Sunday, September 18, 2011

Tomato Chutni - ಟಮೋಟ ಚಟ್ನಿ:

ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

ಟಮೋಟ - ಅರ್ಧ ಕೆ.ಜಿ
ಈರುಳ್ಳಿ - ಎರಡು
ಬೆಳ್ಳುಳ್ಳಿ - ಹತ್ತು ಎಸಳು
ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು
ಹುಣಸೆಹಣ್ಣು - ಚಿಕ್ಕ ಗೋಲಿ ಗಾತ್ರ
ಉಪ್ಪು ರುಚಿಗೆ
ಕೊತ್ತುಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ

ಒಗ್ಗರಣೆಗೆ:
ಎಣ್ಣೆ - ಎರಡು/ನಾಲ್ಕು ಚಮಚ
ಸಾಸಿವೆ,ಜೀರಿಗೆ,ಇಂಗು
ಉದ್ದಿನಬೇಳೆ - ಒಂದು ಚಮಚ

ತಯಾರಿಸುವ ವಿಧಾನ:
ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ,ಕಾದ ನಂತರ ಈರುಳ್ಳಿ,ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿಗಳನ್ನು ಹಾಕಿ ಎರಡು ನಿಮಿಷ ಹುರಿಯಿರಿ,ಅದಕ್ಕೆ ಹೆಚ್ಚಿದ ಟಮೋಟಗಳನ್ನು ಹಾಕಿ,ಸ್ವಲ್ಪ ಮೆತ್ತಗಾಗುವಂತೆ ಬೇಯಿಸಿ,ಬೆಂದ ಮೇಲೆ ಒಲೆಯಿಂದ ಇಳಿಸಿ,ಅದರ ಜೊತೆಗೆ ಕೊತ್ತುಂಬರಿಸೊಪ್ಪು,ಕರಿಬೇವು,ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ,ಮಿಕ್ಸಿಗೆ ಹಾಕಿ ಅರೆಯಿರಿ.ನೀರು ಅವಶ್ಯಕತೆ ಇಲ್ಲ,ತುಂಬಾ ನುಣ್ಣಗೆ ರುಬ್ಬಬೇಕಾಗಿಲ್ಲ.
ನಂತರ ಒಗ್ಗರಣೆ ಹಾಕಿ, ಅರೆದಿರುವ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ,ಹಸಿವಾಸನೆ ಹೋಗುವವರೆಗೂ, ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಕುದಿಸಿ,ಮಧ್ಯೆ ತಿರುಗಿಸುತ್ತಿರಿ,ತಳಹತ್ತದಂತೆ ನೋಡಿಕೊಂಡು ಗಟ್ಟಿಯಾದ ನಂತರ ಇಳಿಸಿ.
ಇದು ದೋಸೆ,ಇಡ್ಲಿ,ಚಪಾತಿ ಮತ್ತು ಪಕೋಡಗಳಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಬ್ರೆಡ್ ಸ್ಲೈಸ್ ಮಧ್ಯೆ ಹಚ್ಚಿಕೊಂಡು ಟೋಸ್ಟ್ ಮಾಡಿಕೊಂಡು ಸಹ ತಿನ್ನಬಹುದು. ಟೋಸ್ಟ್ ಮಾಡದೆಯೂ ತಿನ್ನಬಹುದು.

Monday, August 29, 2011

Kadubu - Karjikayi - Holige : ಶ್ರೀ ಸಿದ್ಧಿವಿನಾಯಕ ಗಣಪತಿ

 ಶ್ರೀ ಗೌರಿ ಮತ್ತು ಶ್ರೀ ಗಣೇಶ ಹಬ್ಬದ ಶುಭಾಷಯಗಳು.

ಶ್ರೀ ಸಿದ್ಧಿವಿನಾಯಕ ಗಣಪತಿ
                        
                                              ಮುಂಬಯಿ ನಗರದ ಶ್ರೀ ಸಿದ್ಧಿವಿನಾಯಕ ಗಣಪತಿ

 ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದಾ ||


ಶ್ರೀ ಸಿದ್ಧಿವಿನಾಯಕ ಗಣಪತಿಗಾಗಿ ಕಡುಬನ್ನು ತಯಾರಿಸುತ್ತೇವೆ. ಗಣೇಶನು ಕಡುಬು ಪ್ರಿಯನು.ಮೋದಕ ಪ್ರಿಯನು ಸಹ. ಕುರುಕುತಿಂಡಿಯೂ ಸಹ ಆತನಿಗೆ ಅಚ್ಚುಮೆಚ್ಚು.

ಕುರುಕು ತಿಂಡಿಗೆ ಲೇಬಲ್ ನಲ್ಲಿರುವ  SNACKS  ಲಿಂಕ್ ನೋಡಿ.

Chakkuli
Kodubale - Spicy Rings

ಕಡುಬಿನ ರೆಸಿಪಿಗಾಗಿ  ಇಲ್ಲಿ ತಿಳಿಸಿರುವ ಲಿಂಕ್ ಅನ್ನು ನೋಡಿ.

Khara Kadubu - Hesarubele kadubu- Moongdal Kadubu
Karida Kadubu - Karigadubu
Karjikaayi - Sweet kadubu
Kadubina Hittu
Sihi Kadubu

ಮೇಲೆ ತಿಳಿಸಿರುವ ಲಿಂಕ್ ನಲ್ಲಿ, ಅಕ್ಕಿಹಿಟ್ಟು/ಕಡುಬಿನ ಮುದ್ದೆ ತಯಾರಿಸುವ ರೀತಿ, ಖಾರ ಕಡುಬು, ಸಿಹಿ ಕಡುಬು, ಕರ್ಜಿಕಾಯಿ, ಕರಿದ ಕಡುಬು ಅಥವಾ ಕರಿಗಡುಬು ಈ ಅಡಿಗೆಗಳನ್ನು ವಿವರವಾಗಿ ಬರೆಯಲಾಗಿದೆ.
ಗೌರಿ ಹಬ್ಬಕ್ಕಾಗಿ ಹೋಳಿಗೆ/ಒಬ್ಬಟ್ಟು ವಿಶೇಷತೆ , ಅದನ್ನು ಹೋಳಿಗೆ/ ಒಬ್ಬಟ್ಟು ಲೇಬಲ್ ನಲ್ಲಿ ನೋಡಿ.
Holige - obbattu

Wednesday, August 17, 2011

Rave Unde- Rava laddu-Soji Laddu

Sree Krishna Janmastami Special
Happy Krishnaastami


Rave Unde - Click this link:

Kadubu-ಕಡುಬು

ಕಡುಬು ತಯಾರಿಸುವ ವಿಧಾನವನ್ನು ತಿಳಿಯಲು ಲೇಬಲ್ಸ್ ನಲ್ಲಿ ಕಡುಬು ಕ್ಲಿಕ್ ಮಾಡಿನೋಡಿ.

Thursday, August 4, 2011

Holige & Obbattu Saaru - ಹೋಳಿಗೆ & ಹೋಳಿಗೆ ಸಾರು:

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಬೇಕು. ಹೋಳಿಗೆ,ಕಡುಬು,ಪಾಯಸ,ಹಾಲು ಹೋಳಿಗೆ,ಮೋದಕ,ಶ್ಯಾವಿಗೆ,ಪೊಂಗಲ್,ಖೀರು ಮತ್ತು ಸಿಹಿ ಉಂಡೆಗಳು ಹೀಗೆ ಇನ್ನು ವಿವಿಧ ರೀತಿಯ ಸಿಹಿ ಅಡಿಗೆಗಳಿವೆ.  
ಶ್ರಾವಣ ಮಾಸ ಬಂದಾಗ, ಹಬ್ಬಗಳು ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣವಿದ್ದಾಗ, ಅಡುಗೆ ಮನೆಯಲ್ಲಿ ಸಿಹಿ ಅಡುಗೆಗಳ ಸಂಭ್ರಮ.

* ಶ್ರೀ ವರಮಹಾಲಕ್ಷ್ಮೀ  ಹಬ್ಬದ ಶುಭಾಷಯಗಳು !! 


"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ  ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ತೊಗರಿಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಅರ್ಧ ಕೆಜಿ
ತೆಂಗಿನಕಾಯಿ ತುರಿ - ಒಂದು ಬಟ್ಟಲು
ಬೆಲ್ಲ ರುಚಿಗೆ - ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು - ಎರಡು ಬಟ್ಟಲು
ಚಿರೋಟಿ ರವೆ - ಕಾಲು ಕಪ್
ಹಾಲು - ಕಾಲು ಕಪ್
ತುಪ್ಪ - ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ,ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ತೊಗರಿಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ನೀರು ಹೆಚ್ಚಾಗಿ ಹಾಕಿ, ಆ ಬಸಿದ ರಸದಿಂದ ಸಾರು ತಯಾರಿಸಬಹುದು. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ತೊಗರಿಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು  ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.

--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

•ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:


•ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
•ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.
•ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ,ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿ.

ಆಮೇಲೆ  ಹೂರಣವನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ.

ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು,ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ  ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ.

ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ,ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ,ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು  ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ,ಪ್ರಸಿದ್ಧಿ ಪಡೆದಿರುವ ಅಡಿಗೆ.


•ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
•ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
•ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
•ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
•ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.
•ಬೇಳೆ ಬಸಿದ ನೀರನ್ನು ಚೆಲ್ಲದೆ ಅದನ್ನು ಹೋಳಿಗೆ ಸಾರಿನಂತೆ ಉಪಯೋಗಿಸಿ,ಈ ಸಾರು ತುಂಬಾ ರುಚಿ ಮತ್ತು ಪೌಷ್ಠಿಕ ವಾಗಿರುತ್ತದೆ. ಏಕೆಂದರೆ ರಸದಲ್ಲೆ ಸಾರವೆಲ್ಲ  ಇರುವುದರಿಂದ ಬರೀ ಬೇಳೆಯಲ್ಲಿ ಏನು ಇರುವುದಿಲ್ಲ.

ಹೋಳಿಗೆ ಸಾರಿನ ರೆಸಿಪಿ:


ಹೋಳಿಗೆ /ಒಬ್ಬಟ್ಟಿನ ಸಾರು:

ಬೇಳೆ ಕಟ್ಟು ತೆಗೆಯುವ ವಿಧಾನವು ಹೋಳಿಗೆ ರೆಸಿಪಿಯಲ್ಲಿ ಇದೆ. ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು.ಬೇಳೆಯೂ ಕರಗದಂತೆ ಬೇಯಿಸಿ,ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ.ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು"ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ,ಬೆರೆಸಿ,ಒಲೆ ಮೇಲಿಟ್ಟು ಕುದಿಸಿ,ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು
ಕರಿಬೇವು ಎಸಳು - ಎರಡು

ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ
ಈರುಳ್ಳಿ - ಒಂದು
ಬೆಳ್ಳುಳ್ಳಿ ಐದಾರು ಎಸಳು
ತೆಂಗಿನಕಾಯಿ ತುರಿ ಸ್ವಲ್ಪ
ಹುಣಸೇಹಣ್ಣು / ಹುಣಸೇರಸ(ಪಲ್ಪ್)
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ / ತುಪ್ಪ
ಸಾಸಿವೆ, ಕರಿಬೇವು
ಇಂಗು,ಜೀರಿಗೆ
ಉಪ್ಪು



ಹುರಿದು ಮಸಾಲೆಪುಡಿ ಮಾಡಿಕೊಳ್ಳಬೇಕಾದ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ದೊಡ್ಡ ಚಮಚಗಳು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಕಾಲು ಚಮಚ
ಮೆಂತ್ಯ - ಕಾಲು ಚಮಚ
ಸಾಸಿವೆ - ಕಾಲು ಚಮಚ
ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ.
ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ.
ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.
ತೆಂಗಿನಕಾಯಿ ತುರಿಗೆ,ಹುರಿದಿರುವ ಈರುಳ್ಳಿ,ಬೆಳ್ಳುಳ್ಳಿ,ಮಸಾಲೆಪುಡಿ,ಹುಣಸೇಹಣ್ಣು,ಬೇಳೆ ಹೂರಣ,ಕೊತ್ತುಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು,ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ,ಎರಡನ್ನು ಚೆನ್ನಾಗಿ ಬೆರೆಸಿ,ಕುದಿಯಲು ಬಿಡಿ.ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ.ಒಂದು ಕುದಿ ಮಾತ್ರ ಕುದಿಸಿ ಇಳಿಸಿ.ಹೋಳಿಗೆ ಸಾರು ತಯಾರಾಗುತ್ತದೆ.
* ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು.
* ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ,ಕುದಿಸಿ,ಕುದಿಸಿ,ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ.

ಹೋಳಿಗೆ ತಯಾರಿಸುವ ವಿಧಾನದ ಲಿಂಕ್ :

http://indiankannadarecipes.blogspot.com/2007/06/holige-obbattu.html

Monday, July 25, 2011

Simple GoLiBaje - ಗೋಳಿ ಬಜೆ:

ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ.


ಗೋಳಿ ಬಜೆ:

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು - ಒಂದು ಬಟ್ಟಲು
ಮೊಸರು - ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು
ಸಕ್ಕರೆ ಪುಡಿ - ಅರ್ಧ ಚಮಚಸೋಡ- ಚಿಟಿಕೆ
ಉಪ್ಪು- ರುಚಿಗೆ ಬೇಕಾಗುವಷ್ಟು
ಎಣ್ಣೆ - ಕರಿಯಲು

ತಯಾರಿಸುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.


ಮೈದಾಗೆ ಸೋಡಾ ಪುಡಿ,ಉಪ್ಪು,ಸಕ್ಕರೆಪುಡಿ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ.ತುಂಬಾ ತೆಳ್ಳಗೆ ಇರಬಾರದು, ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು. ಕೈನಲ್ಲಿ ತೆಗೆದುಕೊಂಡು ಬಿಡುವಂತಿರಬೇಕು.
ಎಣ್ಣೆ ಕಾದ ನಂತರ ಕಲೆಸಿದ ಮಿಶ್ರಣವನ್ನು ಕೈನಲ್ಲಿ ತೆಗೆದುಕೊಂಡು ಒಂದೊಂದಾಗಿ ಚಿಕ್ಕದಾಗಿ ಗುಂಡಗೆ ಎಣ್ಣೆಯಲ್ಲಿ  ಬಿಡಿ. ಬೋಂಡಾ ತರಹ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿದು, ತೆಗೆಯಿರಿ, ಪೇಪರ್ ಟವಲ್ ಮೇಲೆ ಹಾಕಿ, ಸಾಸ್ ಅಥವ ಚಟ್ನಿ  ಜೊತೆ ಸರ್ವ್ ಮಾಡಿ.

Tuesday, July 19, 2011

Bisi Bele Bhath Powder- ಬಿಸಿಬೇಳೆ ಭಾತ್ ಪುಡಿ:

ಬಿಸಿಬೇಳೆ ಭಾತ್ ಪುಡಿ:

ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-೨
ಲವಂಗ-೪
ಚೆಕ್ಕೆ-ಒಂದಿಂಚಿನ ಚೂರು
ಮೆಣಸು - ಅರ್ಧ ಚಮಚ ಮತ್ತು
ಒಣಕೊಬ್ಬರಿ ಸ್ವಲ್ಪ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ- ಕ್ರಮವಾಗಿ ಒಂದೊಂದು ಚಮಚ

ಪುಡಿ ತಯಾರಿಸುವ ಮುಂಚೆ ಗಮನಿಸಬೇಕಾದ ಅಂಶಗಳು:

ಕಡ್ಲೆಬೇಳೆ,ಉದ್ದಿನಬೇಳೆಯನ್ನು ಬೇಕೆನಿಸಿದರೆ ಹಾಕಿಕೊಳ್ಳಬಹುದು. ಇದನ್ನು ಹಾಕಿದರೆ ಅದರ ಪರಿಮಳ ಮತ್ತು ರುಚಿ ಎರಡು ಚೆನ್ನಾಗಿರುತ್ತದೆ. ಬೇಡವೆಂದರೆ ಬೇಳೆಗಳನ್ನು ಹಾಕದೇ ಸಹ ಪುಡಿ ತಯಾರಿಸಬಹುದು. ಬೇಳೆಗಳನ್ನು ಹಾಕುವುದರಿಂದ ಭಾತ್ ನೀರು ಹೊಡೆದಂತೆ ಇರುವುದಿಲ್ಲ, ಬೇಳೆಗಳನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ನಿಮಗೆ ಹೇಗೆ ಬೇಕೋ ಹಾಗೆ ತಯಾರಿಸಿಕೊಳ್ಳಿ.

ಒಣಮೆಣಸಿನ ಕಾಯಿಗಳನ್ನು ಖಾರಕ್ಕೆ ಮತ್ತು ಬಣ್ಣಕ್ಕೆ ಸರಿಹೊಂದುವಂತಹ ಕಾಯಿಗಳನ್ನು ಬಳಸಿ, ಪುಡಿಯ ಬಣ್ಣ ಮತ್ತು ಖಾರ ಎರಡು ಸಹ ನೀವು ಬಳಸುವ ಮೆಣಸಿನಕಾಯಿಗಳನ್ನು ಅವಲಂಬಿಸಿರುತ್ತದೆ.

ಈ ಪ್ರಮಾಣವೂ ಒಂದು ಬಾರಿ ಬಿಸಿಬೇಳೆಭಾತ್ ತಯಾರಿಸುವುದಕ್ಕೆ ಮಾತ್ರ ಕೊಟ್ಟಿರುವುದು. ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪುಡಿ ಬೇಕೆನಿಸಿದರೆ ಅದಕ್ಕೆ ತಕ್ಕಂತೆ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ.

ತಯಾರಿಸುವ ವಿಧಾನ:

* ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.

* ಕೊಬ್ಬರಿಯನ್ನು ಸ್ವಲ್ಪ ಹುರಿದುಕೊಳ್ಳಿ, ಯಾವ ಸಾಮಗ್ರಿಗಳನ್ನು ಸೀದಿಸಬಾರದು.

* ಒಂದೊಂದಾಗಿ ಬೇಕಾದರೂ ಹುರಿದುಕೊಳ್ಳಬಹುದು ಅಥವಾ ಗೊತ್ತಿರುವವರೂ ಹದಕ್ಕೆ ಸರಿಯಾಗಿ ಎಲ್ಲವನ್ನು ಒಂದೊಂದಾಗಿ ಸೇರಿಸುತ್ತಾ ಹುರಿದುಕೊಳ್ಳಬಹುದು.

* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಕ್ಷಣವೇ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.

* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.

* ಧನಿಯಾ/ಕೊತ್ತುಂಬರಿ ಬೀಜಗಳನ್ನು ಹಾಕಿ ಪ್ರೆಶ್ ಆಗಿ ಹುರಿದು ಪುಡಿ ಮಾಡಿದರೆ ಅದರ ಸುವಾಸನೆಯು ಪುಡಿಯಲ್ಲಿ ಸೇರಿಕೊಳ್ಳುತ್ತದೆ. ಇದೆಲ್ಲಾ ಹುರಿದು ರಂಪ ಮಾಡುವವರಾರು ಎಂದು ಧನಿಯ ಪುಡಿಯನ್ನು ಬಳಸಬಹುದು. ಆದರೆ ಪುಡಿ ಘಮ ಘಮ ಎನ್ನುವುದಿಲ್ಲ, ಅದರ ಪರಿಮಳವೂ ಅಷ್ಟಾಗಿ ಇರುವುದಿಲ್ಲ. ಯಾವಾಗಲಾದರೊಮ್ಮೆ ತುಂಬಾ ಅರ್ಜೆಂಟ್ ಇದ್ದಾಗ ರೆಡಿಮೆಡ್ ಪುಡಿಗಳನ್ನು (ಮೆಣಸಿನಕಾಯಿ ಮತ್ತು ಕೊತ್ತುಂಬರಿಯ ಪುಡಿ) ಬಳಸಿಕೊಳ್ಳಿ.

* ಪುಡಿಯನ್ನು ಸ್ಟೋರ್ ಮಾಡಿರುವ ಡಬ್ಬಿಗೆ ಒದ್ದೆಯ ಚಮಚವನ್ನು ಹಾಕಬೇಡಿ. ಪ್ರಿಡ್ಜ್ ನಲ್ಲಿ ಇಟ್ಟರೆ ಇನ್ನೂ ಹೆಚ್ಚು ಫ್ರೆಶ್ ಆಗಿರುತ್ತದೆ.

* ಬಿಡುವಿದ್ದಾಗ ಪುಡಿ ತಯಾರಿಸಿಟ್ಟುಕೊಂಡರೆ, ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ನೀರು ಹೆಚ್ಚಾಗಿ ಹಾಕಿ ಬೇಯಿಸಿ,ಪುಡಿ ಹಾಕಿ, ಉಪ್ಪು,ಹುಳಿ ಮತ್ತು ಸ್ವಲ್ಪ ಬೆಲ್ಲ ಹಾಗೂ ಒಗ್ಗರಣೆ ಹಾಕಿ,ಬೇಗ ಬಿಸಿಬೇಳೆಭಾತ್ ತಯಾರಿಸಬಹುದು.

Wednesday, April 20, 2011

Beans Palya - ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಹುರುಳಿಕಾಯಿ /ಬೀನ್ಸ್ ನಲ್ಲಿ ಬಲಿತಿರುವ ಕಾಯಿ ತೆಗೆದುಕೊಂಡರೆ ಅದರಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಮತ್ತು ಹಸಿರಾಗಿರುವ ಕಾಯಿಯನ್ನು ತೆಗೆದುಕೊಳ್ಳಿ. ಹುರುಳಿಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಲ್ಯ,ಸಾರು,ಸಾಗು ಯಾವುದಕ್ಕೆ ಬೇಕಾದರೂ ಇದನ್ನು ಬಳಸಬಹುದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇಲ್ಲಿ ಬರೆದಿರುವ ಸಿಂಪಲ್ ಪಲ್ಯದಲ್ಲಿಯೇ ತುಂಬಾ ರುಚಿ ಜಾಸ್ತಿಯಾಗಿರುತ್ತದೆ. ಈ ಪಲ್ಯ ಸೈಡ್ ಡಿಶ್ ಅಥವಾ ಚಪಾತಿ,ಪೂರಿ,ಪರೋಟ ಮತ್ತು ಬ್ರೆಡ್ ಜೊತೆ ಸಹ ಚೆನ್ನಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವ ಪಲ್ಯ. ಎಲ್ಲರಿಗೂ ತಿಳಿದಿರುವಂತೆ ಹುರುಳಿಕಾಯಿ ಪಲ್ಯದ ಪಫ್ ನಲ್ಲಿ ಅಂತೂ ಹೆಚ್ಚಿನ ರುಚಿ ಇರುತ್ತದೆ. ಪಫ್ ತಯಾರಿಸುವಾಗ ಆಲೂಗೆಡ್ಡೆ ಪಲ್ಯದ ಬದಲು, ಈ ಪಲ್ಯಕ್ಕೆ ಸ್ವಲ್ಪ ಮಸಾಲೆ ಹಾಕಿ ಬಳಸಬಹುದು.

ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಬೇಕಾಗುವ ಪದಾರ್ಥಗಳು;

ಹುರುಳಿಕಾಯಿ - ಅರ್ಧ ಕಿಲೋ
ಈರುಳ್ಳಿ - ಒಂದು, ಸಣ್ಣಗೆ ಹೆಚ್ಚಿ,
ಹಸಿಮೆಣಸಿನಕಾಯಿ -ರುಚಿಗೆ, ಉದ್ದಕ್ಕೆ ಸೀಳಿಕೊಂಡರೆ ಉತ್ತಮ
ಎಣ್ಣೆ - ಅವಶ್ಯಕತೆ ಇದ್ದಷ್ಟು
ಸಾಸಿವೆ ಸ್ವಲ್ಪ
ಕರಿಬೇವು- ಒಂದು ಗರಿ, ಆಗೇ ಕೈಯಲ್ಲಿ ಮುರಿದುಕೊಳ್ಳಿ.
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದು ಚಮಚ
ಅರಿಶಿನ ಚಿಟಿಕೆ
ಉಪ್ಪು ರುಚಿಗೆ
ಕಾಯಿತುರಿ ಸ್ವಲ್ಪ ಜಾಸ್ತಿ ಇರಲಿ
ಕೊತ್ತುಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು.

ವಿಧಾನ:

ಮೊದಲು ಹುರುಳಿಕಾಯಿಯನ್ನು ಚೆನ್ನಾಗಿ ತೊಳೆದು, ನಾರು ತೆಗೆದು ಬಿಡಿಸಿಕೊಂಡು, ಕಾಯಿಯನ್ನು ಸಣ್ಣಗೆ ಒಂದೇ ಸಮನಾಗಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಬಾಡಿಸಿ, ಕರಿಬೇವು, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೆಚ್ಚಿದ ಹುರುಳಿಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಎಳೆಯದಾಗಿದ್ದರೆ ಬೇಗ ಬೇಯುವುದು, ಬಲಿತಿದ್ದರೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ. ಎರಡು ಬ್ರೆಡ್ ಗಳ ಮಧ್ಯೆಯೂ ಪಲ್ಯ ಇಟ್ಟು ತಿನ್ನಬಹುದು, ಪಫ್ ತರಹ ರುಚಿಯಾಗಿರುತ್ತದೆ.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.

Monday, March 21, 2011

Rasam Powder - ರಸಂ ಪುಡಿ / ರಸಂ ಪೌಡರ್

ರಸಂ ಪುಡಿ / ರಸಂ ಪೌಡರ್  

ಬೇಕಾಗುವ ಪದಾರ್ಥಗಳು:


ಒಣ ಮೆಣಸಿನ ಕಾಯಿ - ಒಂದು ಬಟ್ಟಲು
ಧನಿಯಾ ಬೀಜ - ಅರ್ಧ ಬಟ್ಟಲು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಒಂದು ದೊಡ್ಡ ಚಮಚ
ಮೆಂತ್ಯ - ದೊಡ್ಡ ಚಮಚದಲ್ಲಿ ಅರ್ಧ
ಕರಿಬೇವು - ಒಂದು ಬಟ್ಟಲು
ಅರಿಶಿಣ - ಒಂದು ಚಿಕ್ಕ ಚಮಚ
ಇಂಗು - ಒಂದು ಚಿಕ್ಕ ಚಮಚ
ಎಣ್ಣೆ - ಅರ್ಧ ಚಮಚ

ತಯಾರಿಸುವ ವಿಧಾನ:


ಬಾಣಲೆಗೆ ಮೆಣಸಿನಕಾಯಿ, ಧನಿಯಾ, ಜೀರಿಗೆ,ಮೆಂತ್ಯ,ಮೆಣಸು ಮತ್ತು ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹುರಿಯಿರಿ, ಹೀಗೆ ಹುರಿದ ನಂತರ ಮೆಣಸಿನಕಾಯಿಯನ್ನು ಮುರಿದು ಪರೀಕ್ಷೆ ಮಾಡಿ, ಅದು ಗರಿಗರಿಯಾಗಿದ್ದು ಅದುಮಿದ ತಕ್ಷಣ ಮುರಿದುಕೊಂಡರೆ ಹುರಿದಿದ್ದು ಸಾಕು, ನಂತರ ಅದಕ್ಕೆ ಅರಿಶಿಣ/ಅರಿಶಿನ , ಇಂಗು ಮತ್ತು ಎಣ್ಣೆ ಹಾಕಿ, ಸ್ಟೌವ್ ಆರಿಸಿ, ಈಗ ಎಲ್ಲವನ್ನು ಚೆನ್ನಾಗಿ ಬೆರೆಸಿ. ಸ್ವಲ್ಪ ಹೊತ್ತು ಹಾಗೆಯೇ ತಣ್ಣಗಾಗಲು ಬಿಡಿ.  ಬಾಣಲೆಯಲ್ಲಿರುವ ಸಾಮಗ್ರಿಗಳು ತಣ್ಣಗಾದ ಬಳಿಕ, ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.ಘಮ ಘಮ ರಸಂ ಪುಡಿ ಸಿದ್ಧವಾಗುತ್ತದೆ.
ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ದಿನ ಶ್ರಮವಹಿಸಿ ಪುಡಿಯನ್ನು ತಯಾರಿಸಿಟ್ಟುಕೊಂಡರೆ, ಬೇಕಾದಾಗ ರುಚಿಯಾದ ರಸಂ ಅನ್ನು ತಯಾರಿಸಬಹುದು.

# ಗಮನಿಸಬೇಕಾದ ಅಂಶಗಳು:

*  ಒಣ ಮೆಣಸಿನಕಾಯಿಯನ್ನು ಅರ್ಧಕ್ಕೆ ಮುರಿದು ಬಟ್ಟಲಿಗೆ ಹಾಕಿ, ಒಂದು ಪ್ರಮಾಣದಲ್ಲಿ ಮೆಣಸಿನಕಾಯಿ ತೆಗೆದುಕೊಂಡರೆ, ಅದರ ಅರ್ಧದಷ್ಟು ಪ್ರಮಾಣದಲ್ಲಿ ಧನಿಯಾ ಬೀಜಗಳನ್ನು ತೆಗೆದುಕೊಳ್ಳಿ.

*  2:1 ಪ್ರಮಾಣದಲ್ಲಿ ಮೆಣಸಿನಕಾಯಿ ಮತ್ತು ಧನಿಯಾ ತೆಗೆದುಕೊಳ್ಳಿ.

*  ಖಾರವು ಮೆಣಸಿನಕಾಯಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಒಂದೊಂದು ಮೆಣಸಿನಕಾಯಿ ಒಂದೊಂದು ರೀತಿಯ   ಕಾರವನ್ನು ಹೊಂದಿರುತ್ತದೆ. ಬಣ್ಣ ಸಹ. ಆಗಾಗಿ ನಿಮಗೆ ಸರಿ ಎನಿಸಿದ ಮೆಣಸಿನಕಾಯಿಗಳನ್ನು ಹಾಕಿ.

ಬಣ್ಣ ಕೊಡುವ ಮೆಣಸಿನಕಾಯಿ, ಕಾರ ಕೊಡುವ ಮೆಣಸಿನಕಾಯಿ,ಬ್ಯಾಡಗಿ ಮೆಣಸಿನಕಾಯಿ ಹೀಗೆ ಮೆಣಸಿನಕಾಯಿಯಲ್ಲಿ ನಾನಾ ವಿಧವಿರುವುದರಿಂದ ನಿಮಗೆ ಬೇಕಾದ ಮೆಣಸಿನಕಾಯಿ ಬಳಸಿ. ಇಲ್ಲವೆಂದರೆ ಎರಡು ಅರ್ಧ-ಅರ್ಧ ಹಾಕಬಹುದು.

* ಕರಿಬೇವು ಸಹ ಇಲ್ಲಿ ಮುಖ್ಯವಾಗಿರುತ್ತದೆ.

*  ಪದಾರ್ಥಗಳನ್ನು ಹುರಿಯುವಾಗ ಸರಿಯಾದ ಹದದಲ್ಲಿ ಹುರಿಯಿರಿ, ಸೀದಿಸಬೇಡಿ. ತಣ್ಣಗಾದ ನಂತರವೇ ಮಿಕ್ಸಿಗೆ ಹಾಕಬೇಕು.


Friday, March 11, 2011

Tomato Chitranna Gojju:ಟೊಮೋಟೊ ಚಿತ್ರಾನ್ನ ಗೊಜ್ಜು:





ಟೊಮೋಟೊ ಚಿತ್ರಾನ್ನ ಗೊಜ್ಜು:

ಬೇಕಾಗುವ ಸಾಮಗ್ರಿಗಳು:


ಟೊಮೋಟೊ- ನಾಲ್ಕು ಮಧ್ಯಮ ಗಾತ್ರದ್ದು
ಈರುಳ್ಳಿ - ಒಂದೆರಡು
ಹಸಿಮೆಣಸಿನಕಾಯಿ - ಎರಡು
ಎಣ್ಣೆ - ಒಗ್ಗರಣೆಗೆ
ಕಡ್ಲೆಬೇಳೆ - ಒಂದು ಚಮಚ
ಉದ್ದಿನ ಬೇಳೆ - ಒಂದು ಚಮಚ
ಸಾಸಿವೆ - ಕಾಲು ಚಮಚ
ಜೀರಿಗೆ - ಕಾಲು ಚಮಚ
ಅರಿಶಿಣ - ಚಿಟಿಕೆ
ಕರಿಬೇವು ಸ್ವಲ್ಪ
ಕೊತ್ತುಂಬರಿ ಸೊಪ್ಪು
ಅಚ್ಚ ಕಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು


ತಯಾರಿಸುವ ವಿಧಾನ:

ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ. ಕೊತ್ತುಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ. ನಂತರ ಈರುಳ್ಳಿ,ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ. ನಂತರ ಅದಕ್ಕೆ ಅರಿಶಿಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.
ಈ ಒಗ್ಗರಣೆ ಗೊಜ್ಜನ್ನು ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ಟೊಮೋಟೊ ಚಿತ್ರಾನ್ನ ತಯಾರಾಗುತ್ತದೆ.

Wednesday, March 9, 2011

ಕರದಂಟು / ಅಂಟಿನ ಉಂಡೆ : Karadantu / Antunde

ಕರದಂಟು ಅಥವಾ ಅಂಟಿನ ಉಂಡೆ ಇದು ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ತುಂಬಾ ಪ್ರಸಿದ್ಧಿಯಾದ ಸಿಹಿ ತಿನಿಸು. ಬೆಳಗಾಂ ಎಂದರೆ ಮೊದಲು ನೆನಪಿಗೆ ಬರುವುದೆ ಕರದಂಟು. ಇಲ್ಲೆಲ್ಲ ನಾವು ಅವರ ತರಹ ರೆಸಿಪಿಯಲ್ಲೇ ತಯಾರಿಸಿದರು ಸಹ, ಅವರು ತಯಾರಿಸುವ ಕರದಂಟಿನ ರುಚಿಯೇ ಅದ್ಭುತ. ಅದಕ್ಕಾಗಿಯೇ ಅಲ್ಲವೆ ಬೆಳಗಾವಿಗೂ ಕರದಂಟಿಗೂ ನೆಂಟು. ಅಂಟುಂಡೆ ಎಂದು ಕೆಲವರು ಕರೆಯುತ್ತಾರೆ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರದಲ್ಲಿ ಉಂಡೆ ಕಟ್ಟುವುದರಿಂದ ಕರದಂಟು ಎಂತಲೂ ಅಥವಾ ಅಂಟನ್ನು ಕರಿದು ಅರ್ಥಾತ್ ಹುರಿದು ತಯಾರಿಸುವುದರಿಂದಲೂ ಈ ಹೆಸರು ಬಂದಿರಬಹುದೇನೋ ಎಂದು ನನ್ನ ಅನಿಸಿಕೆ. ಯಾವುದರಿಂದಲಾದರೂ ಹೆಸರು ಬರಲಿ ಈ ಉತ್ತಮವಾದ ಉಂಡೆಯಂತೂ ತಿನ್ನಲು ಬಲು ರುಚಿ ಮತ್ತು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ. ಇದನ್ನು ಋತುಮತಿಯಾದವರಿಗೆ ಮತ್ತು ಬಾಣಂತಿಯರಿಗೆ ತಿನ್ನಲು ನೀಡಿದರೆ ತುಂಬಾ ಒಳ್ಳೆಯದು. ಈ ಕರದಂಟು ಉಂಡೆಯನ್ನು ಅವರು ತಿನ್ನುವುದರಿಂದ ಅವರಿಗೆ ಆ ಸಮಯದಲ್ಲಿ ಅವರಿಗೆ ಬೇಕಾದ ಶಕ್ತಿ ಮತ್ತು ಎಲ್ಲಾ ಪೌಷ್ಠಿಕಾಂಶಗಳು ದೊರೆಯುತ್ತವೆ. ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.


ಕರದಂಟು / ಅಂಟಿನ ಉಂಡೆ :

ಬೇಕಾಗುವ ಸಾಮಗ್ರಿಗಳು:

ಖರ್ಜೂರ - ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ಗೋಡಂಬಿ- ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಅಂಟು - ಕಾಲು ಬಟ್ಟಲು / ಸ್ವಲ್ಪ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ


ತಯಾರಿಸುವ ವಿಧಾನ:

ಖರ್ಜೂರ,ಬಾದಾಮಿ ಮತ್ತು ಗೋಡಂಬಿಯನ್ನು ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ, ಮೊದಲು ಇಷ್ಟನ್ನು ತಯಾರಿಸಿಟ್ಟು ಕೊಂಡರೆ ಉಂಡೆ ತಯಾರಿಸುವಾಗ ಸುಲಭವಾಗುತ್ತದೆ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.

ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:

ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.


* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.
* ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಅಂಟನ್ನು ಹುರಿದುಕೊಳ್ಳಿ. ಚಿಕ್ಕ ಚಿಕ್ಕ ಚೂರು ಮಾಡಿಕೊಂಡು ಹುರಿದರೆ, ಚೆನ್ನಾಗಿರುತ್ತದೆ, ಇಲ್ಲವೆಂದರೆ ತಿನ್ನುವಾಗ ಒಂದೇ ಕಡೆ ಸಿಗುತ್ತದೆ.
* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಇದರಲ್ಲಿ ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು, ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು, ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.
* ಕೊಬ್ಬರಿ ತುರಿ ಅಂಗಡಿಯಲ್ಲಿ ಸಿಗುವ ಡೆಸಿಕೆಟೆಡ್ ಕೊಕೋನಟ್ ಪೌಡರ್/ ರೆಡಿಮೇಡ್ ಕೊಬ್ರಿ ತುರಿ ಹಾಕಿದರೆ ಚೆನ್ನಾಗಿರುವುದಿಲ್ಲ. ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ.

Monday, March 7, 2011

ಕ್ಯಾರೆಟ್-ಎಲೆಕೋಸು ಸಲಾಡ್: Carrot-Cabbage Salad

ಕ್ಯಾರೆಟ್-ಎಲೆಕೋಸು ಸಲಾಡ್:

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ ತುರಿ - ಒಂದು ಬಟ್ಟಲು
ಎಲೆಕೋಸು ತುರಿ - ಒಂದು ಬಟ್ಟಲು
ಉಪ್ಪು ಮತ್ತು ಕರಿ ಮೆಣಸಿನ ಪುಡಿ - ರುಚಿಗೆ ತಕ್ಕಂತೆ
ಮಯೊನೈಸ್ (Mayonnaise) - ಎರಡು ದೊಡ್ಡ ಚಮಚ
ಕೊತ್ತುಂಬರಿ ಸೊಪ್ಪು ಸ್ವಲ್ಪ



ತಯಾರಿಸುವ ವಿಧಾನ:

ಕ್ಯಾರೆಟ್ ಮತ್ತು ಎಲೆಕೋಸು ತುರಿಯನ್ನು ಬೆರೆಸಿ, ಅದಕ್ಕೆ ಮಯೊನೈಸ್,ಉಪ್ಪು ಮತ್ತು ಮೆಣಸಿನಪುಡಿಯನ್ನು ಸೇರಿಸಿ, ಅದು ಎಲ್ಲಾ ಕಡೆ ಸರಿಯಾಗಿ ಬೆರೆತುಕೊಳ್ಳುವಂತೆ ಚೆನ್ನಾಗಿ ಬೆರೆಸಿ, ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.
ತರಕಾರಿ ಶುಚಿಗೊಳಿಸಿ ತುರಿದಿಟ್ಟುಕೊಂಡಿದ್ದರೆ ತಯಾರಿಸಲು ತುಂಬಾ ಸರಳವಿದು. ಪಾರ್ಟಿಗಳಿಗೂ ಒಪ್ಪುವ ಸಲಾಡ್.

*  ತುರಿಯನ್ನು ಮತ್ತು ಮಯೊನೈಸ್ ಅನ್ನು ಮೊದಲು ಬೆರೆಸಿಕೊಂಡು, ಸಲಾಡ್ ಉಪಯೋಗಿಸುವಾಗ ಉಪ್ಪು ಮತ್ತು ಪೆಪ್ಪರ್ ಸೇರಿಸಬಹುದು.
ತಿನ್ನುವಾಗ ಮಾತ್ರ ಉಪ್ಪು ಬೆರೆಸಿ, ಮೊದಲೇ ಬೆರೆಸಿದರೆ ಸಲಾಡ್ ನೀರು ಬಿಡುತ್ತದೆ. ಆಗ ರುಚಿ ಚೆನ್ನಾಗಿರುವುದಿಲ್ಲ.
*  ಬೆರೆಸಿದ ತಕ್ಷಣ ತಿನ್ನುವುದರಿಂದ ರುಚಿ ತುಂಬಾ ಚೆನ್ನಾಗಿರುತ್ತದೆ. ಐದು-ಹತ್ತು ನಿಮಿಷಗಳು ಪರವಾಗಿಲ್ಲ.
*  ಹಸಿಯಾಗಿ ತರಕಾರಿ ತಿನ್ನದಿರುವ ಮಕ್ಕಳಿಗೆ ಇದನ್ನು ತಯಾರಿಸಿಕೊಟ್ಟರೆ ಬೇಡಾ ಎನ್ನದೆ ಇಷ್ಟಪಟ್ಟು ತಿನ್ನುತ್ತಾರೆ ಕೆಲವು ಮಕ್ಕಳು.
*  ಪರಿಮಳಕ್ಕಾಗಿ ಬೇಕಾದರೆ ಒಂದೇಒಂದು ಹಸಿಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಬಹುದು.
ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನುವುದರಿಂದ ಕಣ್ಣಿಗೆ ಬಹಳ ಒಳ್ಳೆಯದೆಂದು ಎಲ್ಲರಿಗು ತಿಳಿದಿರುವ ವಿಷಯ.
*  ಎಲೆಕೋಸು ಫ಼ೈಬರ್ ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

Thursday, February 3, 2011

Banana/Balekaayi bajji -ಬಾಳೆಕಾಯಿ ಬಜ್ಜಿ:


ಬಾಳೆಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಅಚ್ಚಖಾರದ ಪುಡಿ
ಉಪ್ಪು
ಓಮಕಾಳು
ಕಾದ ಎಣ್ಣೆ - ಒಂದು ಚಮಚ
ಚಿಟಿಕೆ ಸೋಡ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

*ಬಾಳೆಕಾಯಿ ಸಿಪ್ಪೆ ತೆಗೆಯಿರಿ,ಬಾಳೆಕಾಯಿ ಸಿಪ್ಪೆ ತೆಗೆದಾಗ ಅಂಟಾಗುತ್ತದೆ. ಅದಕ್ಕಾಗಿ ಅದನ್ನು ತೆಳುವಾಗಿ ಹೆಚ್ಚಿಕೊಂಡ ತಕ್ಷಣ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಿ. ಇಲ್ಲ ಅಂದರೆ ಕಾಯಿ ಬೇಗ ಕಪ್ಪಾಗುತ್ತದೆ. ಉಪ್ಪು ಜೊತೆ ವಿನಿಗರ್ ಕೂಡ ಬೆರೆಸಿದರೆ ಇನ್ನೂ ಒಳ್ಳೆಯದು. ಬಾಳೆಕಾಯಿಯ ಸ್ಲೈಸ್ ಕಪ್ಪು ಮತ್ತು ಅಂಟು-ಅಂಟು ಆಗದಂತೆ ಚೆನ್ನಾಗಿರುತ್ತದೆ.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮಕಾಳು,ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಬಾಳೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಬಾಳೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಕಾಯಿ ಚಟ್ನಿ ತುಂಬಾ ರುಚಿ.

Saturday, January 22, 2011

Horse Gram Sprouts Bassaru-ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಪಲ್ಯ:



ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ:


ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ಮೊಳಕೆ ಹುರುಳಿಕಾಳು - ಒಂದು ಬಟ್ಟಲು
ಹಸಿರು / ಕೆಂಪು ದಂಟಿನಸೊಪ್ಪು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಶಿಣ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ
ಉಪ್ಪು
ಎಣ್ಣೆ

ತಯಾರಿಸುವವಿಧಾನ:

ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ನೀರು ಹಾಕಿ, ಅದಕ್ಕೆ ಮೊಳಕೆ ಹುರುಳಿಕಾಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳು ಬೇಯಲು ಬಿಡಿ.ಹುರುಳೀಕಾಳು ಬೇಯುವುದು ನಿಧಾನ. ಅದಕ್ಕೆ ಅದನ್ನು ಒಂದು ವಿಷ್ಹಲ್ ಬರುವಷ್ಟು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಹುರುಳಿಕಾಳು ಕರಗದಂತೆ ಬೇಯಿಸಿಕೊಳ್ಳಿ. ನಂತರ ಹುರುಳಿಕಾಳು ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಬೇಯಿಸಿದ ಸೊಪ್ಪು-ಕಾಳಿನ ಕಟ್ಟು ಮತ್ತು ಸೊಪ್ಪುಕಾಳನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಕಾಳುಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-

ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪುಕಾಳಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಹುರುಳಿಕಾಳುಸೊಪ್ಪಿನ ಬಸ್ಸಾರು ತಯಾರು.

ಈಗ ಸೊಪ್ಪಿನ ಪಲ್ಯಕ್ಕೆ:

ಒಗ್ಗರಣೆಗೆ -


ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಅದನ್ನು ಹುರಿದುಕೊಂಡ ನಂತರ ಸೊಪ್ಪುಕಾಳಿನ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಹುರುಳಿಕಾಳುಸೊಪ್ಪಿನ ಪಲ್ಯ ತಯಾರು.

ಈ ಸಾರಿನ ಬಣ್ಣ ಸ್ವಲ್ಪ ಕಂದು ಬಣ್ಣವಿರುತ್ತದೆ.ಹುರುಳಿಕಾಳು ಮತ್ತು ದಂಟು ಎರಡು ಸೇರಿರುವ ಈ ಬಸ್ಸಾರು ಚೆನ್ನಾಗಿರುತ್ತದೆ.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
*ಸೊಪ್ಪಿನ ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
*ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
*ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
*ಈ ರೀತಿಯ ಬಸ್ಸಾರು, ಪಲ್ಯ ಮತ್ತು ರಾಗಿಮುದ್ದೆ ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ರೋಗಕ್ಕೆ ರಾಮಬಾಣ ರಾಗಿಮುದ್ದೆ.
*ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು,ಏಳೆಂಟು ಗಂಟೆ ನೆನೆಸಿ. ನೀರು ಸೋಸಿ,ಕಾಳುಗಳನ್ನು ಬಟ್ಟೆ ಕಟ್ಟಿಡಿ ಅಥವಾ ಕೊಲಾಂಡರ್ (ಸ್ಟ್ರೈನರ್)ನಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಡಿ. ಮಾರನೇದಿನ ಸ್ವಲ್ಪ ಮತ್ತು ಮತ್ತೊಂದು ದಿನ ಬಿಟ್ಟರೆ ತುಂಬಾ ಚೆನ್ನಾಗಿ, ಉದ್ದವಾಗಿ ಮೊಳಕೆ ಬಂದಿರುತ್ತವೆ. ಮೊಳಕೆ ಕಾಳುಗಳು ತುಂಬಾ ಒಳ್ಳೆಯದು.
*ಸೊಪ್ಪನ್ನು ಎಷ್ಟು ಬೇಕೋ ಅಷ್ಟು ಹಾಕಿ, ಸೊಪ್ಪು ಎಷ್ಟಾಕಿದರೂ ಬೆಂದ ನಂತರ ಸ್ವಲ್ಪವೇ ಆಗುತ್ತದೆ. ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Wednesday, January 12, 2011

Snakegourd chutney - ಪಡುವಲಕಾಯಿ ತಿರುಳಿನ ಚಟ್ನಿ:

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ.  ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.

ಪಡುವಲಕಾಯಿ ತಿರುಳಿನ ಚಟ್ನಿ:

ಪಡುವಲಕಾಯಿ ತಿರುಳು
ಸ್ವಲ್ಪ ಕಾಯಿತುರಿ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ
ಉದ್ದಿನಬೇಳೆ - ಒಂದು ಚಮಚ
ಉಪ್ಪು ರುಚಿಗೆ
ಒಗ್ಗರಣೆಗೆ;
ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವು

ತಯಾರಿಸುವ ರೀತಿ:

ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಎಣ್ಣೆ ಹಾಕಿ ಕಾದಬಳಿಕ ಜೀರಿಗೆ, ಸಾಸಿವೆ ಮತ್ತು ಕರಿಬೇವು ಹಾಕಿ, ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.

Moongdal Halwa - ಹೆಸರುಬೇಳೆ ಹಲ್ವ:

ಹೆಸರುಬೇಳೆ ಹಲ್ವ:
ಹೆಸರುಬೇಳೆ - ಒಂದು ಕಪ್
ಸಕ್ಕರೆ - ಒಂದು ಕಪ್
ಕೋವಾ - ಕಾಲು ಕಪ್
ತುಪ್ಪ - ಕಾಲು ಕಪ್
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ ಮತ್ತು ಬಾದಾಮಿ

ತಯಾರಿಸುವ ರೀತಿ:
ಮೊದಲಿಗೆ ಹೆಸರು ಬೇಳೆಯನ್ನು ಸ್ವಲ್ಪ ಅಂದರೆ ಹಸಿ ವಾಸನೆ ಹೋಗುವಂತೆ  ಹುರಿದುಕೊಳ್ಳಿ. ಹುರಿದ ಬೇಳೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕವನ್ನು ತಯಾರಿಸಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಹೆಸರುಬೇಳೆ ಪುಡಿಯನ್ನು ಹಾಕಿ ಮತ್ತು ಕೋವವನ್ನು ಸೇರಿಸಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಒಂದೆರಡು ಚಮಚ ತುಪ್ಪವನ್ನು ಸೇರಿಸಿ, ತಿರುಗಿಸುತ್ತಿರಿ, ಹಲ್ವ ಹದಕ್ಕೆ ಬಂದ ತಕ್ಷಣ ಇಳಿಸಿ, ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಬೆರೆಸಿ. ರುಚಿಯಾದ ಹೆಸರುಬೇಳೆ ಹಲ್ವ ತಯಾರಾಗುತ್ತದೆ. ಇದು ತಂಪು, ಬೇಸಿಗೆಗಾಲದಲ್ಲಿ ಒಳ್ಳೆಯದು.

Tuesday, January 4, 2011

ಡ್ರೈ ಫ್ರೂಟ್ಸ್ ಉಂಡೆ : Dry Fruits Ball/Unde


ಡ್ರೈ ಫ್ರೂಟ್ಸ್ ಉಂಡೆ :


ಬೇಕಾಗುವ ಸಾಮಗ್ರಿಗಳು:

ಗೋಡಂಬಿ- ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಖರ್ಜೂರ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಎಳ್ಳು - ಎರಡು ದೊಡ್ಡ ಚಮಚ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ

ತಯಾರಿಸುವ ವಿಧಾನ:

ಗೋಡಂಬಿ,ಬಾದಾಮಿ ಮತ್ತು ಖರ್ಜೂರವನ್ನು ಚೂರು ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಎಳ್ಳು ಮತ್ತು ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.

ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:

ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.
ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು, ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು, ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.


* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ.
* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.
 
 

 

 

Popular Posts