ ಉದುರಿಸುವ ಬದಲು ಸಕ್ಕರೆ ಪಾಕ ಮಾಡಿಕೊಂಡು ಅದರಲ್ಲಿ ಅದ್ದಿ ತೆಗೆದು ಕೊಬ್ಬರಿ ಉದುರಿಸಬಹುದು.
*ಕೊಬ್ರಿ ತುರಿಗೆ ಬಣ್ಣ ಸೇರಿಸಿ ಕಲರ್ ಫುಲ್ ಆಗಿಯೂ ತಯಾರಿಸಬಹುದು. ಕೊಬ್ಬರಿತುರಿ ಬೇಕಾದರೆ ಹಾಕಬಹುದು ನಿಮ್ಮಿಷ್ಟ.

Sunday, October 26, 2008

Almond Burfi/badam burfi-ಬಾದಾಮಿ ಬರ್ಫಿ:


ಬಾದಾಮಿ ಬರ್ಫಿ:

ಬೇಕಾಗುವ ಸಾಮಗ್ರಿಗಳು:

ಬಾದಾಮಿ- ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಹಾಲು - ಅರ್ಧ ಕಪ್
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ತುಪ್ಪ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:
ಬಾದಾಮಿಯನ್ನು ಒಂದು ಗಂಟೆ ನೆನೆಸಿ,ಅದರ ಸಿಪ್ಪೆ ತೆಗೆದು,ನೀರು ಹಾಕದೆ ನುಣ್ಣಗೆ ಪೇಸ್ಟ್ ತರಹ ಮಾಡಿಕೊಂಡು,ಅದನ್ನು ಒಂದು ಪಾತ್ರೆಗೆ ಹಾಕಿ, ಸ್ವಲ್ಪ ಉರಿಯಲ್ಲಿ ಇಟ್ಟು ಹಸಿವಾಸನೆ ಹೋಗುವವರೆಗೂ ಕೈಆಡಿಸುತ್ತಿರಿ,ಅದರ ಬಣ್ಣ ಸ್ವಲ್ಪ ಬದಲಾದ ಮೇಲೆ ಅದಕ್ಕೆ ಸಕ್ಕರೆ ಮತ್ತು ಕಂಡೆನ್ಸ್ಡ್ ಮಿಲ್ಕ್ ಹಾಕಿ ಬೆರೆಸಿ,ಮಧ್ಯೆ ಬಿಟ್ಟು ಬಿಟ್ಟು ಕೆದಕುತ್ತಿರಿ,ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ, ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ತುಪ್ಪ ಒಂದು ಕಡೆ ಬೇರೆಯಾಗುತ್ತಾ ಬರುವಾಗ,ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ, ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ಡೈಮೆಂಡ್ ಆಕಾರ ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ತಿನ್ನಲು ಬಾದಾಮಿ ಬರ್ಫಿ ತಯಾರಾಗುತ್ತದೆ. ಮಕ್ಕಳಿಗೆ ಪ್ರಿಯವಾದ ಬಾದಾಮಿ ಬರ್ಫಿಗಳು ತಯಾರು.

Thursday, October 23, 2008

Massoppu- ಮಸ್ಸೊಪ್ಪು:


ಸೊಪ್ಪನ್ನು ಮಸೆದು ತಯಾರಿಸುವ ಸಾರಿಗೆ ’ಮಸ್ಸೊಪ್ಪು’ /’ಮಸ್ಸೊಪ್ಪು ಸಾರು’ ಎಂದು ಕರೆಯುವರು.

ಮಸ್ಸೊಪ್ಪು:

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ - ಒಂದು ಕಪ್
ಪಾಲಕ್ ಸೊಪ್ಪು/ ಮೆಂತ್ಯದ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ, ಬೆಳ್ಳುಳ್ಳಿ
ಕಾಯಿತುರಿ
ಹುಣಸೇರಸ
ಎಣ್ಣೆ,ಸಾಸಿವೆ
ಅರಿಸಿನ,ಇಂಗು
ಕರಿಬೇವು
ಉಪ್ಪು

ತಯಾರಿಸುವ ರೀತಿ:
ತೊಗರಿಬೇಳೆಯನ್ನು ಬೇಯಿಸಿಕೊಂಡು ಅದಕ್ಕೆ ತೊಳೆದು,ಕತ್ತರಿಸಿದ ಸೊಪ್ಪನ್ನು ಹಾಕಿ,ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿಯನ್ನು ಹಾಕಿ,ಟಮೋಟ ಕೂಡ ಹಾಕಿ ಸೊಪ್ಪು ಬೇಯುವವರೆಗು ಬೇಯಿಸಿ. ಬೆಂದ ನಂತರ ಸ್ವಲ್ಪ ಬೇಳೆಸೊಪ್ಪಿನ ಮಿಶ್ರಣವನ್ನು ಮಸೆದುಕೊಳ್ಳಿ.
ಈ ಕಡೆ ಕಾಯಿತುರಿ,ಸ್ವಲ್ಪ ಈರುಳ್ಳಿ,ಸಾರಿನಪುಡಿ,ಒಂದು ಅಳಕುಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ,ಸಾಸಿವೆ,ಕರಿಬೇವು,ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ,ಕುದಿಸಿ,ಉಪ್ಪು ಸೇರಿಸಿ,ಮಸೆದಿರುವ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ,ಹುಣಸೇಹುಳಿ ಸೇರಿಸಿ ಒಂದು ಬಾರಿ ಕುದಿಸಿ. ಕೆಳಗಿಳಿಸಿ. ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.

* ಮಸಾಲೆ ರುಬ್ಬದೇ,ಬರೀ ಸಾರಿನಪುಡಿ ಮಾತ್ರ ಹಾಕಿ ಸಹ ತಯಾರಿಸಬಹುದು,ಆಗ ತೆಂಗಿನತುರಿ ಬಿಡಬೇಕು.
* ಒಗ್ಗರಣೆ ಹಾಕಿದ ಮೇಲೆ ಅದಕ್ಕೆ ಬೇಯಿಸಿದ-ಮಸೆದ ಮಿಶ್ರಣವನ್ನು ಹಾಕಿ,ಸಾರಿನಪುಡಿ,ಉಪ್ಪು ಮತ್ತು ಹುಳಿಯನ್ನು ರುಚಿಗೆ ತಕ್ಕಷ್ಟು ಸೇರಿಸಿಕೊಂಡು ಕುದಿಸಿ.ಇಳಿಸಿ.

Monday, October 20, 2008

Sprouts Sabzi /ಮೊಳಕೆಹೆಸರುಕಾಳಿನ ಉಸಲಿ:

ಮೊಳಕೆಹೆಸರುಕಾಳಿನ ಉಸಲಿ

ಸಾಮಗ್ರಿಗಳು:

ಮೊಳಕೆ ಹೆಸರುಕಾಳು
ಹಸಿಮೆಣಸಿನಕಾಯಿ
ಬೆಲ್ಲ
ಎಣ್ಣೆ
ಜೀರಿಗೆ
ಉಪ್ಪು
ತೆಂಗಿನತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:
ಹೆಸರುಕಾಳನ್ನು ಸ್ವಲ್ಪ ಅಂದರೆ ಅರ್ಧ ಮಾತ್ರ ಬೇಯಿಸಿ.
ಎಣ್ಣೆ ಕಾಯಿಸಿ ಜೀರಿಗೆ ಹಾಕಿ,ಒಂದು ನಿಮಿಷ ಹುರಿದು,ಮೊಳಕೆ ಕಾಳುಗಳನ್ನು ಹಾಕಿ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ,ಒಂದೆರಡು ನಿಮಿಷ ತಿರುಗಿಸಿ,ಬೆಲ್ಲ ಮತ್ತು ಉಪ್ಪು ಹಾಕಿ.ಕಾಯಿತುರಿ,ಕೊತ್ತುಂಬರಿಸೊಪ್ಪು,ನಿಂಬೆರಸ ಹಾಕಿ ಬೆರೆಸಿ. ಕೊತ್ತುಂಬರಿಸೊಪ್ಪಿನಿಂದ ಅಲಂಕರಿಸಿ.

Friday, October 17, 2008

Dates Raita / ಖರ್ಜೂರದ ರಾಯಿತ:

ಸಾಮಗ್ರಿಗಳು:

ಖರ್ಜೂರ - ಐದು/ಆರು
ಕಾಯಿತುರಿ ಸ್ವಲ್ಪ
ಕಾಳು ಮೆಣಸಿನ ಪುಡಿ
ಉಪ್ಪು
ಮೊಸರು

ವಿಧಾನ:
ಖರ್ಜೂರವನ್ನು ಮೊದಲು ಮಿಕ್ಸಿಗೆ ಹಾಕಿ, ನುಣ್ಣಗೆ ಮಾಡಿಕೊಂಡು, ಅದಕ್ಕೆ ಕಾಯಿತುರಿ,ಉಪ್ಪು ಹಾಕಿ ಸ್ವಲ್ಪವೇ ನೀರು ಹಾಕಿ ತರಿತರಿಯಾಗಿ ರುಬ್ಬಿ, ಅದಕ್ಕೆ ಮೊಸರು ಮತ್ತು ಮೆಣಸಿನ ಪುಡಿ ಸೇರಿಸಿ.
ಇದು ತುಂಬಾ ಒಳ್ಳೆಯ ಆರೋಗ್ಯಕರ ರಾಯಿತ.

Ridge Gourd sabji-ಹೀರೇಕಾಯಿ ಪಲ್ಯ:

ಹೀರೇಕಾಯಿಯನ್ನು ಕೊಂಡುಕೊಳ್ಳುವಾಗ ಯಾವಾಗಲೂ ಅದನ್ನು ಸ್ವಲ್ಪ ಜಿಗುಟಿ ಸಿಪ್ಪೆ ತೆಗೆದು ತಿಂದು ನೋಡಿ ತೆಗೆದುಕೊಳ್ಳಿ, ಕೆಲವೊಂದು ಹೀರೇಕಾಯಿಗಳು ಕಹಿಯಾಗಿರುತ್ತವೆ, ಆ ರೀತಿ ಇರುವ ಕಾಯಿಯನ್ನು ಬಳಸಿದಾಗ ಪದಾರ್ಥಗಳ ರುಚಿ ಕಹಿಯಾಗಿರುತ್ತದೆ, ಆಮೇಲೆ ಅದನ್ನು ಉಪಯೋಗಿಸಲು ಅಸಾಧ್ಯ.ಬಲಿತಿರುವ ಕಾಯಿಯಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಕಾಯಿಯನ್ನು ತೆಗೆದುಕೊಳ್ಳಿ.ಹೀರೇಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇದರಿಂದ ಬಜ್ಜಿ, ಸಾಂಬಾರ್, ಹುಳಿ,ಪಲ್ಯ ಮತ್ತು ಸಿಪ್ಪೆಯಿಂದ ಚಟ್ನಿ ಎಲ್ಲವನ್ನು ತಯಾರಿಸಬಹುದು. ಚಪಾತಿಗಂತೂ ಒಳ್ಳೆಯ ಕಾಂಬಿನೇಷನ್.

ಹೀರೇಕಾಯಿ ಪಲ್ಯ:

ಬೇಕಾಗುವ ಪದಾರ್ಥಗಳು;

ಹೀರೇಕಾಯಿ
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ,ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು ರುಚಿಗೆ
ಕಾಯಿತುರಿ,
ಕೊತ್ತುಂಬರಿಸೊಪ್ಪು
ನಿಂಬೆರಸ ಸ್ವಲ್ಪ (ಬೇಕಾದರೆ)

ವಿಧಾನ:

ಮೊದಲು ಹೀರೇಕಾಯಿಯ ಸಿಪ್ಪೆಯನ್ನು ಎರೆದು ಸಣ್ಣಗೆ ಕತ್ತರಿಸಿ.

ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ, ಬಾಡಿಸಿ, ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೀರೇಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಹೀರೇಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಹಾಗು ನಿಂಬೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ.

* ಕಾಯಿತುರಿ ಹೆಚ್ಚಾಗಿದ್ದಷ್ಟು ರುಚಿ ಹೆಚ್ಚು.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.

Sunday, October 5, 2008

Beetroot Salad / ಬೀಟ್ ರೂಟ್ ಕೋಸುಂಬರಿ:

ಬೀಟ್ ರೂಟ್ ಕೋಸುಂಬರಿ:

ಬೀಟ್ ರೂಟ್ ತುರಿ
ಕ್ಯಾರೆಟ್ ತುರಿ
ಕಾಯಿತುರಿ
ಹುರಿದು ಪುಡಿ ಮಾಡಿದ ಕಡ್ಲೆಕಾಯಿ ಬೀಜ
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಳು ಮೆಣಸಿನಪುಡಿ
ಹುರಿದ ಜೀರಿಗೆ ಪುಡಿ ಸ್ವಲ್ಪ
ನಿಂಬೆರಸ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ತಯಾರಿಸುವ ರೀತಿ:
ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ತರಕಾರಿ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ. ಹುರಿದ ಜೀರಿಗೆಯ ಪರಿಮಳದಿಂದ ಇನ್ನೂ ಚೆನ್ನಾಗಿ ಇರುತ್ತದೆ , ಇದರ ಜೊತೆ ಕಡ್ಲೆಕಾಯಿ ಬೀಜ ತುಂಬಾ ರುಚಿ ಹೆಚ್ಚಿಸುತ್ತದೆ.

Wednesday, September 17, 2008

Pepper Rasam/ಕಾಳುಮೆಣಸಿನ ರಸಂ:

ಕಾಳುಮೆಣಸಿನ ರಸಂ:

ಸಾಮಗ್ರಿಗಳು:
ಜೀರಿಗೆ
ಕಾಳು ಮೆಣಸಿನಕಾಳು
ಹಸಿಮೆಣಸಿನಕಾಯಿ
ಬೆಲ್ಲ
ಉಪ್ಪು
ಕೊತ್ತುಂಬರಿಸೊಪ್ಪು

ವಿಧಾನ:
ಕಾಳುಮೆಣಸಿನಕಾಳು ಮತ್ತು ಜೀರಿಗೆಯನ್ನು ಸ್ವಲ್ಪ ವಾಸನೆ ಬರುವವರೆಗೂ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಹೆಚ್ಚಿಗೆ ನೀರು ಹಾಕಿ, ಅದಕ್ಕೆ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಕುದಿಸಿ,ನಂತರ ಬೆಲ್ಲ ಮತ್ತು ಉಪ್ಪು ಹಾಕಿ,ಒಗ್ಗರಣೆ ಬೆರೆಸಿ.ಹುರಿದು ಪುಡಿ ಮಾಡಿಕೊಂಡಿರುವುದನ್ನು ಹಾಕಿ, ಚೆನ್ನಾಗಿ ಕದಡಿ. ಕೊತ್ತುಂಬರಿಸೊಪ್ಪನ್ನು ಹಾಕಿ ಬೆರೆಸಿ.

Tuesday, September 16, 2008

ಹಾಲಿನ ಪೇಡ/ Dhood Peda/Milk peda


ಹಾಲಿನ ಪೇಡ:

ಸಾಮಗ್ರಿಗಳು:
ಹಾಲಿನಪುಡಿ - ಎರಡು ಬಟ್ಟಲು
ಕಂಡೆನ್ಸ್ದ್ ಹಾಲಿನ ಟಿನ್ - ಒಂದು
ಬೆಣ್ಣೆ - ಅರ್ಧ ಬಟ್ಟಲು
ಏಲಕ್ಕಿ ಪುಡಿ

ವಿಧಾನ:
ಮೊದಲು ಬೆಣ್ಣೆಯನ್ನು ಕರಗಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ,ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ.ಗಂಟು ಆಗದಂತೆ ಕೈಯಾಡಿಸಿ,ಮಧ್ಯೆ ಮಧ್ಯೆ ತಿರುಗಿಸುತ್ತಿರಿ,ಅದು ಸ್ವಲ್ಪ ಗಟ್ಟಿಯಾದ ತಕ್ಷಣ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ .ತಳ ಬಿಟ್ಟು ಬರುತ್ತಿದೆ ಎನಿಸಿದಾಗ ಕೆಳಗಿಳಿಸಿ.
ನಿಮಗೆ ಬೇಕಾದ ಆಕಾರದಲ್ಲಿ ಪೇಡಗಳನ್ನು ತಯಾರಿಸಿ. ಇದು ತಯಾರಿಸಲು ತುಂಬಾ ಸುಲಭ,ಬೇಗ ಆಗುತ್ತದೆ ಮತ್ತು ರುಚಿಯಾಗಿಯೂ ಇರುತ್ತದೆ. ಮಕ್ಕಳಿಗಂತು ಬಲು ಇಷ್ಟವಾಗುತ್ತದೆ.

Monday, September 15, 2008

ಹೆಸರುಬೇಳೆ ಕೋಸುಂಬರಿ / Moongdal Salad

ಯಾವುದೇ ಹಬ್ಬಗಳಿರಲಿ, ಸಂಭ್ರಮಗಳಿರಲಿ ಆ ಊಟದ ಎಲೆಯಲ್ಲಿ ಕೋಸುಂಬರಿ ಇರಲೇಬೇಕು. ಊಟ ಬಡಿಸುವಾಗ ಅದರದ್ದೇ ಆದ ಪ್ರಾಮುಖ್ಯತೆ ಕೋಸುಂಬರಿಗೆ ಇದೆ. ಕೋಸುಂಬರಿ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಂಡರು ಸಹ , ಅಡಿಗೆ ತಯಾರಿಸುವಾಗ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆನೋ ಎನಿಸುತ್ತೆ. ಮೊದಲಿಗೆ ಅಡಿಗೆ ಶುರು ಮಾಡುವಾಗ. ಸಾಮಾನ್ಯವಾಗಿ ಎಲ್ಲರೂ ಕೋಸುಂಬರಿಗೆ ತಯಾರಿ ನಡೆಸುತ್ತಾರೆ. ಇದು ಬೇಯಿಸದೆ ಹಸಿಯಾಗಿ ಇರುವುದರಿಂದ ತಿಂದರೆ ಆರೋಗ್ಯಕ್ಕೂ ಅತ್ಯುತ್ತಮ.
ಹೆಸರುಬೇಳೆ ಕೋಸುಂಬರಿ:

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - ಒಂದು ಬಟ್ಟಲು
ಎಣ್ಣೆ, ಸಾಸಿವೆ, ಕರಿಬೇವು
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಕಾಯಿತುರಿ ಸ್ವಲ್ಪ / ಜಾಸ್ತಿ
ಇಂಗು ಚಿಟಿಕೆ.

ತಯಾರಿಸುವ ವಿಧಾನ:
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಒಂದು ಗಂಟೆ ನೆನೆಸಿ. ನಂತರ ಅದನ್ನು ಬಸಿದುಕೊಳ್ಳಿ , ನೀರಿನ ಅಂಶ ಇರದಂತೆ ಸೋಸಿ.
ಒಗ್ಗರಣೆ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಮೆಣಸಿನಕಾಯಿಗಳು,ಶುಂಠಿ ಮತ್ತು ಇಂಗು ಹಾಕಿ . ಒಂದು/ಎರಡು ನಿಮಿಷ ಬಾಡಿಸಿ. ಈ ಒಗ್ಗರಣೆಗೆ ನೆನೆಸಿದ ಹೆಸರುಬೇಳೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಕೊತ್ತುಂಬರಿ ಸೊಪ್ಪುಮತ್ತು ಕಾಯಿತುರಿಗಳನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ಕಲಸಿ. ಹೆಸರುಬೇಳೆ ಕೋಸುಂಬರಿ ತಯಾರಾಗುತ್ತದೆ. ಇದನ್ನು ಕೆಲವರು ಶ್ರೀ ರಾಮನವಮಿಗೆ ತಯಾರಿಸುತ್ತಾರೆ. ಇನ್ನು ಕೆಲವರು ಕಡಲೆಬೇಳೆ ಕೋಸುಂಬರಿ ಮಾಡುತ್ತಾರೆ. ಅವರವರ ಮನೆಯಲ್ಲಿ ನಡೆದು ಬಂದಂತೆ ತಯಾರಿಸಿಕೊಳ್ಳುತ್ತಾರೆ.ಇದು ಯಾವುದೇ ಊಟಕ್ಕಾದರೂ ಸೈಡ್ ಡಿಶ್ ತರಹ ಚೆನ್ನಾಗಿರುತ್ತದೆ.
* ಕೋಸುಂಬರಿಗಳಿಗೆ ಕಾಯಿತುರಿ ಹೆಚ್ಚಾಗಿ ಹಾಕಿ. ಚೆನ್ನಾಗಿರುತ್ತದೆ.
* ಹಬ್ಬ ಅಂತನೇ ಅಲ್ಲ ಇದನ್ನು ನಮ್ಮ ಊಟಕ್ಕೆ ನೆಂಚಿಕೊಳ್ಳಲು ಸಹ ತಯಾರಿಸಬಹುದು.

Thursday, September 11, 2008

BeetRoot Sabji/Palya - ಬೀಟ್ ರೂಟ್ ಪಲ್ಯ:

ಬೀಟ್ ರೂಟ್ ಪಲ್ಯ:

ಸಾಮಗ್ರಿಗಳು:

ಬೀಟ್ ರೂಟ್ ತುರಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ನಿಂಬೆರಸ
ಕಾಯಿತುರಿ
ಕೊತ್ತುಂಬರಿಸೊಪ್ಪು

ವಿಧಾನ:


ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಬೀಟ್ ರೂಟ್ ತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಸ್ವಲ್ಪ ಮಾತ್ರ ನೀರು ಚಿಮುಕಿಸಿ. ಈ ಪಲ್ಯವನ್ನು ಹೆಚ್ಚು ಬೇಯಿಸುವ ಅಗತ್ಯವಿಲ್ಲ, ಈ ರೀತಿ ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ, ಪಲ್ಯದಲ್ಲಿ ಸಹ ಸ್ವಲ್ಪ ಬೇಯಿಸಿದರೆ ಸಾಕು. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Saturday, August 16, 2008

Cucumber-Carrot salad / ಸೌತೆಕಾಯಿ ಮತ್ತು ಕ್ಯಾರೆಟ್ ಸಲಾಡ್:


ಸೌತೆಕಾಯಿ ಮತ್ತು ಕ್ಯಾರೆಟ್ ಸಲಾಡ್:

ಸೌತೆಕಾಯಿ ಮತ್ತು ಕ್ಯಾರೆಟ್ ಅನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಅದರ ಮೇಲೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಉದುರಿಸಿ.ಇದು ಸರಳವಾದ ಸಲಾಡ್.

Wednesday, August 13, 2008

ಸೌತೆಕಾಯಿ ಚಟ್ನಿ/ Cucumber chutney

ಸೌತೆಕಾಯಿ ಚಟ್ನಿ:

ಸಾಮಗ್ರಿಗಳು:

ಸೌತೆಕಾಯಿ - ಒಂದು
ಕಾಯಿತುರಿ - ಒಂದು ಬಟ್ಟಲು
ಹುರಿಗಡಲೆ ಸ್ವಲ್ಪ
ಹುಣಸೆಹಣ್ಣು ಚೂರು
ಕೊತ್ತುಂಬರಿಸೊಪ್ಪು
ಹಸಿರು/ಒಣಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ

ವಿಧಾನ:

ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಇಡಿ. ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಅದಕ್ಕೆ ಕಾಯಿತುರಿ,ಹುರಿಗಡಲೆ,ಹುಣಸೆಹಣ್ಣು,ಒಣ ಅಥವಾ ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ಹಾಕಿ,ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.

Tuesday, August 12, 2008

Black Eye Beans - ಹಲಸಂದೆಕಾಳು ಉಸಲಿ:

ಹಲಸಂದೆಕಾಳು ಉಸಲಿ:

ಸಾಮಗ್ರಿಗಳು:
ಹಲಸಂದೆಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ನಿಂಬೆರಸ ಸ್ವಲ್ಪ
ವಿಧಾನ:
ಹಲಸಂದೆಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ.ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ.

Sweet Dosa/dose/ ಬೆಲ್ಲದ ದೋಸೆ



ಬೆಲ್ಲದ ದೋಸೆ:

ಸಾಮಗ್ರಿಗಳು:

ಅಕ್ಕಿ - ಒಂದು ಕಪ್
ಬೆಲ್ಲ ರುಚಿಗೆ / ಒಂದು ಕಪ್
ಚಿಟಿಕೆ ಉಪ್ಪು
ಚಿಟಿಕೆ ಸೋಡ

ವಿಧಾನ;

ಅಕ್ಕಿಯನ್ನು ಮೂರ್ನಾಲ್ಕು ಗಂಟೆ ನೆನೆಸಿ, ಅದನ್ನು ಬೆಲ್ಲದೊಂದಿಗೆ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡ ಸೇರಿಸಿ, ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು, ಕಾಯಿಸಿ, ತುಪ್ಪ / ಎಣ್ಣೆ ಹಾಕಿ ಸವರಿ, ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ, ಬೇಯಿಸಿ , ತೆಗೆಯಿರಿ. ತುಪ್ಪ ಹಾಕಿ ತಿನ್ನಲು ಕೊಡಿ. ಇದು ತಿನ್ನಲು ಕಜ್ಜಾಯದ ತರಹ ರುಚಿಯಾಗಿರುತ್ತದೆ.
*ಕಾಯಿತುರಿ ಬೇಕಾದವರು ಅಕ್ಕಿ ರುಬ್ಬುವಾಗ ಅದರ ಜೊತೆ ಬೆರೆಸಿ,ರುಬ್ಬಿ.

Sunday, July 20, 2008

Sprouted Green gram Masala / Molake kaalina saaru


ಮೊಳಕೆ ಹೆಸರು ಕಾಳಿನ ಮಸಾಲೆ ಸಾರು:
ಬೇಕಾಗುವ ಸಾಮಗ್ರಿಗಳು:

ಹೆಸರು ಕಾಳು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ತೆಂಗಿನಕಾಯಿ ತುರಿ-ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಕೊತ್ತುಂಬರಿ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ, ಕ್ಯಾರೆಟ್, ಬದನೆಕಾಯಿ,ಹುರುಳಿಕಾಯಿ)
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಹೆಸರುಕಾಳನ್ನು ಹಿಂದಿನ ದಿನವೇ ಬೆಳಗ್ಗೆ ಚೆನ್ನಾಗಿ ತೊಳೆದು,ನಾಲ್ಕು- ಐದು ಗಂಟೆಗಳು ನೆನೆಸಿ,ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ).ಈಗ ಮೊಳಕೆ/ಮಡಿಕೆ ಕಾಳು ರೆಡಿ.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೆಣಸು,ಮೊಗ್ಗು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾಯಿ ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ತೆಂಗಿನಕಾಯಿ ತುರಿ,ಹುರಿಗಡಲೆ,ಗಸಗಸೆ,ಟಮೋಟೊ,ಅಚ್ಚಖಾರದ ಪುಡಿ ಮತ್ತು ಧನಿಯಾಪುಡಿ ಎಲ್ಲವನ್ನೂ ಸೇರಿಸಿ,ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಮೂರ್ನಾಕು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ. ತುಂಬಾ ಬೇಯಿಸದಿರಿ. ಕಾಳುಗಳು ಬೇಗ ಮೆತ್ತಗಾಗಿ ಕರಗುತ್ತದೆ,ನೋಡಿಕೊಂಡು ಬೇಯಿಸಿ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ,ಪೂರಿ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.


* ಉಪ್ಪು ಮತ್ತು ಕಾರವನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿಕೊಳ್ಳಿ. ಕಾಳುಗಳು ನಿಮಗೆ ಬೇಕಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ.
*ಕಾಳುಗಳನ್ನು ಮೊಳಕೆ ಬರಿಸಲು - strainerನಲ್ಲಿ ಕಾಳನ್ನು ಹಾಕಿ ಅದನ್ನು ಮುಚ್ಚಿಟ್ಟು, ಅದರ ಕೆಳಗೆ ಅದಕ್ಕೆ ಸರಿಯಾದ ಒಂದು ಪಾತ್ರೆಯನ್ನು ಇಟ್ಟರೆ ಕೂಡ ಚೆನ್ನಾಗಿ ಮೊಳಕೆ ಬರುತ್ತದೆ.
**ಮೊಳಕೆ ಕಾಳು, ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.

Upma / Uppittu- ಉಪ್ಪಿಟ್ಟು:


ಉಪ್ಪಿಟ್ಟು:
ಸಾಮಗ್ರಿಗಳು:

ರವೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೇ ಉಪ್ಪಿಟ್ಟನ್ನು ತಿನ್ನಬೇಕು ಇಲ್ಲವೆಂದರೆ ಹೆಸರಿಗೆ ತಕ್ಕಂತೆ ಕಾಂಕ್ರೀಟ್ ತರ ಗಟ್ಟಿಯಾಗುತ್ತದೆ.

Wednesday, July 16, 2008

ಕ್ಯಾರೆಟ್ ಮತ್ತು ಎಲೆಕೋಸು ಸಲಾಡ್:CarrotCabbageSalad


ಕ್ಯಾರೆಟ್ ಮತ್ತು ಎಲೆಕೋಸು ಸಲಾಡ್:


ಕ್ಯಾರೆಟ್ - ಒಂದು ಬಟ್ಟಲು
ಕ್ಯಾಬೇಜ್-ಒಂದು ಬಟ್ಟಲು
ಮಯನ್ನೈಸ್- ಎರಡು ದೊಡ್ಡ ಚಮಚ
ವಿನಿಗರ್-ಕಾಲು ಚಮಚ
ಮೆಣಸಿನಪುಡಿ
ಚಿಲ್ಲಿ ಸಾಸ್
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಕ್ಯಾರೆಟ್ ಮತ್ತು ಎಲೆಕೋಸು ತುರಿದುಕೊಳ್ಳಿ. ಅದಕ್ಕೆ ಮಯೊನ್ನೈಸ್(Mayonnaise),ಚಿಲ್ಲಿ ಸಾಸ್,ವಿನಿಗರ್,ಉಪ್ಪು ಮತ್ತು ಕಾಳುಮೆಣಸಿನಪುಡಿ,ಕೊತ್ತುಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಇದು ತುಂಬ ಟೇಸ್ಟೀ ಆಗಿರುತ್ತದೆ.

Friday, July 11, 2008

Sweet ShankaraPoli / ಸಿಹಿ ಶಂಕರ ಪೋಳಿ

ಸಿಹಿ ಶಂಕರ ಪೋಳಿ:

ಸಾಮಗ್ರಿಗಳು:
ಮೈದಾಹಿಟ್ಟು - ಒಂದು ಬಟ್ಟಲು
ಸಕ್ಕರೆ ಪುಡಿ ಎರಡು ದೊಡ್ಡ ಚಮಚ/ರುಚಿಗೆ
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಎಣ್ಣೆ ಕರಿಯಲು


ವಿಧಾನ:

ಮೈದಾ, ಸಕ್ಕರೆಪುಡಿ ಮತ್ತು ಡಾಲ್ಡ ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಹಿಟ್ಟಿನಿಂದ ಕಿತ್ತಳೆಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪಾತಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಆಮೇಲೆ ಅದನ್ನು ಚಾಕು ಅಥವಾ ಕಟ್ಟರ್ ನಿಂದ ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ತೆಗೆದು ಹಾಕಿ. ಬಾಣಲೆಗೆ ಎಷ್ಟು ಹಿಡಿಸುತ್ತದೋ ಅಷ್ಟು ಹಾಕಿ, ಅವೆಲ್ಲವೂ ಚೆನ್ನಾಗಿ ಬೆಂದು ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ತೆಳು ಕಂದು ಬಣ್ಣ ಬಂದ ನಂತರ ಬೇಗ ಎಲ್ಲವನ್ನು ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಎಷ್ಟು ದಿನ ಬೇಕಾದರೂ ಇಡಬಹುದು.ಸ್ವಲ್ಪ ಸಿಹಿ ಬಿಸ್ಕತ್ ತರಹ ಬರುವುದರಿಂದ ರುಚಿ ಚೆನ್ನಾಗಿರುತ್ತದೆ, ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Monday, June 30, 2008

Carrot Salad / Gajjari kosumbari

ಕ್ಯಾರೆಟ್ ಕೋಸುಂಬರಿ:

ಸಾಮಗ್ರಿಗಳು:

ಕ್ಯಾರೆಟ್ ತುರಿದಿದ್ದು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಯಿತುರಿ ಬೇಕಾದರೆ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ಕ್ಯಾರೆಟ್ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ.

Thursday, June 19, 2008

Vegetable Curry/Saagu - ತರಕಾರಿ ಸಾಗು:


ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು,ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ಼್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು,ಹೆಚ್ಚಿದ ತರಕಾರಿಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ,ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ,ಚೆನ್ನಾಗಿ ತಿರುಗಿಸಿ,ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ,ಗರಂಮಸಾಲ ಸಹ ಹಾಕಿ ತಿರುಗಿಸಿ.ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು.ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ. ಇದನ್ನು ಚಪಾತಿ,ಪೂರಿ,ಪರೋಟ ಮತ್ತು ದೋಸೆಯೊಂದಿಗೆ ಸಹ ತಿನ್ನಬಹುದು. ಅನ್ನಕ್ಕು ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಗೆ ಸಾಗು ಅನ್ನ ಇಷ್ಟವಾಗುತ್ತದೆ. ಯಾವುದಕ್ಕಾದರೂ ಸರಿ ಇಲ್ಲವೆಂದರೆ ಊಟಕ್ಕೂ ಕೂಡ ನೆಂಚಿಕೊಳ್ಳಬಹುದು.

*ಎಲ್ಲಾ ತರಕಾರಿಗಳು ಬೇಕೇಬೇಕು ಅಂತ ಏನು ಇಲ್ಲ. ಕೆಲವು ನಿಮಗೆ ಬೇಕೆನಿಸಿದಂತೆ ಹಾಕಿಕೊಳ್ಳಬಹುದು.

Sunday, June 15, 2008

ಕಡ್ಲೆಕಾಳು ಹುಳಿ / Sprouted Channa Masala Curry


ಕಡ್ಲೆಕಾಳಿನ ಮಸಾಲೆ ಸಾರು/ ಕಡ್ಲೆಕಾಳು ಹುಳಿ:

ಬೇಕಾಗುವ ಸಾಮಗ್ರಿಗಳು:

ಕಪ್ಪು / ಕೆಂಪು ಕಡಲೆಕಾಳು- ಒಂದು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ,ಬದನೆಕಾಯಿ,ಹೂಕೋಸು)
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕಡಲೆಕಾಳನ್ನು ಚೆನ್ನಾಗಿ ತೊಳೆದು,ಹಿಂದಿನ ರಾತ್ರಿ ನೆನೆಸಿ,ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.
*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ.ಕಡ್ಲೆಕಾಳು ಹುಳಿ ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಮಕ್ಕಳಿಗೆ ಈ ಕಡ್ಲೆಕಾಳು ಸಾರು ತುಂಬಾ ಇಷ್ಟವಾಗುತ್ತದೆ.

Saturday, June 14, 2008

CabbageBeansBassaaru-ಕೋಸು-ಬೀನ್ಸ್ ಬಸ್ಸಾರು ಮತ್ತು ಪಲ್ಯ:

ಕೋಸು-ಬೀನ್ಸ್ ಬಸ್ಸಾರು ಮತ್ತು ಪಲ್ಯ:
ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ತೊಗರಿಬೇಳೆ -ಎರಡು ಕಪ್
ಹುರುಳಿಕಾಯಿ/ಬೀನ್ಸ್
ಎಲೆಕೋಸು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಸಿನದಪುಡಿ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕಾಯಿತುರಿ/ಕೊಬ್ರಿತುರಿ ಸ್ವಲ್ಪ-ಎರಡು ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ
ತಯಾರಿಸುವವಿಧಾನ:

ಮೊದಲು ಹುರುಳಿಕಾಯಿ ಮತ್ತು ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ತೊಗರೆಬೇಳೆಯನ್ನು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಬೇಳೆ ಬೇಯಲು ಬಿಡಿ.ಬೇಳೆ ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ತರಕಾರಿ ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ತರಕಾರಿ ಬೇಯುವವರೆಗೂ ಬೇಯಿಸಿ,ಬೇಳೆ ಕರಗದಂತೆ ಬೇಯಿಸಿಕೊಳ್ಳಿ.ತುಂಬಾ ನುಣ್ಣಗೆ ಬೇಯಿಸಬೇಡಿ,ನಂತರ ಬೇಳೆ ಮತ್ತು ತರಕಾರಿ ಮಿಶ್ರಣವನ್ನು ಜಾಲರಿಯಲ್ಲಿ (ಕೊಲಾಂಡರ್/ಸ್ಟ್ರೈನರ್) ಸೋಸಿಕೊಂಡು,ಸಾರಿನ ಕಟ್ಟು ಮತ್ತು ತರಕಾರಿ ಬೇಳೆ ಮಿಶ್ರಣವನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.
ಸಾರಿಗೆ ರುಬ್ಬಿಕೊಳ್ಳಲು:
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಬೇಳೆ ಮತ್ತು ತರಕಾರಿ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ,ಜೀರಿಗೆ,ಅಚ್ಚಖಾರದಪುಡಿ,ಮೆಣಸು,ಸಾರಿನಪುಡಿ,ಹುಣಸೆಹಣ್ಣು,ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ,ನುಣ್ಣಗೆ ರುಬ್ಬಿಕೊಳ್ಳಿ.
ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ ಮತ್ತು ಜೀರಿಗೆ ಹಾಕಿ,ಕರಿಬೇವು,ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ,ಬಸಿದಿಟ್ಟುಕೊಂಡ ಸಾರಿನಕಟ್ಟನ್ನು ಹಾಕಿ,ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ.'ಬಸ್ಸಾರು' ತಯಾರು.
ಈಗ ಬೇಳೆ-ತರಕಾರಿ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ,ಸಾಸಿವೆ,ಕರಿಬೇವು,ಜಜ್ಜಿದ ಬೆಳ್ಳುಳ್ಳಿ,ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ತರಕಾರಿ-ಬೇಳೆ ಮಿಶ್ರಣವನ್ನು ಹಾಕಿ,ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. 'ಪಲ್ಯ' ತಯಾರು.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
* ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
* ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
* ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
* ಜಾಲರಿ ಎಂದರೆ colander / strainer ಇದನ್ನು ಉಪಯೋಗಿಸಿ ಕಟ್ಟು ಬಸಿದುಕೊಳ್ಳಿ.
* ಬಸ್ಸಾರು ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ಬಸ್ಸಾರುಗಳಿಗೆ ಸಾಮಾನ್ಯವಾಗಿ ರಾಗಿಮುದ್ದೆ ಇದ್ದೇಇರುತ್ತದೆ.

Thursday, June 12, 2008

Curd raita / mosaru bajji

ಮೊಸರು ಬಜ್ಜಿ / ರಾಯತ:

ಮೊಸರು ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಟಮೋಟೋ ಹೆಚ್ಚಿದ್ದು
ಸೌತೆಕಾಯಿ ತುರಿ ಸ್ವಲ್ಪ
ಹಸಿಮೆಣಸಿನಕಾಯಿ ಒಂದು, ಸೀಳಿದ್ದು
ಹೆಚ್ಚಿದ ಕೊತ್ತುಂಬರಿ ಮತ್ತು ಪುದೀನ ಸೊಪ್ಪು
ಉಪ್ಪು

ತಯಾರಿಸುವ ವಿಧಾನ:

ಇವೆಲ್ಲವನ್ನೂ ಗಟ್ಟಿಯಾದ ಮೊಸರಿನೊಂದಿಗೆ ಬೆರೆಸಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪಲಾವ್ /ಬಾತ್ ಅಥವಾ ಯಾವ ಊಟಕ್ಕಾದರೂ ಸೈಡ್ ಡಿಶ್ ಆಗಿ ಸರ್ವ್ ಮಾಡಿ.

Tuesday, May 27, 2008

Sambar - ಸಾಂಬಾರ್ / ಇಡ್ಲಿ ಸಾಂಬಾರ್-Idli Sambar


ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ. ಕೆಲವು ಸಾರಿ ಇಡ್ಲಿ - ಸಾಂಬಾರ್ ಜೊತೆ ರುಚಿ ಎನಿಸಿದರೆ, ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ, ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು,
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಿ, ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ, (ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ, ಹೆಚ್ಚಿದ ಪಾಲಕ್ ಎಲೆಗಳು, ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ, ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ, ಕುದಿಯುವಾಗ ಹುಣಸೇಹಣ್ಣಿನ ರಸ, ಬೆಲ್ಲ ಮತ್ತು ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ , ಇಳಿಸಿ. ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ, ಜೀರಿಗೆ,ಇಂಗು, ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ, ಹೇಗೆ ಹಾಕಲಿ, ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.

Friday, May 16, 2008

Radish Tomato Salad/ಮೂಲಂಗಿ ಟಮೋಟ ಸಲಾಡ್

ಮೂಲಂಗಿ ಟಮೋಟ ಸಲಾಡ್:


ಮೂಲಂಗಿ
ಟಮೋಟ
ಸೌತೆಕಾಯಿ
ಈರುಳ್ಳಿ
ಕ್ಯಾರೆಟ್ ತುರಿ
ಕಾಯಿತುರಿ (ಬೇಕಾದರೆ)
ಕಾರದ ಪುಡಿ
ನಿಂಬೆರಸ
ಕಾಲು ಟೀ ಚಮಚ ವಿನಿಗರ್
ಕೊತ್ತುಂಬರಿಸೊಪ್ಪು
ಉಪ್ಪು

ಹೆಚ್ಚಿದ ಟಮೋಟ,ಹೆಚ್ಚಿದ ಮೂಲಂಗಿ,ಹೆಚ್ಚಿದ ಈರುಳ್ಳಿ,ಸೌತೆಕಾಯಿ ಹೆಚ್ಚಿದ್ದು,ಕಾರದಪುಡಿ,ನಿಂಬೆರಸ,ಕಾಲು ಟೀ ಚಮಚ ವಿನಿಗರ್,ಕಾಯಿತುರಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಎಲ್ಲಾ ಬೆರೆಸಿ.ಸಲಾಡ್ ರೆಡಿ.

Wednesday, May 14, 2008

Masala Papad /happala - ಮಸಾಲೆ ಹಪ್ಪಳ


ಮಸಾಲೆ ಹಪ್ಪಳ:
ಹಪ್ಪಳ
ಹೆಚ್ಚಿದ ಈರುಳ್ಳಿ
ಕಾಯಿತುರಿ
ಕಾರದ ಪುಡಿ
ಉಪ್ಪು
ಹಸಿಮೆಣಸಿನಕಾಯಿ (ಬೇಕಾದರೆ)
ಕೊತ್ತುಂಬರಿ ಸೊಪ್ಪು

ವಿಧಾನ:
ಹಪ್ಪಳವನ್ನು ಎಣ್ಣೆಯಲ್ಲಿ ಕರೆದಿಟ್ಟುಕೊಂಡು ಅದರ ಮೇಲೆ ಹೆಚ್ಚಿದ ಈರುಳ್ಳಿ, ಕಾಯಿತುರಿ, ಕಾರದಪುಡಿ ಮತ್ತು ಉಪ್ಪು ಉದುರಿಸಿ. ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ, ಚಾಟ್ ಮಸಾಲಾ ಸಿಂಪಡಿಸಿ, ತಕ್ಷಣ ತಿನ್ನಲು ಕೊಡಿ , ಹಪ್ಪಳ ಬೇಗ ಮೆತ್ತಗೆ ಆಗುತ್ತದೆ.
* ಮೊಳಕೆ ಹೆಸರುಕಾಳು ಇದ್ದರೆ ಅದನ್ನು ಸೇರಿಸಿದರೆ, ಇನ್ನೂ ರುಚಿ ಹೆಚ್ಚುತ್ತದೆ.
* ಮಸಾಲೆ ಹಾಕಿದ ಮೇಲೆ ನಿಂಬೆರಸ ಸಹ ಹಿಂಡಬಹುದು.

Tuesday, May 13, 2008

Butter Chakli / ಬೆಣ್ಣೆ ಚಕ್ಕುಲಿ

ಬೆಣ್ಣೆ ಚಕ್ಕುಲಿ:
ಬೇಕಾಗುವ ಸಾಮಗ್ರಿಗಳು:

ಬೆಣ್ಣೆ - ಒಂದು ಬಟ್ಟಲು
ಅಕ್ಕಿಹಿಟ್ಟು- ಒಂದು ಬಟ್ಟಲು
ಕಡ್ಲೆಹಿಟ್ಟು - ಒಂದು ಬಟ್ಟಲು
ಹುರಿಗಡಲೆ ಹಿಟ್ಟು - ಒಂದು ಬಟ್ಟಲು
ಮೈದಾಹಿಟ್ಟು - ಒಂದು ಬಟ್ಟಲು
ಅಚ್ಚಕಾರದ ಪುಡಿ - ಎರಡು ಚಮಚ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆ
ಚಿಟಿಕೆ ಅಡಿಗೆಸೋಡ
ಎಳ್ಳು ಸ್ವಲ್ಪ
ಉಪ್ಪು ರುಚಿಗೆ
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

ಅಕ್ಕಿಹಿಟ್ಟು,ಕಡ್ಲೆಹಿಟ್ಟು,ಮೈದಾಹಿಟ್ಟು,ಹುರಿಗಡಲೆಹಿಟ್ಟು,ಕಾರದಪುಡಿ,ಜೀರಿಗೆ,ಎಳ್ಳು,ಇಂಗು,ಉಪ್ಪು ಎಲ್ಲಾ ಚೆನ್ನಾಗಿ ಬೆರೆಸಿ, ಅದಕ್ಕೆ ಬೆಣ್ಣೆಯನ್ನು ಮತ್ತು ನೀರನ್ನು ಹಾಕಿ ಕಲೆಸಿ, ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಿರಲಿ. ಚೆನ್ನಾಗಿ ನಾದಿ,ಹದವಾಗಿ ಕಲೆಸಿ.ಚಕ್ಕುಲಿಯ ಒರಳಿಗೆ ಹಿಟ್ಟನ್ನು ತುಂಬಿ ಚಕ್ಕುಲಿಯನ್ನು ತಯಾರಿಸಿ.ಕಾದ ಎಣ್ಣೆಗೆ ಒಂದೊಂದಾಗಿ ಹಾಕಿ,ಮಧ್ಯ ಉರಿಯಲ್ಲಿಡಿ, ಎಣ್ಣೆ ಚೆನ್ನಾಗಿ ಕಾದಿರಬೇಕು. ಸ್ವಲ್ಪ ಬೆಂದ ನಂತರ ತಿರುವಿ ಹಾಕಿ, ಎರಡು ಕಡೆ ಬೇಯಿಸಿ. ಚಕ್ಕುಲಿಯ ಬಣ್ಣ ಬಂದ ತಕ್ಷಣ ತೆಗೆಯಿರಿ. ತಣ್ಣಗಾಗಲು ಬಿಟ್ಟು ,ಆಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿ,ಯಾವ ಕಾಲದಲ್ಲಿಯಾದರೂ ಚಕ್ಕುಲಿ ರುಚಿ ಚೆನ್ನ.

Friday, May 9, 2008

Menasinakaayi Bajji-ಮೆಣಸಿನಕಾಯಿ ಬಜ್ಜಿ:


ಮೆಣಸಿನಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:

ಮೆಣಸಿನ ಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಓಮಕಾಳು - ಕಾಲು ಚಮಚ
ಚಿಟಿಕೆ ಸೋಡ
ಅಚ್ಚಖಾರದ ಪುಡಿ
ಉಪ್ಪು
ಕಾದ ಎಣ್ಣೆ - ಒಂದು ಚಮಚ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:


* ಮೆಣಸಿನಕಾಯಿಗಳನ್ನು ಮಧ್ಯಕ್ಕೆ ಸೀಳಿ ಅಥವಾ ತುದಿಯನ್ನು ಕತ್ತರಿಸಿ. ಮೆಣಸಿನಕಾಯಿಯನ್ನು ಹಿಡಿಯಾಗಿ ಹಿಟ್ಟಿನಲ್ಲಿ ಎದ್ದಿ ಎಣ್ಣೆಯಲ್ಲಿ ಹಾಕಿದಾಗ ಅದು ಸಿಡಿಯುತ್ತದೆ, ಅದಕ್ಕಾಗಿ ಸ್ವಲ್ಪ ಮಧ್ಯಕ್ಕೆ ಕತ್ತರಿಸಿ.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮಕಾಳು,ಉಪ್ಪು,ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ,ಅದಕ್ಕೆ ಕಾದಿರುವ ಎಣ್ಣೆ ಹಾಕಿ,ಜೊತೆಯಲ್ಲಿ ನೀರು ಹಾಕಿ,ಕಲೆಸಿಕೊಳ್ಳಿ,ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು,ಅದು ಕಾದ ನಂತರ ಹೆಚ್ಚಿರುವ ಮೆಣಸಿನಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ,ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ,ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಮೆಣಸಿನಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು.
ಊಟದೊಂದಿಗೆ ನೆಂಚಿಕೊಳ್ಳಲು /ಕಾಫಿ,ಟೀ ಜೊತೆಗೆ/ಬಿಸಿಬೇಳೆ ಬಾತ್ ಗೆ ಒಳ್ಳೆಯ ಕಾಂಬಿನೇಷನ್.

Sunday, April 27, 2008

Greengram Bassaru-ಹೆಸರುಕಾಳು ತರಕಾರಿ ಬಸ್ಸಾರು ಮತ್ತು ಪಲ್ಯ



ಹೆಸರುಕಾಳು ತರಕಾರಿ ಬಸ್ಸಾರು ಮತ್ತು ಪಲ್ಯ

ಸಾರಿಗೆ ಬೇಕಾಗುವ ಸಾಮಾಗ್ರಿಗಳು:


ಹೆಸರುಕಾಳು -ಎರಡು ಕಪ್
ಹುರುಳಿಕಾಯಿ/ಬೀನ್ಸ್
ಎಲೆಕೋಸು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಕಾಳು -ಐದಾರು
ಅರಿಸಿನದಪುಡಿ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕಾಯಿತುರಿ/ಕೊಬ್ರಿತುರಿ ಸ್ವಲ್ಪ-ಎರಡು ಚಮಚ
ಹುಣಸೆಹಣ್ಣು ಅಥವಾ ಹುಣಸೆರಸ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ

ತಯಾರಿಸುವವಿಧಾನ:
ಮೊದಲು ಹುರುಳಿಕಾಯಿ ಮತ್ತು ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ಹೆಸರುಕಾಳು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳನ್ನು ಬೇಯಿಸಿ, ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ತರಕಾರಿ ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ತರಕಾರಿ ಬೇಯುವವರೆಗೂ ಬೇಯಿಸಿ, ಕಾಳು ಕರಗದಂತೆ ಬೇಯಿಸಿಕೊಳ್ಳಿ.ತುಂಬಾ ನುಣ್ಣಗೆ ಬೇಯಿಸಬೇಡಿ, ನಂತರ ಕಾಳು ಮತ್ತು ತರಕಾರಿ ಮಿಶ್ರಣವನ್ನು ಜಾಲರಿಯಲ್ಲಿ (ಕೊಲಾಂಡರ್/ಸ್ಟ್ರೈನರ್) ಸೋಸಿಕೊಂಡು,ಸಾರಿನ ಕಟ್ಟು ಮತ್ತು ತರಕಾರಿ ಕಾಳು ಮಿಶ್ರಣವನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆಎರಡು ಚಮಚ ಬೇಯಿಸಿ ಬಸಿದ ಕಾಳು-ತರಕಾರಿ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಕಾಳುತರಕಾರಿ ಮಿಶ್ರಣದ ಸಾರಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಬಸ್ಸಾರು ತಯಾರು.

ಈಗ ಕಾಳು-ತರಕಾರಿ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ತರಕಾರಿ-ಕಾಳು ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಪಲ್ಯ ತಯಾರು.

* ಹುಣಸೇಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೇರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ, ಕುದಿಸಿ, ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
* ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು, ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
* ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
* ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
* ಜಾಲರಿ ಎಂದರೆ colander / strainer ಇದನ್ನು ಉಪಯೋಗಿಸಿ ಕಟ್ಟು ಬಸಿದುಕೊಳ್ಳಿ.
* ಬಸ್ಸಾರು ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ಬಸ್ಸಾರುಗಳಿಗೆ ಸಾಮಾನ್ಯವಾಗಿ ರಾಗಿಮುದ್ದೆ ಇದ್ದೇಇರುತ್ತದೆ.

Thursday, April 17, 2008

GreenChillies Paste - ಹಸಿಮೆಣಸಿನಕಾಯಿಕಾರ

ಹಸಿಮೆಣಸಿನಕಾರ ತಯಾರಿಸಲು-

ಸಾಮಗ್ರಿಗಳು:

ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಉಪ್ಪು
ವಿನಿಗರ್ ಒಂದು ಚಮಚ

ವಿಧಾನ:

ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ವಿನಿಗರ್ ಮತ್ತು ಉಪ್ಪು ರುಬ್ಬಿಕೊಳ್ಳಿ.
ಇದನ್ನು ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಫ್ರಿಡ್ಜ್ ನಲ್ಲಿ ಕೆಲವು ದಿನ ಕೆಡದೆ ಇರುತ್ತದೆ.

Tuesday, April 15, 2008

KempuDantuSoppina Palya - ದಂಟುಸೊಪ್ಪಿನ ಪಲ್ಯ:


ದಂಟುಸೊಪ್ಪಿನ ಪಲ್ಯ:
ಸಾಮಾನುಗಳು:
ದಂಟಿನ ಸೊಪ್ಪು
ಹೆಚ್ಚಿದ ಈರುಳ್ಳಿ
ಜಜ್ಜಿದ ಬೆಳ್ಳುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಕಡ್ಲೆಬೇಳೆ
ಉದ್ದಿನಬೇಳೆ
ಸಾಸಿವೆ
ಜೀರಿಗೆ
ಎಣ್ಣೆ
ಉಪ್ಪು ರುಚಿಗೆ
ಕಾಯಿತುರಿ
ಕೊತ್ತುಂಬರಿಸೊಪ್ಪು

ವಿಧಾನ:
ಸೊಪ್ಪನ್ನು ಚೆನ್ನಾಗಿ ಶುಚಿಗೊಳಿಸಿ, ತೊಳೆದು, ಸಣ್ಣಗೆ ಹೆಚ್ಚಿ ತಯಾರು ಮಾಡಿಟ್ಟುಕೊಳ್ಳಿ.
ಒಗ್ಗರಣೆಗೆ -
ಎಣ್ಣೆಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಜಜ್ಜಿದ ಬೆಳ್ಳುಳ್ಳಿ,ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ಸೊಪ್ಪನ್ನು ಹಾಕಿ,ಚೆನ್ನಾಗಿ ಬೆರೆಸಿ.ಉಪ್ಪು ಸ್ವಲ್ಪ ಹಾಕಿ,ಒಂದೆರಡು ಚಮಚ ನೀರು ಸೇರಿಸಿ,ಮುಚ್ಚಳ ಮುಚ್ಚಿ,ಬೇಯಿಸಿ. ಸೊಪ್ಪಿನಲ್ಲಿರುವ ನೀರಿನ ಅಂಶ ಮತ್ತು ಆವಿಯಲ್ಲಿ ಬರುವ ನೀರಿನಿಂದಲೇ ಸೊಪ್ಪು ಬೇಯುತ್ತದೆ,ಸ್ವಲ್ಪ ಬೇಯಿಸಿದರೆ ಸಾಕು. ಕೆಳಗಿಳಿಸಿ ಕೊತ್ತುಂಬರಿ ಸೊಪ್ಪು ಹಾಗೂ ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ದಂಟಿನಸೊಪ್ಪಿನ ಪಲ್ಯ ತಯಾರು.

*ಸೊಪ್ಪುಗಳು ಬೇಯಲು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ.
*ಅದನ್ನು ತುಂಬಾ ಬೇಯಿಸಬಾರದು, ಆಗ ಎಲ್ಲಾ ಪೌಷ್ಠಿಕಾಂಶಗಳು ಹಾಳಾಗುತ್ತವೆ.
* ಸೊಪ್ಪಿನ ಪಲ್ಯವನ್ನು ಯಾವುದಕ್ಕೆ ಬೇಕಾದರೂ ನೆಂಜಿಕೊಳ್ಳಲು ಕೊಡಬಹುದು.

Monday, April 14, 2008

Jeera Pani - ಜೀರಿಗೆ ಶರಬತ್ತು/ಜೀರಿಗೆ ಪಾನೀಯ

ಜೀರಿಗೆ ಶರಬತ್ತು:

ಜೀರಿಗೆ - ಎರಡು ಚಮಚ
ಒಣಮೆಣಸಿನಕಾಯಿ -ಒಂದೆರಡು
ಪುದೀನ ಸೊಪ್ಪು ಸ್ವಲ್ಪ
ಸಕ್ಕರೆ - ಒಂದು ಚಮಚ
ನಿಂಬೆರಸ - ಒಂದು ಚಮಚ /ರುಚಿಗೆ
ಉಪ್ಪು -ರುಚಿಗೆ

ವಿಧಾನ:

ಜೀರಿಗೆಯನ್ನು ಎಣ್ಣೆ ಹಾಕದೇ ಆಗೇ ಸ್ವಲ್ಪ ಕಂದು ಬಣ್ಣ ಬರುವಂತೆ ಹುರಿದುಕೊಂಡು,ಸ್ವಲ್ಪ ಕುಟ್ಟಿಕೊಳ್ಳಿ. ಒಂದು ಪಾತ್ರೆಗೆ ನೀರು ಹಾಕಿ ಅದರಲ್ಲಿ ಈ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಮೆಣಸಿನಕಾಯಿ, ಪುದೀನ,ಸಕ್ಕರೆ ಮತ್ತು ಉಪ್ಪು ಹಾಕಿ ಬೆರೆಸಿ. ಹತ್ತು / ಹದಿನೈದು ನಿಮಿಷಗಳವರೆಗೆ ಕುದಿಸಿ. ನಿಂಬೆರಸ ಸೇರಿಸಿ ಇಳಿಸಿ. ತಣ್ಣಗಾದ ಮೇಲೆ ಸೋಸಿಟ್ಟರೆ ಜೀರಿಗೆ ಶರಬತ್ತು ತಯಾರಾಗುತ್ತದೆ.
* ಇದನ್ನು ಊಟಕ್ಕೆ ಮುಂಚೆ ಕುಡಿದರೆ ಒಳ್ಳೆಯದು ಅಥವಾ ಊಟ ಮಾಡುವಾಗಲೂ ಸೇವಿಸಬಹುದು.

Sunday, April 13, 2008

ಮೊಸರನ್ನ / Mosaranna/Curd Rice


ಮೊಸರನ್ನ:
ಅನ್ನ - ಒಂದು ಬಟ್ಟಲು
ಮೊಸರು ಬೇಕಾಗುವಷ್ಟು
ಎಣ್ಣೆ, ಸಾಸಿವೆ, ಜೀರಿಗೆ
ಕಡ್ಲೆಬೇಳೆ, ಉದ್ದಿನಬೇಳೆ
ಕರಿಬೇವು, ಇಂಗು
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಹಸಿ ಶುಂಠಿ ತುರಿದಿದ್ದು ಸ್ವಲ್ಪ
ಉಪ್ಪು ರುಚಿಗೆ, ಸ್ವಲ್ಪ ಹಾಲು
ಕೊತ್ತುಂಬರಿಸೊಪ್ಪು
ಬಿಳಿ ದ್ರಾಕ್ಷಿ ಮತ್ತು ದಾಳಿಂಬೆಕಾಳುಗಳು
ಗೋಡಂಬಿ ಹುರಿದಿದ್ದು

ತಯಾರಿಸುವ ವಿಧಾನ:
ಮೊದಲು ಒಂದೆರಡು ಚಮಚ ಎಣ್ಣೆಯನ್ನು ಪ್ಯಾನ್ ನಲ್ಲಿ ಬಿಸಿ ಮಾಡಿ,ಅದಕ್ಕೆ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು,ಇಂಗು, ಹಸಿಮೆಣಸಿನಕಾಯಿ,ಒಣಮೆಣಸಿನಕಾಯಿ,ಹಸಿ ಶುಂಠಿ ತುರಿದಿದ್ದು ಸ್ವಲ್ಪ ಹಾಕಿ ಎಲ್ಲವನ್ನು ಒಂದೆರಡು ನಿಮಿಷ ಹುರಿಯಿರಿ.ಇಳಿಸಿ .ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಒಗ್ಗರಣೆಗೆ.
ನಂತರ ತಣ್ಣಗಾಗಿರುವ ಅನ್ನಕ್ಕೆ ಮೊಸರು ಮತ್ತು ಹಾಲು ಹಾಗೂ ಈ ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಕಲೆಸಿ,ಉಪ್ಪು ನೋಡಿ ಮತ್ತೆ ಹಾಕಿಕೊಂಡು ಬೆರೆಸಿ. ದಾಳಿಂಬೆಕಾಳುಗಳು ಮತ್ತು ದ್ರಾಕ್ಷಿಯನ್ನು ಹಾಕಿ ಬೆರೆಸಿ.ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.ತುಪ್ಪದಲ್ಲಿ ಕರಿದ ಗೋಡಂಬಿಗಳನ್ನು ಹಾಕಿ.ರುಚಿ ಹೆಚ್ಚುತ್ತದೆ. ರುಚಿಕರವಾದ,ತಂಪಾದ ಮೊಸರನ್ನ ತಿನ್ನಲು ತಯಾರಾಗುತ್ತದೆ.
* ಯಾವಾಗಲೂ ಮೊಸರನ್ನವನ್ನು ಸ್ವಲ್ಪ ತೆಳುವಾಗಿಯೇ ಕಲೆಸಿಡ ಬೇಕು. ಅದು ಸ್ವಲ್ಪ ಹೊತ್ತಿನಲ್ಲಿಯೇ ಗಟ್ಟಿಯಾಗುತ್ತದೆ. ಅದಕ್ಕೆ ಸ್ವಲ್ಪ ಹಾಲು ಕೂಡ ಹಾಕಿರುವುದು. ಹಾಲು ಹಾಕಿದರೆ ಮೊಸರನ್ನ ಬೇಗ ಹುಳಿ ಬರುವುದಿಲ್ಲ.
* ದ್ರಾಕ್ಷಿಗಳು ತುಂಬಾ ದಪ್ಪವಿದ್ದರೆ ಅರ್ಧಕ್ಕೆ ಕತ್ತರಿಸಿ ಹಾಕಿ.
* ಉಪ್ಪು ಮತು ಕಾರ ನಿಮ್ಮ ರುಚಿಗೆ ತಕ್ಕಂತೆ ಹಾಕಿ.

ಪಾಲಕ್ ಸೊಪ್ಪಿನ ಚಪಾತಿ/ಪರೋಟ - Green paratha

ಪಾಲಕ್ ಸೊಪ್ಪಿನ ಪರೋಟ :

ಸಾಮಗ್ರಿಗಳು:

ಗೋಧಿಹಿಟ್ಟು
ಪಾಲಕ್ ಸೊಪ್ಪು
ಹಸಿಮೆಣಸಿನಕಾಯಿ - ಒಂದೆರಡು
ಜೀರಿಗೆ ಸ್ವಲ್ಪ
ಶುಂಠಿ ಸ್ವಲ್ಪ
ಸ್ವಲ್ಪ ಹಾಲು
ಸಕ್ಕರೆ- ಒಂದು ಚಮಚ
ಎಣ್ಣೆ- ಎರಡು ಚಮಚ
ಉಪ್ಪು

ವಿಧಾನ:

ಪಾಲಕ್ ಸೊಪ್ಪನ್ನು ಶುಚಿಗೊಳಿಸಿ,ಚೆನ್ನಾಗಿ ತೊಳೆದು,ಅದರ ಜೊತೆ ಹಸಿಮೆಣಸಿನಕಾಯಿ,ಜೀರಿಗೆ,ಶುಂಠಿ ಸೇರಿಸಿ,ಪೇಸ್ಟ್ ತರಹ ಮಾಡಿಕೊಳ್ಳಿ. ಈ ಮಿಶ್ರಣವನ್ನು ಗೋಧಿಹಿಟ್ಟಿಗೆ ಹಾಕಿ,ಅದರ ಜೊತೆ ಉಪ್ಪು,ಸಕ್ಕರೆ ,ಎಣ್ಣೆ ಹಾಕಿ ಬೆರೆಸಿ,ಅದಕ್ಕೆ ಹಾಲು ಮತ್ತು ಬೇಕಾಗುವಷ್ಟು ಮಾತ್ರ ನೀರನ್ನು ಹಾಕಿಕೊಂಡು ಕಲೆಸಿ. ಅರ್ಧ/ ಒಂದು ಗಂಟೆ ಬಿಟ್ಟು ಚಪಾತಿ ಲಟ್ಟಿಸಿ. ಕಾದ ತವಾ ಮೇಲೆ ಬೇಯಿಸಿ, ಎರಡು ಬದಿಯೂ ಎಣ್ಣೆ ಹಾಕಿ. ಇದು ಎಲ್ಲಾ ತರಹದ ಗೊಜ್ಜು, ಸಾರು,ಚಟ್ನಿ ಮತ್ತು ಪಲ್ಯ ಎಲ್ಲಕ್ಕೂ ಸೇರಿಸಿಕೊಂಡು ತಿನ್ನಲು ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಹಿತಕರ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

* ನೀರು ನೋಡಿ ಹಾಕಿಕೊಳ್ಳಿ,ಏಕೆಂದರೆ ಪೇಸ್ಟ್,ಹಾಲು ಇರುವುದರಿಂದ. ಸ್ವಲ್ಪ ಮಾತ್ರ ನೀರು ಬೇಕಾಗುತ್ತದೆ ಅಥವಾ ಅಷ್ಟೇ ಸಾಕಾಗಬಹುದು.
* ಮಾಮುಲಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ.

Friday, March 14, 2008

ಕರಬೂಜ ಹಣ್ಣಿನ ಪಾನಕ/Musk Melon sharabath

ಪಾನಕ ಅಂದ ತಕ್ಷಣ ನೆನಪಿಗೆ ಬರುವುದೇ ನಮ್ಮ ಹಬ್ಬ ’ರಾಮನವಮಿಯ ಪಾನಕ’. ಅವತ್ತಿನ ದಿನ ಮಾಡಿದ ಪಾನಕದ ರುಚಿಯೇ ಒಂಥರ! ರಾಮನವಮಿಗೆ ಪಾನಕ ಕೋಸುಂಬರಿಗಳು ಸರ್ವೇಸಾಮಾನ್ಯ. ನಮ್ಮ ಅಜ್ಜಿ ಮತ್ತು ಅಮ್ಮ ಎಲ್ಲಾ ಮಾಡುತ್ತಿದ್ದಂತ ಪಾನಕ, ಆಗ ನಾವು ಚಿಕ್ಕವರಿದ್ದಾಗ ಅದೇನು ರುಚಿ ಇರುತ್ತಿತ್ತು. ಬಹಳ ಸೊಗಸಾಗಿರುತ್ತಿತ್ತು ಪಾನಕ.ಅವತ್ತಿನ ದಿನವೆಲ್ಲಾ ಪಾನಕವನ್ನು ಕುಡಿಯುವುದೇ ಒಂದು ಕೆಲಸ. ಅವತ್ತು ಮನೆಯೆಲ್ಲಾ ಪಾನಕದ್ದೆ ಸುವಾಸನೆ, ಶುಂಠಿ-ಮೆಣಸಿನ ಪರಿಮಳ ತುಂಬಿರುತ್ತಿತ್ತು.ಅದೇನೋ ನಾವು ಅದೇ ರೀತಿ ಮಾಡಿದರೂ ಆಗಿನ ರುಚಿ ಬರಲ್ಲವೇನೋ? ಆ ಕಾಲದಲ್ಲಿ ಆಹಾರ ಪದಾರ್ಥಗಳು ಸಹ ಚೆನ್ನಾಗಿರುತ್ತಿತ್ತು. ಈಗ ಶುಂಠಿಯನ್ನು ಜಜ್ಜಿದರೂ ಅದರ ವಾಸನೆ ಬರುವುದೇ ಇಲ್ಲ. ಅದರ ಘಾಟು ಕೂಡ ಇರುವುದಿಲ್ಲ. ಹೇಗೋ ಕಾಲಕ್ಕೆ ತಕ್ಕಂತೆ ತಯಾರಿಸಿದರಾಯಿತು. ಪಾನಕ ತಯಾರಿಸುವ ಬಗೆ ತಿಳಿಯೋಣ.
*ಕೆಲವರು ಬೆಲ್ಲದ ಪಾನಕದ ತರಹವೇ ತಯಾರಿಸಿ ಅದಕ್ಕೆ ಕರಬೂಜ ಹಣ್ಣನ್ನು ಕೂಡ ಸೇರಿಸುತ್ತಾರೆ. ಇದು ಸಹ ತುಂಬಾ ರುಚಿಯಾಗಿಯೇ ಇರುತ್ತದೆ. ಇದು ನಮ್ಮ ಮನೆಯಲ್ಲಿ (ಅತ್ತೆ ಮನೆ ಕಡೆ) ಮಾಡುವ ಪಾನಕ. ಕರಬೂಜದ ವಾಸನೆಯೂ ಸೇರಿ ಪಾನಕವೂ ಇನ್ನೂ ಚೆನ್ನಾಗಿರುತ್ತದೆ.

ಕರಬೂಜ ಹಣ್ಣಿನ ಪಾನಕ:

ಸಾಮಗ್ರಿಗಳು:
ಕರಬೂಜ ಹಣ್ಣು
ಬೆಲ್ಲ ರುಚಿಗೆ
ಒಣಶುಂಠಿ - ಒಂದೆರಡು
ಕಾಳು ಮೆಣಸು-ಅರ್ಧ ಚಮಚ
ಚಿಟಿಕೆ ಉಪ್ಪು
ಏಲಕ್ಕಿ ಪುಡಿ ಸ್ವಲ್ಪ
ನೀರು

ವಿಧಾನ:
ಬೆಲ್ಲವನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ಒಣಶುಂಠಿಯನ್ನು ಸಹ ಚಚ್ಚಿಕೊಳ್ಳಿ,ಕಾಳು ಮೆಣಸನ್ನು ಸ್ವಲ್ಪ ಸ್ವಲ್ಪ ತರಿಯಾಗಿ,ದಪ್ಪವಾಗಿ ಕುಟ್ಟಿ.
ಪಾತ್ರೆಗೆ ನೀರು ಹಾಕಿ, ಅದಕ್ಕೆ ಕುಟ್ಟಿದ ಎಲ್ಲಾ ಸಾಮಾನುಗಳನ್ನು ಹಾಕಿ,ಚೆನ್ನಾಗಿ ಕೈನಲ್ಲಿಯೇ ಕಿವುಚಿ. ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣನ್ನು ಸಹ ಸೇರಿಸಿ, ಅದನ್ನು ಆಗೆಯೇ ನುಣ್ಣಗಾಗುವಂತೆ ಕೈನಲ್ಲಿಯೇ ಹಿಸುಕಿ. ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ. ಇದನ್ನು ತಣ್ಣಗೂ /ಆಗೇಯೇ ಸೇವಿಸಬಹುದು.
*ಹಣ್ಣಿನ ತೀರ ಚಿಕ್ಕದಾದ ತುಣುಕುಗಳು ಇರುತ್ತವೆ. ಅದು ಪಾನಕ ಕುಡಿಯುವಾಗ ಸಿಗುತ್ತದೆ. ಹಣ್ಣನ್ನು ಜೊತೆಯಲ್ಲಿ ತಿಂದರೆ ಅದು ಚೆನ್ನಾಗಿರುತ್ತದೆ.

Thursday, March 13, 2008

ಕರಿಬೇವು ಸೊಪ್ಪಿನ ಚಟ್ನಿಪುಡಿ / Chutney Powder

ಕರಿಬೇವು ಸೊಪ್ಪಿನ ಚಟ್ನಿಪುಡಿ:

ಸಾಮಗ್ರಿಗಳು:

ಕರಿಬೇವು
ಉದ್ದಿನಬೇಳೆ
ಕಡಲೆಬೇಳೆ
ಮೆಣಸಿನಕಾಯಿ
ಧನಿಯ ಕಾಳುಗಳು
ಜೀರಿಗೆ
ಉಪ್ಪು

ವಿಧಾನ:
ಕರಿಬೇವು,ಉದ್ದಿನಬೇಳೆ,ಕಡಲೆಬೇಳೆ,ಮೆಣಸಿನಕಾಯಿ,ಧನಿಯ ಮತ್ತು ಜೀರಿಗೆ ಎಲ್ಲವನ್ನು ಹುರಿದುಕೊಂಡು, ಉಪ್ಪು ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.

Wednesday, March 12, 2008

ಕೊತ್ತುಂಬರಿಸೊಪ್ಪಿನ ಚಟ್ನಿ/ Coriander chutney



ಕೊತ್ತುಂಬರಿಸೊಪ್ಪಿನ ಚಟ್ನಿ:

ಸಾಮಗ್ರಿಗಳು:
ಕೊತ್ತುಂಬರಿಸೊಪ್ಪು - ಒಂದು ಕಟ್ಟು
ಹಸಿರುಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ

ವಿಧಾನ:
ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ.

Tuesday, March 4, 2008

ಕಡ್ಲೆಬೇಳೆ ಕೋಸುಂಬರಿ/ Kadlebele koosumbari

ಕಡ್ಲೆಬೇಳೆ ಕೋಸುಂಬರಿ:

ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ - ಒಂದು ಬಟ್ಟಲು
ಎಣ್ಣೆ, ಸಾಸಿವೆ, ಕರಿಬೇವು
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಕಾಯಿತುರಿ ಸ್ವಲ್ಪ / ಜಾಸ್ತಿ
ಶುಂಠಿ ತುರಿ ಚೂರು
ಇಂಗು ಚಿಟಿಕೆ.

ತಯಾರಿಸುವ ವಿಧಾನ:

ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ ನಾಲ್ಕೈದು ಗಂಟೆ ನೆನೆಸಿ. ನಂತರ ಅದನ್ನು ಬಸಿದುಕೊಳ್ಳಿ , ನೀರಿನ ಅಂಶ ಇರದಂತೆ ಸೋಸಿ.
ಒಗ್ಗರಣೆ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಮೆಣಸಿನಕಾಯಿಗಳು,ಶುಂಠಿ ಮತ್ತು ಇಂಗು ಹಾಕಿ . ಒಂದು/ಎರಡು ನಿಮಿಷ ಬಾಡಿಸಿ. ಈ ಒಗ್ಗರಣೆಗೆ ನೆನೆಸಿದ ಕಡಲೆಬೇಳೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಕೊತ್ತುಂಬರಿ ಸೊಪ್ಪುಮತ್ತು ಕಾಯಿತುರಿಗಳನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ಕಲಸಿ. ಕಡ್ಲೆಬೇಳೆ ಕೋಸುಂಬರಿ ತಯಾರಾಗುತ್ತದೆ. ಇದನ್ನು ಕೆಲವರು ಶ್ರೀ ರಾಮನವಮಿಗೆ ತಯಾರಿಸುತ್ತಾರೆ. ಇನ್ನು ಕೆಲವರು ಹೆಸರುಬೇಳೆ ಕೋಸುಂಬರಿ ಮಾಡುತ್ತಾರೆ. ಅವರವರ ಮನೆಯಲ್ಲಿ ನಡೆದು ಬಂದಂತೆ ತಯಾರಿಸಿಕೊಳ್ಳುತ್ತಾರೆ.
* ಹಸಿ ಕಡಲೆಬೇಳೆ ಇಷ್ಟಪಡದವರು ಬೇಳೆಯನ್ನು ಸ್ವಲ್ಪ ಹೊತ್ತು ಬೇಯಿಸಿಕೊಳ್ಳಬಹುದು. ಇದು ರುಚಿಯಾಗಿರುತ್ತದೆ.
* ಕೋಸುಂಬರಿಗಳಿಗೆ ಕಾಯಿತುರಿ ಹೆಚ್ಚಾಗಿ ಹಾಕಿ. ಚೆನ್ನಾಗಿರುತ್ತದೆ.
* ಹಬ್ಬ ಅಂತನೇ ಅಲ್ಲ ಇದನ್ನು ನಮ್ಮ ಊಟಕ್ಕೆ ನೆಂಚಿಕೊಳ್ಳಲು ಸಹ ತಯಾರಿಸಬಹುದು.

Monday, March 3, 2008

ಪಾನಕ / Paanaka-’ಶ್ರೀ ರಾಮನವಮಿಯ ಪಾನಕ’

ಪಾನಕ ಅಂದ ತಕ್ಷಣ ನೆನಪಿಗೆ ಬರುವುದೇ ನಮ್ಮ ಹಬ್ಬ ’ಶ್ರೀ ರಾಮನವಮಿಯ ಪಾನಕ’. ಅವತ್ತಿನ ದಿನ ಮಾಡಿದ ಪಾನಕದ ರುಚಿಯೇ ಒಂಥರ! ರಾಮನವಮಿಗೆ ಪಾನಕ ಕೋಸುಂಬರಿಗಳು ಸರ್ವೇಸಾಮಾನ್ಯ. ನಮ್ಮ ಅಜ್ಜಿ ಎಲ್ಲಾ ಮಾಡುತ್ತಿದ್ದಂತ ಪಾನಕ,ಆಗ ನಾವು ಚಿಕ್ಕವರಿದ್ದಾಗ ಅದೇನು ರುಚಿ ಇರುತ್ತಿತ್ತು. ಅವತ್ತಿನ ದಿನವೆಲ್ಲಾ ಪಾನಕವನ್ನು ಕುಡಿಯುವುದೇ ಒಂದು ಕೆಲಸ.ಅವತ್ತು ಮನೆಯೆಲ್ಲಾ ಪಾನಕದ್ದೆ ಸುವಾಸನೆ,ಶುಂಠಿ-ಮೆಣಸಿನ ಪರಿಮಳ ತುಂಬಿರುತ್ತಿತ್ತು. ಅದೇನೋ ನಾವು ಅದೇ ರೀತಿ ಮಾಡಿದರೂ ಆಗಿನ ರುಚಿ ಬರಲ್ಲವೇನೋ? ಆ ಕಾಲದಲ್ಲಿ ಆಹಾರ ಪದಾರ್ಥಗಳು ಸಹ ಚೆನ್ನಾಗಿರುತ್ತಿತ್ತು. ಈಗ ಶುಂಠಿಯನ್ನು ಜಜ್ಜಿದರೂ ಅದರ ವಾಸನೆ ಬರುವುದೇ ಇಲ್ಲ. ಅದರ ಘಾಟು ಕೂಡ ಇರುವುದಿಲ್ಲ. ಹೇಗೋ ಕಾಲಕ್ಕೆ ತಕ್ಕಂತೆ ತಯಾರಿಸಿದರಾಯಿತು. ಪಾನಕ ತಯಾರಿಸುವ ಬಗೆ ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತೆ.

ಪಾನಕ:
ಸಾಮಗ್ರಿಗಳು:
ಬೆಲ್ಲ ರುಚಿಗೆ
ಒಣಶುಂಠಿ - ಒಂದೆರಡು
ಕಾಳು ಮೆಣಸು-ಅರ್ಧ ಚಮಚ
ಚಿಟಿಕೆ ಉಪ್ಪು
ಏಲಕ್ಕಿ ಪುಡಿ ಸ್ವಲ್ಪ
ನೀರು

ವಿಧಾನ:
ಬೆಲ್ಲವನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ಒಣಶುಂಠಿಯನ್ನು ಸಹ ಚಚ್ಚಿಕೊಳ್ಳಿ,ಕಾಳು ಮೆಣಸನ್ನು ಸ್ವಲ್ಪ ಸ್ವಲ್ಪ ತರಿಯಾಗಿ,ದಪ್ಪವಾಗಿ ಕುಟ್ಟಿ.
ಪಾತ್ರೆಗೆ ನೀರು ಹಾಕಿ, ಅದಕ್ಕೆ ಕುಟ್ಟಿದ ಎಲ್ಲಾ ಸಾಮಾನುಗಳನ್ನು ಹಾಕಿ, ಚೆನ್ನಾಗಿ ಕೈನಲ್ಲಿಯೇ ಕಿವುಚಿ. ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ. ಇದನ್ನು ತಣ್ಣಗೂ / ಆಗೇಯೇ ಸೇವಿಸಬಹುದು

Saturday, March 1, 2008

Mudde / RaagiMudde/Finger Millet ball - ರಾಗಿಮುದ್ದೆ

ರಾಗಿಮುದ್ದೆ :





ರಾಗಿ ಮುದ್ದೆ:

ಬೇಕಾಗುವ ಸಾಮಗ್ರಿಗಳು:

ರಾಗಿಹಿಟ್ಟು - ಒಂದು ಬಟ್ಟಲು
ನೀರು - ಎರಡು-ಮೂರು ಬಟ್ಟಲು
ಚಿಟಿಕೆ ಉಪ್ಪು

ತಯಾರಿಸುವ ವಿಧಾನ:

ಮೊದಲು ಸ್ವಲ್ಪ ಆಳ ಮತ್ತು ಅಗಲವಾಗಿರುವ ಪಾತ್ರೆಯಲ್ಲಿ ಅಳತೆ ನೀರನ್ನು ಮತ್ತು ಉಪ್ಪು ಹಾಕಿ ಅದು ಚೆನ್ನಾಗಿ ಕುದಿಯಲು ಬಿಡಿ. ನಂತರ ನಿಧಾನವಾಗಿ ರಾಗಿಹಿಟ್ಟನ್ನು ನೀರಿನ ಮಧ್ಯ ಭಾಗಕ್ಕೆ ಬರುವಂತೆ ಹಾಗೆ ಒಟ್ಟಿಗೆ ಹಾಕಿ, ಹಿಟ್ಟನ್ನು ಮತ್ತೆ ಮುಟ್ಟದೆ ಅದು ಚೆನ್ನಾಗಿ ಹತ್ತರಿಂದ ಹದಿನೈದು ನಿಮಿಷ ಬೇಯಲು ಬಿಟ್ಟು. ಅದು ಬೆಂದಿದೆ ಎನಿಸಿದ ತಕ್ಷಣ ಒಂದು ಸೌಟ್ ಅಥವಾ ಮರದ ಕೋಲಿನಿಂದ ಹಿಟ್ಟಿನ ಮಧ್ಯದಿಂದ ಹಾಗೇ ಒಂದೇಸಾರಿ ಎಲ್ಲಾ ಹಿಟ್ಟನ್ನು ಚೆನ್ನಾಗಿ ಕೈ ಆಡಿಸಿ. ಪೂರ್ತಿ ಹಿಟ್ಟು ಮತ್ತು ನೀರನ್ನು ಸರಿಯಾಗಿ ಬೆರೆಸಿ, ಗಂಟಿಲ್ಲದಂತೆ ಬೆರೆಸಿ. ಸ್ವಲ್ಪ ಗಟ್ಟಿ ಎನಿಸಿದರೆ ಮತ್ತೆ ಸ್ವಲ್ಪ ನೀರು ಹಾಕಿಕೊಂಡು ಬೆರೆಸಿ. ನಂತರ ಬೆರೆಸಿದ ಪೂರ್ತಿ ರಾಗಿಹಿಟ್ಟನ್ನು ತಟ್ಟೆ ಅಥವಾ ಚಾಪಿಂಗ್ ಬೋರ್ಡ್ ಅಥವಾ ಮರದ ಮಣೆ, ಮೇಲೆ ಹಾಕಿಕೊಂಡು, ಸ್ವಲ್ಪ ಲಘುವಾಗಿ ನಾದಿ ನಿಮಗೆ ಎಷ್ಟು ಬೇಕೋ ಅಷ್ಟು ಗಾತ್ರದ ಉಂಡೆಯನ್ನು ತಯಾರಿಸಿಕೊಳ್ಳಿ. ಕೈಗೆ ಸ್ವಲ್ಪ ತುಪ್ಪ ಮತ್ತು ನೀರನ್ನು ಸವರಿಕೊಂಡು ನಾದಿ. ಹೀಗೆ ತಯಾರಿಸಿದಾಗ ರಾಗಿಮುದ್ದೆ ತಯಾರಾಗುತ್ತದೆ. ಈ ರಾಗಿಮುದ್ದೆಯನ್ನು ಸೊಪ್ಪಿನ ಬಸ್ಸಾರು ಅಥವ ಮಸಾಲೆಸಾರು ಅಥವ ನಾನ್ ವೆಜ್ ಸಾರುಗಳೊಂದಿಗೆ ಸರ್ವ್ ಮಾಡಿ. ನಮ್ಮ ಕರ್ನಾಟಕದಲ್ಲಿ ರಾಗಿಮುದ್ದೆ ಬಸ್ಸಾರು ತುಂಬಾ ಪ್ರಸಿಧ್ಧವಾಗಿದೆ.ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವುದು ಮತ್ತು ರೋಗಗಳಿಗೆ ಮದ್ದಾಗಿರುವುದು ಈ ರಾಗಿಮುದ್ದೆ.

*ಕೆಲವರು ಮೊದಲೆ ನೀರಿಗೆ ಸ್ವಲ್ಪವೇ ಅಂದರೆ ಒಂದೆರಡು ಚಮಚ ರಾಗಿಹಿಟ್ಟನ್ನು ಕಲಸಿ,ಒಲೆಯ ಮೇಲೆ ಇಟ್ಟು ಅದನ್ನು ತಿರುಗಿಸುತ್ತಿದ್ದು,ನೀರು ಕುದಿ ಬಂದ ನಂತರ ಉಳಿದ ಎಲ್ಲಾ ಹಿಟ್ಟನ್ನು ಒಮ್ಮೆಲೆ ಹಾಕಿ,ಬೇಯಿಸಿ,ನಂತರ ಬೆರೆಸುತ್ತಾರೆ.ಹಾಗೂ ತಯಾರಿಸಬಹುದು.

ರಾಗಿಮುದ್ದೆ ಯಾರಿಸುವ ವಿಧಾನವನ್ನು ರಾಗಿಮುದ್ದೆ ಲೇಬಲ್ ನಲ್ಲಿ ನೋಡಬಹುದು. ಇದು ಬಸ್ಸಾರು ಮತ್ತು ಮೊಳಕೆ ಕಾಳುಗಳ ಸಾರಿನೊಂದಿಗೆ ತುಂಬಾ ಚೆನ್ನಾಗಿರುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾದ ಆಹಾರ.ಎಲ್ಲರು ತಿನ್ನಬಹುದಾದಂತ ಸ್ವಾದಿಷ್ಟವಾದ ಅಡುಗೆ.

Saturday, February 23, 2008

Puri Upma-ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ

ಕಡ್ಲೆಪುರಿಯನ್ನು ಒಂದೊಂದು ಕಡೆ ಬೇರೆ ಬೇರೆ ರೀತಿ ಕರೆಯುತ್ತಾರೆ. ಪುರಿ,ಮಂಡಕ್ಕಿ, ಮಂಡಾಳ, ಮುರಿ, ಕಡ್ಲೆಪುರಿ ಹೀಗೆ ಕರೆಯುವುದು ಹಲವು ಹೆಸರಲ್ಲೆ ಆದರೂ ಒಂದೇ. ಈ ತಿಂಡಿಯನ್ನು ಸಹ ಹಲವರು ಹಲವು ಬಗೆ ಕರೆಯುತ್ತಾರೆ.

ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ

ಬೇಕಾಗುವ ಸಾಮಗ್ರಿಗಳು;
ಕಡ್ಲೆಪುರಿ - ಒಂದು ಕೆಜಿ
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ(ಬೇಕಾದರೆ)
ಕೊತ್ತುಂಬರಿಸೊಪ್ಪು ,ಕಾಯಿತುರಿ
ಹುರಿಗಡಲೆ ಪುಡಿ - ಎರಡು ಚಮಚ

ತಯಾರಿಸುವ ವಿಧಾನ:
ಪುರಿ/ಮಂಡಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಳ್ಳೆಯ ನೀರಿನಲ್ಲಿ ಒಂದು ನಿಮಿಷ ಬಿಟ್ಟು,ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು , ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಮಂಡಕ್ಕಿ ಅಥವ ಪುರಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಕಡ್ಲೆಪುಡಿಯನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ.ಒಲೆಯಿಂದ ಇಳಿಸಿ. ಬಿಸಿಬಿಸಿ ಮಂಡಕ್ಕಿ/ಪುರಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಈ ತಿಂಡಿಯ ಜೊತೆ ಒಂದು ಲೋಟ ಬಿಸಿಯಾದ ಕಾಫಿ ಇದ್ದರಂತೂ ಇನ್ನೂ ಚೆನ್ನ.

Monday, February 18, 2008

Cucumber mixed salad/ಸೌತೆಕಾಯಿಹಸಿಕಾರ ಸಲಾಡ್

ಸೌತೆಕಾಯಿಹಸಿಕಾರ ಸಲಾಡ್:

ಸೌತೆಕಾಯಿ
ಟಮೋಟ
ಈರುಳ್ಳಿ
ಹಸಿಮೆಣಸಿನಕಾರ
ಕ್ಯಾರೆಟ್ ತುರಿ
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ಉಪ್ಪು

ವಿಧಾನ:
ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.
ವಾದರೂ ರುಚಿ ಮಾತ್ರ ಬಹಳ ಚೆನ್ನಾಗಿರುತ್ತವೆ.

ಸೌತೆಕಾಯಿ,ಈರುಳ್ಳಿ ಮತ್ತು ಟಮೋಟ ಹೆಚ್ಚಿ,ಅದಕ್ಕೆ ಕ್ಯಾರೆಟ್ ತುರಿ,ಕೊತ್ತುಂಬರಿ ಸೊಪ್ಪು,ನಿಂಬೆರಸ,ಉಪ್ಪು,ಹಸಿಮೆಣಸಿನಕಾರ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ತೆಂಗಿನಕಾಯಿತುರಿ ಸೇರಿಸಿ.ಮತ್ತೆ ಬೆರೆಸಿ.

Sunday, February 17, 2008

Jeera Rice / ಜೀರಿಗೆ ಅನ್ನ

ಜೀರಿಗೆ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಏಲಕ್ಕಿ,ಜೀರಿಗೆ ಹಾಕಿ ಹುರಿದು,ಅದಕ್ಕೆ ನೆನೆಸಿದ ಅಕ್ಕಿ ಹಾಕಿ,ಉಪ್ಪು ಸೇರಿಸಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ.ಬೇಯಿಸಿ.ಅನ್ನವನ್ನು ತಯಾರಿಸಿ.ಜೀರಿಗೆ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Saturday, February 16, 2008

Tomato Bhath / Tomato pulao




ಟಮೋಟ ಬಾತ್ /ಪಲಾವ್:

ಟಮೋಟ ಹೆಚ್ಚಿದ್ದು
ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ
ಅಚ್ಚಖಾರದ ಪುಡಿ
ಜೀರಿಗೆ
ಅರಿಶಿಣದ ಪುಡಿ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ,ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ,ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ,ಟಮೋಟಗಳನ್ನು ಹಾಕಿ ಅದನ್ನು ಒಂದೆರಡು ನಿಮಿಷ ಹುರಿದು,ಅದಕ್ಕೆ ಅರಿಶಿಣ,ಕಾರದಪುಡಿ,ಉಪ್ಪು, ಕಾಯಿತುರಿ ಮತ್ತು ನೀರನ್ನು ಹಾಕಿ,ನೆನೆಸಿದ ಅಕ್ಕಿಯನ್ನು ಹಾಕಿ,ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ,ಚೆನ್ನಾಗಿ ಬೆರೆಸಿ,ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ. ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ಮೊಸರಿನ ರಾಯತದೊಂದಿಗೆ ಬಡಿಸಿ.

Friday, February 15, 2008

Bread Pudding

ಬ್ರೆಡ್ ಪುಡ್ಡಿಂಗ್

ಬೇಕಾಗುವ ಸಾಮಗ್ರಿಗಳು:
1 ಪೌಂಡ್ ಬ್ರೆಡ್ ಅಥವ 12 ಪೀಸಸ್, ಅಂಚು ಕತ್ತರಿಸಿಟ್ಟುಕೊಳ್ಳಿ.
1 ಲೀಟರ್ ಹಾಲು
7-8 ಮೊಟ್ಟೆ - ಒಡೆದು, ಬಟ್ಟಲಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿಡಿ (ಬ್ಲೆಂಡ್ ಮಾಡಿ)
1/4 ಕೆಜಿ ಸಕ್ಕರೆ
50 ಗ್ರಾಂ ಬೆಣ್ಣೆ
1/2 ಚಮಚ ಜಾಯಿಕಾಯಿ ರಸ (ತೇದಿದ್ದು)
ಸ್ವಲ್ಪ ಗೋಡಂಬಿ - ದ್ರಾಕ್ಷಿ
ಬಾದಾಮಿ ಬೇಕಾದರೆ
1ಚಮಚ ತುಪ್ಪ ( ಇದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಇಟ್ಟುಕೊಳ್ಳಿ)

ತಯಾರಿಸುವ ವಿಧಾನ:
ಹಾಲು ಚೆನ್ನಾಗಿ ಕಾಯಿಸಿ,ಅದಕ್ಕೆ ಸಕ್ಕರೆ,ಬೀಟ್ ಮಾಡಿದ ಮೊಟ್ಟೆ ಹಾಕಿ,ಕೈ ಬಿಡದೇ ತಳ ಹತ್ತದಂತೆ ಚೆನ್ನಾಗಿ ತಿರುವುತ್ತಿರಿ,ಮದ್ಯೆ ಜಾಯಿಕಾಯಿ ರಸ ಹಾಕಿ,ತಿರುವಿ. ಹಾಲಿನ ಮಿಶ್ರಣ ಅರ್ಧ ಭಾಗದಷ್ಟು ಆದಾಗ ಅದನ್ನು ಕೆಳಗಿಳಿಸಿ.ಕಾವಲಿ ಅಥವ ಒಂದು ಅಗಲವಾದ ಬಟ್ಟಲಿಗೆ ಬೆಣ್ಣೆಯನ್ನು ಸವರಿ ಅದರಲ್ಲಿ ತುಪ್ಪದಲ್ಲಿ ಕರಿದ ಬ್ರೆಡ್ ತುಂಡುಗಳನ್ನು ಜೋಡಿಸಿಟ್ಟು, ಅದರ ಮೇಲೆ ಈ ಹಾಲಿನ ಮಿಶ್ರಣವನ್ನು ಸುರಿದು ಸಮನಾಗಿ ಹರಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿ, ನಂತರ ತಣ್ಣಗಾದ ಮೇಲೆ ತಿನ್ನಲು ರೆಡಿಯಾಗಿರಿ. ಇದು ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟ ವಾಗುತ್ತದೆ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

Tuesday, January 29, 2008

Khara Kadubu-Moongdal Kadubu-ಹೆಸರುಬೇಳೆ ಕಡುಬು/ಖಾರ ಕಡುಬು:

ಹೆಸರುಬೇಳೆ ಕಡುಬು:

ನಮ್ಮ ಪ್ರೀತಿಯ ದೇವ ಶ್ರೀ ಗಣೇಶನಿಗೆ ಪ್ರಿಯವಾದದ್ದು ಕಡುಬು. ಯಾವುದೇ ಅಡುಗೆ ಮಾಡಲಿ ಗಣೇಶ ಚತುರ್ಥಿಗೆ ಕಡುಬಂತೂ ಇರಲೇಬೇಕು. ಕಡುಬು ಮಾಡಿಟ್ಟು ಅದನ್ನು ಅವನಿಗೆ ನೈವೇದ್ಯ ಕೊಟ್ಟರೆ ಅವತ್ತಿನ ಗಣೇಶನ ಹಬ್ಬ ಆದಂತೆ.ಅವನಿಗೆ ಇಷ್ಟವಾದ ಕಡುಬನ್ನು ಸುಮಾರು ರೀತಿ ತಯಾರಿಸುತ್ತಾರೆ. ಒಬ್ಬೊಬ್ಬರದು ಒಂದೊಂದು ತರಹ ಆಚರಣೆ ಇರುತ್ತೆ. ಅದಕ್ಕೆ ಆ ಪದ್ಧತಿಗೆ ತಕ್ಕಂತೆ ಕಡುಬುಗಳನ್ನು ಮಾಡಿಕೊಳ್ಳುತ್ತಾರೆ. ಸಿಹಿ ಕಡುಬು,ಖಾರ ಕಡುಬು, ಬೇಳೆ ಕಡುಬು, ಎಳ್ಳಿನ ಕಡುಬು,ಹೂರಣದ ಕರಿಗಡುಬು, ಕರಿಗಡುಬು, ಕರ್ಜಿಕಾಯಿ ಅಂತ ಹೀಗೆ ವಿವಿಧ ರೀತಿಗಳಿವೆ. ಈಗ ಇಲ್ಲಿ ಹೆಸರುಬೇಳೆಯ ಖಾರದ ಕಡುಬು ತಯಾರಿಸುವ ವಿಧಾನವಿದೆ.

ಹೆಸರುಬೇಳೆ ಕಡುಬು / ಖಾರ ಕಡುಬು:

ಬೇಕಾಗುವ ಸಾಮಗ್ರಿಗಳು:

ಹೆಸರುಬೇಳೆ - ಒಂದು ಬಟ್ಟಲು
ಹಸಿಮೆಣಸಿನಕಾಯಿ ರುಚಿಗೆ
ಕೊತ್ತುಂಬರಿಸೊಪ್ಪು ಸ್ವಲ್ಪ
ಪುದೀನ ಸೊಪ್ಪು ಬೇಕಾದರೆ
ಒಂದು ಇಂಚು ಚೂರು ಶುಂಠಿ
ಒಂದೆರಡು ಚೆಕ್ಕೆ ಮತ್ತು ಲವಂಗ
ಉಪ್ಪು ರುಚಿಗೆ

ತಯಾರಿಸುವ ವಿಧಾನ:

ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ. ಅರ್ಧ/ಒಂದು ಗಂಟೆಯಾದರು ನೆನೆಯಬೇಕು.
ನೆನೆಸಿದ ಹೆಸರುಬೇಳೆಯ ಜೊತೆ, ಹಸಿಮೆಣಸಿನಕಾಯಿ,ಶುಂಠಿ,ಚೆಕ್ಕೆ,ಲವಂಗ,ಕೊತ್ತುಂಬರಿಸೊಪ್ಪನ್ನು ಮತ್ತು ಉಪ್ಪನ್ನು ಹಾಕಿ ಸ್ವಲ್ಪ ತರಿ-ತರಿಯಾಗಿ ರುಬ್ಬಿಕೊಳ್ಳಿ, ನೀರು ಸೇರಿಸಬಾರದು, ಆಗೇ ರುಬ್ಬಬೇಕು. ಇದನ್ನು ಹೂರಣ (ಫಿಲ್ಲಿಂಗ್) ಎನ್ನುತ್ತೇವೆ.
ಈಗ ಇದನ್ನು ಸ್ಟಫ್ ಮಾಡಬೇಕು. ಅದಕ್ಕಾಗಿ ಹಿಟ್ಟನ್ನು ತಯಾರಿಸಬೇಕು.

ಅಕ್ಕಿಹಿಟ್ಟು ಅಥವಾ ಮುದ್ದೆಯನ್ನು ತಯಾರಿಸುವ ರೀತಿ:

ಕಡುಬಿನ ಹಿಟ್ಟು ತಯಾರಿಸುವ ರೀತಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು - ಒಂದು ಬಟ್ಟಲು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು ಅಗತ್ಯವಿದ್ದಷ್ಟು- ಎರಡು/ಮೂರು ಬಟ್ಟಲು

ವಿಧಾನ:

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ಎಣ್ಣೆ ಮತ್ತು ಉಪ್ಪು ಹಾಕಿಡಿ. ಅದನ್ನು ಚೆನ್ನಾಗಿ ಬೇಯಸಿ, ಹಿಟ್ಟನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ರಾಗಿಮುದ್ದೆ ಮಾಡುವವರಿಗೆ ಇದನ್ನು ತಯಾರಿಸಲು ಸುಲಭ ಮತ್ತು ಯಾವ ಹದದಲ್ಲಿ ತಯಾರಿಸಬೇಕು ಅಂತ ಗೊತ್ತಾಗುತ್ತೆ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.

ಕಡುಬನ್ನು ತಯಾರಿಸುವ ರೀತಿ:

ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೆಸರುಬೇಳೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಅರ್ಧ ವೃತ್ತಾಕಾರವಾಗಿ ಮಡಿಚಿ, ಅಂಚುಗಳನ್ನು ಸರಿಯಾಗಿ ಸೇರಿಸಿ, ಅದುಮಿ,ಬಿಟ್ಟುಕೊಳ್ಳದಂತೆ ಸರಿಯಾಗಿ ಅದು ಅಂಟಿಕೊಂಡಿದೆಯಾ ಎಂದು ಪರೀಕ್ಷಿಸಿ, ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಹೀಗೆ ಎಲ್ಲವನ್ನು ತಯಾರಿಸಿಕೊಂಡು, ಹಬೆಯಲ್ಲಿ ಹತ್ತು ಅಥವ ಹದಿನೈದು ನಿಮಿಷಗಳು ಬೇಯಿಸಿ. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬುಗಳನ್ನು ಹಬೆಯಲ್ಲಿ ಬೇಯಿಸಬೇಕು. ಇದನ್ನು ಬೇಯಿಸಿಯೇ ತಿನ್ನಬೇಕು, ಬೇಯಿಸಿದ ನಂತರ ತೆಗೆದು ತುಪ್ಪ ಹಾಕಿ ತಿನ್ನಲು ಕೊಡಿ. ಬಿಸಿ-ಬಿಸಿ ಕಡುಬು ರುಚಿ ಇರುತ್ತದೆ. ಅಲ್ಲದೇ ತಣ್ಣಗಾದ ಮೇಲು ಸಹ ತುಂಬಾನೇ ಚೆನ್ನಾಗಿರುತ್ತದೆ, ಯಾವ ರೀತಿ ಬೇಕಾದರೂ ,ಯಾವಾಗ ಬೇಕಾದರೂ ಓಡಾಡಿಕೊಂಡು ತಿನ್ನಬಹುದು. ತುಪ್ಪದ ಜೊತೆ, ತೆಂಗಿನಕಾಯಿ ಚಟ್ನಿ ಒಳ್ಳೆಯ ಸೂಪರ್ ಕಾಂಬಿನೇಷನ್.


*ಹಬೆಯಲ್ಲಿ ಬೇಯಿಸಲು ಕುಕ್ಕರ್ / ಇಡ್ಲಿ ಬೇಯಿಸುವ ಪಾತ್ರೆ/ ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ , ಕಡುಬು ಜೋಡಿಸಿದ ತಟ್ಟೆ ಅಥವಾ ಬಟ್ಟಲನ್ನು ಅದರಲ್ಲಿ ಇಟ್ಟು ಬೇಯಿಸಿ. ತುಂಬಾ ಹೊತ್ತು ಬೇಯಿಸಿದರೆ ಕಡುಬುಗಳು ತುಂಬಾ ಗಟ್ಟಿಯಾಗುತ್ತವೆ. ಬೇಗ ತೆಗೆದರೆ ಒಳಗೆ ಬೆಂದಿರುವುದಿಲ್ಲ. ಆಗಾಗಿ ಸರಿಯಾಗಿ ಬೇಯಿಸಿಕೊಳ್ಳಿ.

Wednesday, January 23, 2008

Shavige Payasa

ಶ್ಯಾವಿಗೆ ಖೀರು

ಸಾಮಗ್ರಿಗಳು :

ಶ್ಯಾವಿಗೆ - 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - ಸ್ವಲ್ಪ
ಏಲಕ್ಕಿ - 5,
ಸಕ್ಕರೆ - ರುಚಿಗೆ ತಕ್ಕಷ್ಟು
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಶ್ಯಾವಿಗೆಯನ್ನು ಸ್ವಲ್ಪ ಕೆಂಪಾಗುವವರೆಗೂ ಹುರಿಯಿರಿ.
ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
[ಕಾಯಿತುರಿ /ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು].

ಮಾಡುವ ವಿಧಾನ : ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಹುರಿಯಲ್ಲಿ ಕುದಿಸಬೇಕು. ಕುದಿಯುತ್ತಿರುವಾಗಲೆ ಶ್ಯಾವಿಗೆಯನ್ನು ಹಾಕಿ ಬೇಯಿಸಿ, ಸಕ್ಕರೆ ಸೇರಿಸಿ ಮಧ್ಯೆ ಮಧ್ಯೆ ಕಲಕುತ್ತಿರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಬೇಕಾದರೆ ಕುದಿಯುವಾಗ 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಶ್ಯಾವಿಗೆ ಬೆಂದ ನಂತರ ಒಲೆಯಿಂದ ಇಳಿಸಿ . ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ರುಚಿಯಾದ ಶ್ಯಾವಿಗೆ ಪಾಯಸ ಸಿದ್ಧ.

Monday, January 14, 2008

ನಿಂಬೆಹಣ್ಣಿನ ಶರಬತ್ತು / Lemon Juice

ನಿಂಬೆಹಣ್ಣಿನ ಶರಬತ್ತು:

ನಿಂಬೆರಸ-ಒಂದು ಚಮಚ/ರುಚಿಗೆ
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ

ವಿಧಾನ:

ನೀರಿಗೆ ಸಕ್ಕರೆ,ಉಪ್ಪು,ನಿಂಬೆರಸ,ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಕಲಕಿದರೆ. ನಿಂಬೆ ಶರಬತ್ತು/ಪಾನೀಯ ತಯಾರಾಗುತ್ತದೆ.
*ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸಲು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಮೊದಲಿಂದಲೂ ಯಾರ ಮನೆಗಾದರೂ ಬಿಸಿಲಿನಲ್ಲಿ ಹೋದ ತಕ್ಷಣ ನಿಂಬೆಹಣ್ಣಿನ ಶರಬತ್ತು ಅಥವಾ ಮಜ್ಜಿಗೆ ಕೊಡುವ ವಾಡಿಕೆ ಇದೆ ಅಲ್ಲವೇ!ಅದೊಂದು ತರಹ ಸಂಪ್ರದಾಯವೇ ಆಗಿತ್ತು ಆಗ. ಆಯಾಸಕ್ಕೆ ಪರಿಹಾರ ನೀಡುವ ಅಂಶ ಅದರಲ್ಲಿದೆ.
*ಇದಕ್ಕೆ ಸ್ವಲ್ಪ ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ

Saturday, January 12, 2008

Tomato Rasam-ಟಮೋಟ ರಸಂ:


ಟಮೋಟ ರಸಂ:

ಬೇಕಾಗುವ ಸಾಮಗ್ರಿಗಳು:
ಟಮೋಟ ಹಣ್ಣು
ಬೆಳ್ಳುಳ್ಳಿ ನಾಲ್ಕು ಎಸಳು, ಜಜ್ಜಿದ್ದು
ಹುಣಸೇರಸ ಒಂದು ಚಮಚ
ಅಚ್ಚಖಾರದಪುಡಿ
ಉಪ್ಪು
ಎಣ್ಣೆ,ಸಾಸೆವೆ,ಜೀರಿಗೆ,ಕರಿಬೇವು,ಇಂಗು
ಕೊತ್ತುಂಬರಿಸೊಪ್ಪು

ತಯಾರಿಸುವ ವಿಧಾನ:
ಟಮೋಟ ಹಣ್ಣನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಅದರ ಸಿಪ್ಪೆಯನ್ನು ತೆಗೆದು,ಮಿಕ್ಸಿಗೆ ಹಾಕಿ ಮತ್ತೆ ಸ್ವಲ್ಪ ನೀರು ಹಾಕಿ ರುಬ್ಬಿ.
ಪಾತ್ರೆಗೆ ಎಣ್ಣೆಯನ್ನು ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಬೆಳ್ಳುಳ್ಳಿ ಮತ್ತು ಇಂಗು ಹಾಕಿ, ಆಮೇಲೆ ರುಬ್ಬಿದ ಟಮೋಟ ರಸ ಹಾಕಿ, ಹುಣಸೇರಸ,ಉಪ್ಪು ಮತ್ತು ಅಚ್ಚಖಾರದಪುಡಿ ಹಾಕಿ,ಮತ್ತೆ ಒಂದಿಷ್ಟು ನೀರು ಹಾಕಿ ಬೆರೆಸಿ. ಆಮೇಲೆ ಒಂದೆರಡು ಕುದಿ ಕುದಿಸಿ. ಇಳಿಸಿ,ಕೊತ್ತುಂಬರಿಸೊಪ್ಪನ್ನು ಹಾಕಿ. ರುಚಿಯಾದ ಸರಳವಾದ ಟಮೋಟ ರಸಂ ತಯಾರಾಗುತ್ತದೆ. ಇದನ್ನು ಊಟಕ್ಕೆ ಮುಂಚೆ ಕುಡಿಯಲು ಅಥವಾ ಬಿಳಿಅನ್ನಕ್ಕೆ ಅಥವಾ ಊಟದ ನಂತರ ಕುಡಿಯಲು,ಹೀಗೆ ಹೇಗಾದರೂ ಸರ್ವ್ ಮಾಡಬಹುದು. ಎಲ್ಲದಕ್ಕು ಚೆನ್ನಾಗಿರುತ್ತದೆ. ಮಕ್ಕಳಂತೂ ಇದರ ಜೊತೆ ಹಪ್ಪಳ ಅಥವಾ ಸೆಂಡಿಗೆ ಕೊಟ್ಟರೆ ಗಲಾಟೆಯಿಲ್ಲದೆ ಊಟ ಮಾಡುತ್ತಾರೆ.

Monday, January 7, 2008

Pongal /ಸಿಹಿ ಪೊಂಗಲ್

ಸಂಕ್ರಾಂತಿ ಹಬ್ಬದ ವಿಶೇಷ ಅಡಿಗೆ ಪೊಂಗಲ್. ಪೊಂಗಲ್ ಮತ್ತು ಎಳ್ಳು ಬೆಲ್ಲವಿಲ್ಲದೆ ಸಂಕ್ರಾಂತಿ ಸಂಪೂರ್ಣ ಎನಿಸುವುದಿಲ್ಲ. ವರುಷದ ಮೊದಲ ಹಬ್ಬದ ಮೊದಲ ಸಿಹಿ ಇದಾಗಿರುತ್ತದೆ. ಬೇಕೆನಿಸಿದಾಗ ತಯಾರಿಸಿ ತಿಂದರೂ ಸಹ ,ಆದರೂ ಅದೇನೋ ಹಬ್ಬದ ದಿನ ತಯಾರಿಸಿದ ಅಡಿಗೆಗಳಿಗೆ ಒಂದು ತರಹದ ವಿಶೇಷ ರುಚಿ.

ಸಿಹಿ ಪೊಂಗಲ್:

ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು

ತಯಾರಿಸುವ ವಿಧಾನ:

ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ,ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು ,ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ,ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ,ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ.ಇಳಿಸಿ.ಪೊಂಗಲ್ ತಿನ್ನಲು ತಯಾರಾಗುತ್ತದೆ.ಕೇಸರಿ ಮತ್ತು ಹೆಸರುಬೇಳೆಯ ಅದರದ್ದೆ ಆದ ನೈಜ ಬಣ್ಣಗಳಿಂದ ಪೊಂಗಲ್ ನೋಡಲು ಚೆನ್ನಾಗಿ ಕಾಣುತ್ತದೆ.
* ಬಾದಾಮಿಯನ್ನು ಸೇರಿಸಬಹುದು. ತುಪ್ಪ ತಮ್ಮ ಇಷ್ಟದಂತೆ ಸೇರಿಸಿಕೊಳ್ಳಿ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.

Sunday, January 6, 2008

Kadubina Hittu/Mudde - ಅಕ್ಕಿಹಿಟ್ಟು/ಮುದ್ದೆ

ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ. ಕಡುಬಿನ ಬಗ್ಗೆ ಒಂದಿಷ್ಟು ಮಾಹಿತಿ.

ಕಡುಬಿನ ಹಿಟ್ಟು ತಯಾರಿಸುವ ರೀತಿ:

ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ,ಎಣ್ಣೆ ಮತ್ತು ಉಪ್ಪು ಹಾಕಿಡಿ. ಹಿಟ್ಟನ್ನು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.

ಕಡುಬನ್ನು ತಯಾರಿಸುವ ರೀತಿ:

ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಬಗ್ಗೆ ಮಾಹಿತಿ.

* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.

ಕಡುಬುಗಳಲ್ಲಿ ವಿವಿಧ ರೀತಿ, ಹಲವು ಬಗೆ, ಒಬ್ಬೊಬ್ಬರು ಒಂದೊಂದು ರೀತಿ ತಯಾರಿಸುತ್ತಾರೆ. ಕೆಲವು ರೆಸಿಪಿಗಳನ್ನು ತಿಳಿಸಿರುವೆ, ಕಡುಬಿನ ಲೇಬಲ್ ನಲ್ಲಿ ನೋಡಿ.

Popular Posts