Tuesday, June 26, 2007

Kadubu- ಕಡುಬು:ಸಿಹಿ ಕಡುಬು

ಕಡುಬು:
ಬೇಕಾಗುವ ಸಾಮಾನುಗಳು:

ಹಿಟ್ಟು ಅಥವಾ ಮುದ್ದೆಗೆ:ಅಕ್ಕಿ ಹಿಟ್ಟು - ಎರಡು ಬಟ್ಟಲು
ಅರ್ಧ ಚಮಚ ಉಪ್ಪು

ಹೂರಣಕ್ಕೆ:

ಹುರಿಗಡಲೆ -ಬೇಕಾಗುವಷ್ಟು
ಗಸಗಸೆ ಸ್ವಲ್ಪ
ಎಳ್ಳು ಸ್ವಲ್ಪ
ಬೆಲ್ಲ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಕಾಯಿತುರಿ - ಒಂದು ಕಾಯಿ

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ಉಪ್ಪು ಹಾಕಿಡಿ. ಅದು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.
ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಹಿಟ್ಟಿನ ಬಗ್ಗೆ.

ಹೂರಣ ತಯಾರಿಸಲು:

ಹುರಿಗಡಲೆಯನ್ನು ಪುಡಿ ಮಾಡಿಕೊಳ್ಳಿ, ಗಸಗಸೆ ಮತ್ತು ಎಳ್ಳನ್ನು ಹುರಿದುಕೊಂಡು ಪುಡಿ ಮಾಡಿ, ಬೆಲ್ಲವನ್ನು ಸಹ ಸಣ್ಣ ಪುಡಿ ಮಾಡಿಕೊಂಡು ಅದಕ್ಕೆ ಹುರಿಗಡಲೆ ಪುಡಿ, ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ, ಎಲ್ಲವನ್ನು ಚೆನ್ನಾಗಿ ಹೊಂದಿಕೊಳ್ಳುವಂತೆ ಕೈನಲ್ಲಿ ಬೆರೆಸಿ. ಇದನ್ನು ಕಡುಬಿಗೆ ತುಂಬುವ ಹೂರಣ ಎನ್ನುತ್ತೇವೆ. ಕಡುಬು ತಯಾರಿಸುವಾಗ ಇದಕ್ಕೆ ಹಸಿ ಕಾಯಿತುರಿಯನ್ನು ಹಾಕಬೇಕು ಮತ್ತು ಚೆನ್ನಾಗಿ ಬೆರೆಸಬೇಕು, ಕಾಯಿತುರಿ ಜಾಸ್ತಿ ಇದ್ದಷ್ಟು ರುಚಿ ಜಾಸ್ತಿ. ಅದಕ್ಕೆ ಪುಡಿ ಅಂದರೆ ಹೂರಣ ತಯಾರಿಸುವಾಗ ಬೆಲ್ಲವನ್ನು ಸ್ವಲ್ಪ ಜಾಸ್ತಿಯೇ ಹಾಕಬೇಕು. ಅದು ಕಾಯಿತುರಿ ಹಾಕಿದಾಗ ಸರಿಯಾಗುತ್ತದೆ.
ಅಕ್ಕಿ ಹಿಟ್ಟು ಅಥವ ಮುದ್ದೆಯಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದನ್ನು ಬಟ್ಟಲಿನ ಆಕಾರ ಅಥವಾ ಪೂರಿಯಂತೆ ತಟ್ಟಿಕೊಂಡು ಅದರೊಳಗೆ ಕಡ್ಲೆಮಿಶ್ರಣದ ಹೂರಣವನ್ನು ತುಂಬಿ, ಮಧ್ಯ/ಅರ್ಧ ಭಾಗಕ್ಕೆ ಮಡಿಸಿಕೊಂಡು ಎರಡು ಬದಿಯ ಅಂಚನ್ನು ಒಂದಕ್ಕೊಂದು ನೀರು/ಹಾಲು/ತೆಂಗಿನಹಾಲು ಯಾವುದಾದರೂ ಉಪಯೋಗಿಸಿ ಅಂಟಿಸಿ. ಅಂಚು ಕತ್ತರಿಸಿ/ಡಿಸೈನ್ ಮಾಡಿ. ಇದೇರೀತಿ ಎಲ್ಲವನ್ನು ತಯಾರಿಸಿ, ಸಿಹಿಕಡುಬು ತಿನ್ನಲು ತಯಾರಾಗುತ್ತದೆ.

* ಹೂರಣವನ್ನು ಹಿಂದಿನ ದಿನ/ ಮೊದಲೆ ತಯಾರಿಸಿಕೊಳ್ಳಬಹುದು, ಇದಕ್ಕೆ ನೀರು ಸೇರಿಸದೆ ಇರುವುದರಿಂದ ಹೂರಣ ಅಂದರೆ ಕಡ್ಲೆಮಿಶ್ರಣ ಪುಡಿಯೂ ಸುಮಾರು ದಿನ ಇರುತ್ತದೆ. ತಯಾರಿಸಿಟ್ಟುಕೊಂಡಿದ್ದರೆ ಯಾವಾಗ ಬೇಕೋ ಆಗ ಕಡುಬನ್ನು ಮಾಡಿಕೊಳ್ಳಬಹುದು.
*ಗಸಗಸೆ,ಎಳ್ಳು ಹುರಿದು, ಅದರ ಜೊತೆ ಕಡ್ಲೆ ಮತ್ತು ಬೆಲ್ಲವನ್ನು ಸೇರಿಸಿ, ಒಟ್ಟಿಗೆ ಎಲ್ಲವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು.
* ಕಡುಬು ತಯಾರಿಸುವಾಗ ಹಸಿ ತೆಂಗಿನಕಾಯಿ ತುರಿಯನ್ನು ಮರೆಯದೆ ಸೇರಿಸಿ,ಬೆರೆಸಿ. ಅದೇ ತೆಂಗಿನ ತುರಿಯಿಂದ ಸ್ವಲ್ಪ ಹಾಲು ಹಿಂಡಿಕೊಳ್ಳಿ. ಅಂಚುಗಳನ್ನು ಅಂಟಿಸುವಾಗ ಉಪಯೋಗಿಸಲು ಬೇಕು.
*ಯಾವ ರೀತಿಯ ಕಡುಬುಗಳನ್ನೆ ಆಗಲಿ ತಯಾರಿಸುವಾಗ ಅಂಚುಗಳನ್ನು ಸರಿಯಾಗಿ ಅಂಟಿಸಿ, ಬಿಟ್ಟುಕೊಳ್ಳುತ್ತವೆ ಕೆಲವೊಮ್ಮೆ, ಆಗ ಹೂರಣವೆಲ್ಲಾ ಚೆಲ್ಲುತ್ತದೆ/ಆಚೆ ಬರುತ್ತದೆ.
* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.
* ಈ ಕಡುಬುಗಳನ್ನು ಹಾಗೇಯೇ ತಿನ್ನಬಹುದು, ಆವಿಯಲ್ಲಿ ಬೇಯಿಸುವ ಅಗತ್ಯವಿಲ್ಲ. ಕೆಲವರು ಮಾತ್ರ ಬೇಯಿಸಿ ತಿನ್ನುತಾರೆ. ಸಾಮನ್ಯವಾಗಿ ಹಾಗೇ ತಿನ್ನುತ್ತಾರೆ, ತಿನ್ನುವಾಗ ಕಡುಬುಗಳ ಮೇಲೆ ತುಪ್ಪ ಹಾಕಿಕೊಂಡು ತಿನ್ನಬೇಕು.

ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ

Monday, June 25, 2007

Kadubina Hittu/Mudde - ಅಕ್ಕಿಹಿಟ್ಟು/ಮುದ್ದೆ

ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ. ಕಡುಬಿನಹಿಟ್ಟು ಬಗ್ಗೆ ಒಂದಿಷ್ಟು ಮಾಹಿತಿ.

ಕಡುಬಿನ ಹಿಟ್ಟು ತಯಾರಿಸುವ ರೀತಿ:

ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ,ಎಣ್ಣೆ ಮತ್ತು ಉಪ್ಪು ಹಾಕಿಡಿ. ಹಿಟ್ಟನ್ನು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.

ಕಡುಬನ್ನು ತಯಾರಿಸುವ ರೀತಿ:

ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಬಗ್ಗೆ ಮಾಹಿತಿ.

* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.

ಕಡುಬುಗಳಲ್ಲಿ ವಿವಿಧ ರೀತಿ, ಹಲವು ಬಗೆ, ಒಬ್ಬೊಬ್ಬರು ಒಂದೊಂದು ರೀತಿ ತಯಾರಿಸುತ್ತಾರೆ. ಕೆಲವು ರೆಸಿಪಿಗಳನ್ನು ತಿಳಿಸಿರುವೆ, ಕಡುಬಿನ ಲೇಬಲ್ ನಲ್ಲಿ ನೋಡಿ

Saturday, June 23, 2007

Gasagase Payasa / Khuskhus Kheer




ಗಸಗಸೆ ಪಾಯಸ

ಸಾಮಗ್ರಿಗಳು :

ಗಸಗಸೆ - 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - 1 ಅಥವ ( ಹಾಲು 5-6 ಕಪ್ )
ಏಲಕ್ಕಿ - 5,
ಸಕ್ಕರೆ/ಬೆಲ್ಲ - 21/2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಒಂದು ಕಪ್ ಗಸಗಸೆಯನ್ನು ಘಂ ಎಂದು ಚಟಚಟ ಅನ್ನುವವರೆಗೆ ಹುರಿಯಿರಿ. ಅದಕ್ಕೆ ಬಾದಾಮಿಯನ್ನು ಹಾಕಿ ಹುರಿದುಕೊಳ್ಳಿ. ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
ತೆಂಗಿನಹಾಲು ತೆಗೆಯಲು ಕಷ್ಟ ಎನಿಸಿದರೆ ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು.

ಮಾಡುವ ವಿಧಾನ : ಗಸಗಸೆ, ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಹುರಿಯಲ್ಲಿ ಕುದಿಸಬೇಕು. ಕುದಿಯುತ್ತಿರುವಾಗಲೆ ಬೆಲ್ಲ ಅಥವ ಸಕ್ಕರೆ ಸೇರಿಸಿ(ಸಕ್ಕರೆ ಹಾಕಿದರೆ ರುಚಿ ಚೆನ್ನಾಗಿರುತ್ತದೆ), ಮಧ್ಯೆ ಮಧ್ಯೆ ಕಲಕುತ್ತಿರಬೇಕು ಇಲ್ಲವಾದರೆ ಗಂಟು ಆಗುತ್ತದೆ ಮತ್ತು ತಳ ಹಿಡಿಯುತ್ತದೆ. ಬೇಕಾದರೆ ಕುದಿಯುವಾಗ ಒಂದು ಚಿಕ್ಕಚೂರು ಜಾಕಾಯಿ ಅಥವ ಜಾಯಿಕಾಯಿ ರಸ ಮತ್ತು 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಇಳಿಸಿ. ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ಇದು ತುಂಬಾ ರುಚಿಯಾದ ಮತ್ತು ಶಕ್ತಿದಾಯಕ ಪಾಯಸವೂ ಹೌದು. ಮಕ್ಕಳಿಗೆ ಇದೊಂದು ಒಳ್ಳೆಯ ಪೌಷ್ಠಿಕ ಪಾನೀಯ.

Thursday, June 21, 2007

Tomato Peas Pulao/ಟೊಮೆಟೊ ಬಟಾಣಿ ಭಾತ್‌



ಟೊಮೆಟೊ ಬಟಾಣಿ ಭಾತ್‌ :

ಬೇಕಾಗುವ ಸಾಮಗ್ರಿಗಳು:

1ಕಪ್‌ ಅಕ್ಕಿ
4-5 ಚೆನ್ನಾಗಿ ಹಣ್ಣಾಗಿರುವ ಟೊಮೆಟೊ
1/2 ಕಪ್‌ ಹಸಿ ಬಟಾಣಿ
2 ಈರುಳ್ಳಿ
2-3 ಹಸಿ ಮೆಣಸಿನಕಾಯಿ
1 ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್‌
ಎಲೆಎಣ್ಣೆ ಸಾಸಿವೆ, ಜೀರಿಗೆ, ಕರಿಬೇವುಇಂಗು ( ಬೇಕಿದ್ದರೆ)
ಬೆಳ್ಳುಳ್ಳಿ ಮತ್ತು ಶುಂಠಿಪೇಸ್ಟ್‌
1/4 ಚಮಚ ಕಾರದ ಪುಡಿ
1/2 ಚಮಚ ಧನಿಯಾ ಪುಡಿ
1/4 ಚಮಚ ಗರಮ್‌ ಮಸಾಲ,
ಉಪ್ಪು2 ಕಪ್‌ ನೀರು,
ಹೆಚ್ಚಿದ ಕೊತ್ತಂಬರಿ ಸೊಪ್ಪು
ಕಾಯಿ ಅಥವಾ ಕೊಬ್ರಿ
1 ಚಮಚ ನಿಂಬೆರಸ
ಮಾಡುವ ವಿಧಾನ :
ಅಕ್ಕಿ ತೊಳೆದು ನೆನೆಹಾಕಿ. ಟೊಮೆಟೊ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ.

ಕುಕ್ಕರ್‌ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿ, ಎಲೆ ಹಾಕಿ, ಕರಿಬೇವು, ಇಂಗು ಹಾಕಿ ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಹಾಕಬೇಕು.

ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿದ ನಂತರ 2 ನಿಮಿಷ ಬಿಟ್ಟು ಅರಿಶಿನ, ಟೊಮೆಟೊ ಹಾಕಿ ಚೆನ್ನಾಗಿ ಬೆರೆಸಿ. ಬಟಾಣಿ ಬೆರೆಸಿ 5 ನಿಮಿಷದ ನಂತರ ನೀರು ಮತ್ತು ಉಪ್ಪು ಹಾಕಿ ಜೊತೆಯಲ್ಲಿಯೇ ಪುಡಿಗಳನ್ನೆಲ್ಲ ಹಾಕಿ ಕೈಯಾಡಿಸಿ.

ನೀರು ಕುದಿ ಬಂದ ನಂತರ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ, ಬೇಕಾದರೆ ನಿಂಬೆರಸ ಹಿಂಡಿ. ಕಾಯಿತುರಿ ಹಾಕಿ ಮುಚ್ಚಳ ಮುಚ್ಚಿ. ಅಡುಗೆ ತಯಾರಾಗುತ್ತೆ.


Friday, June 15, 2007

Hesarubele Payasa / Moongdal Kheer

ಹೆಸರುಬೇಳೆ ಪಾಯಸ:

ಸಾಮಗ್ರಿಗಳು :

ಹೆಸರುಬೇಳೆ- 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - 1 ಅಥವ ( ಹಾಲು 5-6 ಕಪ್ )
ಏಲಕ್ಕಿ - 5,
ಸಕ್ಕರೆ/ಬೆಲ್ಲ - 21/2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಒಂದು ಕಪ್ ಹೆಸರುಬೇಳೆಯನ್ನು ಒಂದು ಚಮಚ ತುಪ್ಪ ಹಾಕಿ ಘಂ ಎಂದು ಸ್ವಲ್ಪ ಕೆಂಪಗೆ ಆಗುವವರೆಗೂ ಹುರಿಯಿರಿ. ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
ತೆಂಗಿನಹಾಲು ತೆಗೆಯಲು ಕಷ್ಟ ಎನಿಸಿದರೆ ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು.

ಮಾಡುವ ವಿಧಾನ :

ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಹುರಿದ ಹೆಸರುಬೇಳೆಯನ್ನು ಸೇರಿಸಿ ಬೇಳೆ ಬೇಯಲು ಎರಡು ಬಟ್ಟಲು ನೀರು ಹಾಕಿ ಕುದಿಸಬೇಕು. ಹೆಸರುಬೇಳೆ ಬೇಯುವವರೆಗೂ ಚೆನ್ನಾಗಿ ಬೇಯಿಸಿ. ಕುದಿಯುತ್ತಿರುವಾಗಲೆ ಬೆಲ್ಲ ಅಥವ ಸಕ್ಕರೆ ಸೇರಿಸಿ(ಸಕ್ಕರೆ ಹಾಕಿದರೆ ರುಚಿ ಚೆನ್ನಾಗಿರುತ್ತದೆ), ಮಧ್ಯೆ ಮಧ್ಯೆ ಕಲಕುತ್ತಿರಬೇಕು. ಬೇಕಾದರೆ ಕುದಿಯುವಾಗ ಒಂದು ಚಿಕ್ಕಚೂರು ಜಾಕಾಯಿ ಅಥವ ಜಾಯಿಕಾಯಿ ರಸ ಮತ್ತು 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಇಳಿಸಿ. ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ಇದು ತುಂಬಾ ರುಚಿಯಾದ,ತಂಪು ಮತ್ತು ಶಕ್ತಿದಾಯಕ ಪಾಯಸವೂ ಹೌದು.ಇದೊಂದು ಒಳ್ಳೆಯ ಪೌಷ್ಠಿಕ ಪಾನೀಯ.

Tuesday, June 12, 2007

ಖಾರದ ಹೆಸರುಬೇಳೆ ಪೊಂಗಲ್/ Pongal

ಖಾರದ ಹೆಸರುಬೇಳೆ ಪೊಂಗಲ್:

ಸಾಮಗ್ರಿಗಳು:

ಅಕ್ಕಿ - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಜೀರಿಗೆ ಸ್ವಲ್ಪ
ಮೆಣಸು - ಸ್ವಲ್ಪ,ತರಿಯಾಗಿ ಕುಟ್ಟಿಕೊಳ್ಳಿ
ಉಪ್ಪು ರುಚಿಗೆ
ಎಣ್ಣೆ, ಕರಿಬೇವು
ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ, ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಗೋಡಂಬಿಯನ್ನು ಹುರಿದುಕೊಂಡು , ಅದೇ ತುಪ್ಪದಲ್ಲಿ ಜೀರಿಗೆ,ಮೆಣಸು,ಕರಿಬೇವು ಹಾಕಿ. ನಂತರ ಬೆಂದ ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಹುರಿದ ಗೋಡಂಬಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಉಪ್ಪು ಕೂಡ ಹಾಕಿ.ಪೊಂಗಲ್ ಆರಿದ ಮೇಲೆ ತುಂಬಾ ಗಟ್ಟಿಯಾಗುತ್ತದೆ. ಅದಕ್ಕಾಗಿ ತಯಾರಿಸುವಾಗ ಸ್ವಲ್ಪ ತೆಳುವಾಗಿಯೇ ಮಾಡಿಕೊಳ್ಳಿ.ನೀರು ಹಾಕಿ ಸರಿ ಮಾಡಿಕೊಂಡು ಚೆನ್ನಾಗಿ ಬೆರೆಸಿ,ಇಳಿಸಿ. ಪೊಂಗಲ್ ತಿನ್ನಲು ತಯಾರಾಗುತ್ತದೆ.

* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.

Green Beans usali-ಹುರುಳಿಕಾಯಿ ಪಲ್ಯ/ಉಸಲಿ:

ಹುರುಳಿಕಾಯಿ ಪಲ್ಯ/ಉಸಲಿ:

ಬೇಕಾಗುವ ಪದಾರ್ಥಗಳು;

ಹುರುಳಿಕಾಯಿ (ಬೀನ್ಸ್)
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ ರುಚಿಗೆ
ಕಾಯಿತುರಿ,ಕೊತ್ತುಂಬರಿಸೊಪ್ಪು
ನಿಂಬೆರಸ
ಎಣ್ಣೆ,ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು ರುಚಿಗೆ

ವಿಧಾನ:ಮೊದಲು ಹುರುಳಿಕಾಯಿಯನ್ನು ಸಣ್ಣಗೆ ಕತ್ತರಿಸಿ.

ಬಾಣಲೆಗೆ ಎಣ್ಣೆ ಹಾಕಿ,ಕಾದ ಬಳಿಕ,ಸಾಸಿವೆ,ಕಡ್ಲೆಬೇಳೆ,ಉದ್ದಿನಬೇಳೆ,ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ,ಬಾಡಿಸಿ,ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು,ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹುರುಳಿಕಾಯಿಯನ್ನು ಸೇರಿಸಿ,ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ನೀರು ಸ್ವಲ್ಪ ಹಾಕಿ ಹುರುಳಿಕಾಯಿ ಬೇಯುವವರೆಗು ಬೇಯಿಸಿ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಹಾಗು ನಿಂಬೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಬ್ರೆಡ್ ಮಧ್ಯೆ ಸ್ಯಾಂಡ್ ವಿಚ್ ತರಹ ತುಂಬಿ ತಿನ್ನಲು ಕೂಡ ಚೆನ್ನಾಗಿರುತ್ತದೆ.

Lemon Rice/ Nimbehannina chitranna



ನಿಂಬೆಹಣ್ಣಿನ ಚಿತ್ರಾನ್ನ:

ಬೇಕಾಗುವ ಸಾಮಗ್ರಿಗಳು;

ಅನ್ನ ಎರಡು ಬಟ್ಟಲು
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ತಯಾರಿಸುವ ವಿಧಾನ:
ಅನ್ನ ಮಾಡಿದ ನಂತರ ಅದನ್ನು ಅಗಲವಾದ ಪಾತ್ರೆಗೆ ಹಾಕಿ , ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ, ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಹಾಕಿ, ಒಂದು ನಿಮಿಷ ಹುರಿದು, ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ, ಅರಿಶಿಣ ಮತ್ತು ಉಪ್ಪು ಹಾಕಿ, ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ, ಇದು ತಣ್ಣಗಾದ ಮೇಲೆ ಅದಕ್ಕೆ ನಿಂಬೆರಸ ಹಿಂಡಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ, ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ನಿಂಬೆಹಣ್ಣಿನ ಚಿತ್ರಾನ್ನ ತಯಾರ್.

Sunday, June 10, 2007

Kesari Bath - ಕೇಸರಿ ಭಾತ್/ಶಿರಾ

ಕೇಸರಿ ಭಾತ್:

ಬೇಕಾಗುವ ಸಾಮಗ್ರಿಗಳು:

ರವೆ (ಸಣ್ಣ ರವೆ/ಚಿರೋಟಿ ರವೆ)-ಒಂದು ಕಪ್
ಸಕ್ಕರೆ ರುಚಿಗೆ
ತುಪ್ಪ -ಎರಡು ಚಮಚ
ರಿಫೈಂಡ್ ಆಯಿಲ್ -ಎರಡು ಚಮಚ
ಹಾಲು - ಅರ್ಧ ಕಪ್
ಕೇಸರಿ ದಳಗಳು ಸ್ವಲ್ಪ
ಏಲಕ್ಕಿ ಪುಡಿ
ದ್ರಾಕ್ಷಿ ಮತ್ತು ಗೋಡಂಬಿ

ತಯಾರಿಸುವ ರೀತಿ:

ಒಂದೆರಡು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ.
ಮೊದಲು ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಘಂ ಎನ್ನುವ ವಾಸನೆ ಬರುವವರೆಗೂ ರವೆಯನ್ನು ಸೀದಿಸದೆ ಹುರಿದುಕೊಳ್ಳಿ.
ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಿರಿ, ಅದಕ್ಕೆ ಹಾಲು ಮತ್ತು ಸ್ವಲ್ಪ ನೀರು ನಿಮಗೆ ಬೇಕಾದ ಅಳತೆ ಹಾಕಿಕೊಂಡು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಮತ್ತೆರಡು ಚಮಚ ತುಪ್ಪ ಹಾಕಿ, ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟು ಕಟ್ಟದಂತೆ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ತಿರುಗಿಸಿ. ಕೆಳಗಿಳಿಸಿ,ಮುಚ್ಚಿಡಿ. ಕೇಸರಿಭಾತ್ ತಯಾರಿಸುವಾಗ ಸ್ವಲ್ಪ ತೆಳುವಾಗಿ ತಯಾರಿಸಿ, ನಂತರ ತಣ್ಣಗಾದ ಮೇಲೆ ಅದು ತುಂಬಾ ಗಟ್ಟಿಯಾಗುತ್ತದೆ. ತುಪ್ಪ ಸ್ವಲ್ಪ ಜಾಸ್ತಿ ಹಾಕಿ. ಬಿಸಿಬಿಸಿಯಾದ ಕೇಸರಿಭಾತ್ ತಿನ್ನಲು ತಯಾರಾಗಿದೆ. ಬಿಸಿಯಾದ ಕೇಸರಿಭಾತ್ ಬಹಳ ಚೆನ್ನಾಗಿರುತ್ತದೆ.

* ರವೆಯನ್ನು ಹುರಿಯುವಾಗ ತುಂಬಾ ಹುಷಾರಾಗಿ ಹುರಿಯಬೇಕು.
* ಕೇಸರಿಭಾತ್ ಗೆ ಬರೀ ನೀರನ್ನು ಹಾಕದೆ ಹಾಲನ್ನು ಸೇರಿಸಿದರೆ ರುಚಿ ಹೆಚ್ಚು.
* ತುಪ್ಪದ ಜೊತೆ ಎಣ್ಣೆಯನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವುದಿಲ್ಲ.
* ಕೆಲವರು ಕೇಸರಿಬಣ್ಣ ಹಾಕುತ್ತಾರೆ, ಇದರಿಂದ ಕೇಸರಿಭಾತ್ ಬಣ್ಣ ಚೆನ್ನಾಗಿ ಆಕರ್ಷಕವಾಗಿ ಬರುತ್ತದೆ. ಆದರೆ ಕೇಸರಿ ದಳಗಳು ಆರೋಗ್ಯಕ್ಕೆ ಒಳ್ಳೆಯದು, ಆಗಾಗಿ ಅದನ್ನು ಉಪಯೋಗಿಸಿ. ಬಣ್ಣ ಹಾಕಲೇ ಬೇಕೆನಿಸಿದವರು ಒಳ್ಳೆಯ ಪ್ರಾಡಕ್ಟ್ ಬಣ್ಣವನ್ನು ತನ್ನಿ.ಅದು ಚಿಟಿಕೆ ಹಾಕಿದರೆ ಸಾಕು.
* ಇದು ಬೇಗನೇ ತಯಾರಿಸಬಹುದಾದಂತಹ ಸಿಹಿ. ಕೆಲವರು ಈ ಸಿಹಿತಿಂಡಿಗೆ "ಶಿರಾ" ಎಂದು ಕೂಡ ಕರೆಯುತ್ತಾರೆ.

Sunday, June 3, 2007

Holige/Obbattu Saaru - ಹೋಳಿಗೆ/ಒಬ್ಬಟ್ಟಿನ ಸಾರು:


ಹೋಳಿಗೆ /ಒಬ್ಬಟ್ಟಿನ ಸಾರು:

ಬೇಳೆ ಕಟ್ಟು ತೆಗೆಯುವ ವಿಧಾನವು ಹೋಳಿಗೆ ರೆಸಿಪಿಯಲ್ಲಿ ಇದೆ. ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು.ಬೇಳೆಯೂ ಕರಗದಂತೆ ಬೇಯಿಸಿ,ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ.ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು"ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ,ಬೆರೆಸಿ,ಒಲೆ ಮೇಲಿಟ್ಟು ಕುದಿಸಿ,ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".
ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು
ಕರಿಬೇವು ಎಸಳು - ಎರಡು
ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ
ಈರುಳ್ಳಿ - ಒಂದು
ಬೆಳ್ಳುಳ್ಳಿ ಐದಾರು ಎಸಳು
ತೆಂಗಿನಕಾಯಿ ತುರಿ ಸ್ವಲ್ಪ
ಹುಣಸೇಹಣ್ಣು / ಹುಣಸೇರಸ(ಪಲ್ಪ್)
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ / ತುಪ್ಪ
ಸಾಸಿವೆ, ಕರಿಬೇವು
ಇಂಗು,ಜೀರಿಗೆ
ಉಪ್ಪು

ಹುರಿದು ಮಸಾಲೆಪುಡಿ ಮಾಡಿಕೊಳ್ಳಬೇಕಾದ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ದೊಡ್ಡ ಚಮಚಗಳು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಕಾಲು ಚಮಚ
ಮೆಂತ್ಯ - ಕಾಲು ಚಮಚ
ಸಾಸಿವೆ - ಕಾಲು ಚಮಚ
ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ.
ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ.
ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.
ತೆಂಗಿನಕಾಯಿ ತುರಿಗೆ,ಹುರಿದಿರುವ ಈರುಳ್ಳಿ,ಬೆಳ್ಳುಳ್ಳಿ,ಮಸಾಲೆಪುಡಿ,ಹುಣಸೇಹಣ್ಣು,ಬೇಳೆ ಹೂರಣ,ಕೊತ್ತುಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು,ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ,ಎರಡನ್ನು ಚೆನ್ನಾಗಿ ಬೆರೆಸಿ,ಕುದಿಯಲು ಬಿಡಿ.ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ.ಒಂದು ಕುದಿ ಮಾತ್ರ ಕುದಿಸಿ ಇಳಿಸಿ.ಹೋಳಿಗೆ ಸಾರು ತಯಾರಾಗುತ್ತದೆ.
* ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು.
* ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ,ಕುದಿಸಿ,ಕುದಿಸಿ,ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ.

Saturday, June 2, 2007

ಹೋಳಿಗೆ/ಒಬ್ಬಟ್ಟು - Holige / Obbattu

ತೊಗರಿಬೇಳೆ ಹೋಳಿಗೆ:

"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ತೊಗರಿಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಅರ್ಧ ಕೆಜಿ
ತೆಂಗಿನಕಾಯಿ ತುರಿ - ಒಂದು ಬಟ್ಟಲು
ಬೆಲ್ಲ ರುಚಿಗೆ - ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು - ಎರಡು ಬಟ್ಟಲು
ಚಿರೋಟಿ ರವೆ - ಕಾಲು ಕಪ್
ಹಾಲು - ಕಾಲು ಕಪ್
ತುಪ್ಪ - ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ,ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ತೊಗರಿಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ನೀರು ಹೆಚ್ಚಾಗಿ ಹಾಕಿ, ಆ ಬಸಿದ ರಸದಿಂದ ಸಾರು ತಯಾರಿಸಬಹುದು. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ತೊಗರಿಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.

--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

•ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:
•ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
•ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.
•ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ,ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿ.

ಆಮೇಲೆ ಹೂರಣವನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ.

ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು,ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ.

ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ,ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ,ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ,ಪ್ರಸಿದ್ಧಿ ಪಡೆದಿರುವ ಅಡಿಗೆ.


•ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
•ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
•ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
•ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
•ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.
•ಬೇಳೆ ಬಸಿದ ನೀರನ್ನು ಚೆಲ್ಲದೆ ಅದನ್ನು ಹೋಳಿಗೆ ಸಾರಿನಂತೆ ಉಪಯೋಗಿಸಿ,ಈ ಸಾರು ತುಂಬಾ ರುಚಿ ಮತ್ತು ಪೌಷ್ಠಿಕ ವಾಗಿರುತ್ತದೆ. ಏಕೆಂದರೆ ರಸವೆಲ್ಲ ಇದರಲ್ಲೆ ಇರುವುದರಿಂದ ಬರೀ ಬೇಳೆಯಲ್ಲಿ ಏನು ಇರುವುದಿಲ್ಲ.
• ಸಾರಿನ ರೆಸಿಪಿ ಕೂಡ ತಿಳಿಸಿದ್ದೇನೆ,ಹೋಳಿಗೆ ಸಾರು -ಸಾಂಬಾರ್ ಲೇಬಲ್ ನಲ್ಲಿದೆ.

Popular Posts