Monday, June 30, 2008

Carrot Salad / Gajjari kosumbari

ಕ್ಯಾರೆಟ್ ಕೋಸುಂಬರಿ:

ಸಾಮಗ್ರಿಗಳು:

ಕ್ಯಾರೆಟ್ ತುರಿದಿದ್ದು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಯಿತುರಿ ಬೇಕಾದರೆ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ಕ್ಯಾರೆಟ್ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ.

Thursday, June 19, 2008

Vegetable Curry/Saagu - ತರಕಾರಿ ಸಾಗು:


ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು,ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ಼್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು,ಹೆಚ್ಚಿದ ತರಕಾರಿಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ,ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ,ಚೆನ್ನಾಗಿ ತಿರುಗಿಸಿ,ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ,ಗರಂಮಸಾಲ ಸಹ ಹಾಕಿ ತಿರುಗಿಸಿ.ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು.ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ. ಇದನ್ನು ಚಪಾತಿ,ಪೂರಿ,ಪರೋಟ ಮತ್ತು ದೋಸೆಯೊಂದಿಗೆ ಸಹ ತಿನ್ನಬಹುದು. ಅನ್ನಕ್ಕು ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಗೆ ಸಾಗು ಅನ್ನ ಇಷ್ಟವಾಗುತ್ತದೆ. ಯಾವುದಕ್ಕಾದರೂ ಸರಿ ಇಲ್ಲವೆಂದರೆ ಊಟಕ್ಕೂ ಕೂಡ ನೆಂಚಿಕೊಳ್ಳಬಹುದು.

*ಎಲ್ಲಾ ತರಕಾರಿಗಳು ಬೇಕೇಬೇಕು ಅಂತ ಏನು ಇಲ್ಲ. ಕೆಲವು ನಿಮಗೆ ಬೇಕೆನಿಸಿದಂತೆ ಹಾಕಿಕೊಳ್ಳಬಹುದು.

Sunday, June 15, 2008

ಕಡ್ಲೆಕಾಳು ಹುಳಿ / Sprouted Channa Masala Curry


ಕಡ್ಲೆಕಾಳಿನ ಮಸಾಲೆ ಸಾರು/ ಕಡ್ಲೆಕಾಳು ಹುಳಿ:

ಬೇಕಾಗುವ ಸಾಮಗ್ರಿಗಳು:

ಕಪ್ಪು / ಕೆಂಪು ಕಡಲೆಕಾಳು- ಒಂದು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ,ಬದನೆಕಾಯಿ,ಹೂಕೋಸು)
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕಡಲೆಕಾಳನ್ನು ಚೆನ್ನಾಗಿ ತೊಳೆದು,ಹಿಂದಿನ ರಾತ್ರಿ ನೆನೆಸಿ,ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.
*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ.ಕಡ್ಲೆಕಾಳು ಹುಳಿ ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಮಕ್ಕಳಿಗೆ ಈ ಕಡ್ಲೆಕಾಳು ಸಾರು ತುಂಬಾ ಇಷ್ಟವಾಗುತ್ತದೆ.

Saturday, June 14, 2008

CabbageBeansBassaaru-ಕೋಸು-ಬೀನ್ಸ್ ಬಸ್ಸಾರು ಮತ್ತು ಪಲ್ಯ:

ಕೋಸು-ಬೀನ್ಸ್ ಬಸ್ಸಾರು ಮತ್ತು ಪಲ್ಯ:
ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ತೊಗರಿಬೇಳೆ -ಎರಡು ಕಪ್
ಹುರುಳಿಕಾಯಿ/ಬೀನ್ಸ್
ಎಲೆಕೋಸು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಸಿನದಪುಡಿ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕಾಯಿತುರಿ/ಕೊಬ್ರಿತುರಿ ಸ್ವಲ್ಪ-ಎರಡು ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ
ತಯಾರಿಸುವವಿಧಾನ:

ಮೊದಲು ಹುರುಳಿಕಾಯಿ ಮತ್ತು ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ತೊಗರೆಬೇಳೆಯನ್ನು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಬೇಳೆ ಬೇಯಲು ಬಿಡಿ.ಬೇಳೆ ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ತರಕಾರಿ ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ತರಕಾರಿ ಬೇಯುವವರೆಗೂ ಬೇಯಿಸಿ,ಬೇಳೆ ಕರಗದಂತೆ ಬೇಯಿಸಿಕೊಳ್ಳಿ.ತುಂಬಾ ನುಣ್ಣಗೆ ಬೇಯಿಸಬೇಡಿ,ನಂತರ ಬೇಳೆ ಮತ್ತು ತರಕಾರಿ ಮಿಶ್ರಣವನ್ನು ಜಾಲರಿಯಲ್ಲಿ (ಕೊಲಾಂಡರ್/ಸ್ಟ್ರೈನರ್) ಸೋಸಿಕೊಂಡು,ಸಾರಿನ ಕಟ್ಟು ಮತ್ತು ತರಕಾರಿ ಬೇಳೆ ಮಿಶ್ರಣವನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.
ಸಾರಿಗೆ ರುಬ್ಬಿಕೊಳ್ಳಲು:
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಬೇಳೆ ಮತ್ತು ತರಕಾರಿ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ,ಜೀರಿಗೆ,ಅಚ್ಚಖಾರದಪುಡಿ,ಮೆಣಸು,ಸಾರಿನಪುಡಿ,ಹುಣಸೆಹಣ್ಣು,ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ,ನುಣ್ಣಗೆ ರುಬ್ಬಿಕೊಳ್ಳಿ.
ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ ಮತ್ತು ಜೀರಿಗೆ ಹಾಕಿ,ಕರಿಬೇವು,ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ,ಬಸಿದಿಟ್ಟುಕೊಂಡ ಸಾರಿನಕಟ್ಟನ್ನು ಹಾಕಿ,ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ.'ಬಸ್ಸಾರು' ತಯಾರು.
ಈಗ ಬೇಳೆ-ತರಕಾರಿ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ,ಸಾಸಿವೆ,ಕರಿಬೇವು,ಜಜ್ಜಿದ ಬೆಳ್ಳುಳ್ಳಿ,ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ತರಕಾರಿ-ಬೇಳೆ ಮಿಶ್ರಣವನ್ನು ಹಾಕಿ,ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. 'ಪಲ್ಯ' ತಯಾರು.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
* ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
* ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
* ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
* ಜಾಲರಿ ಎಂದರೆ colander / strainer ಇದನ್ನು ಉಪಯೋಗಿಸಿ ಕಟ್ಟು ಬಸಿದುಕೊಳ್ಳಿ.
* ಬಸ್ಸಾರು ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ಬಸ್ಸಾರುಗಳಿಗೆ ಸಾಮಾನ್ಯವಾಗಿ ರಾಗಿಮುದ್ದೆ ಇದ್ದೇಇರುತ್ತದೆ.

Thursday, June 12, 2008

Curd raita / mosaru bajji

ಮೊಸರು ಬಜ್ಜಿ / ರಾಯತ:

ಮೊಸರು ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಟಮೋಟೋ ಹೆಚ್ಚಿದ್ದು
ಸೌತೆಕಾಯಿ ತುರಿ ಸ್ವಲ್ಪ
ಹಸಿಮೆಣಸಿನಕಾಯಿ ಒಂದು, ಸೀಳಿದ್ದು
ಹೆಚ್ಚಿದ ಕೊತ್ತುಂಬರಿ ಮತ್ತು ಪುದೀನ ಸೊಪ್ಪು
ಉಪ್ಪು

ತಯಾರಿಸುವ ವಿಧಾನ:

ಇವೆಲ್ಲವನ್ನೂ ಗಟ್ಟಿಯಾದ ಮೊಸರಿನೊಂದಿಗೆ ಬೆರೆಸಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪಲಾವ್ /ಬಾತ್ ಅಥವಾ ಯಾವ ಊಟಕ್ಕಾದರೂ ಸೈಡ್ ಡಿಶ್ ಆಗಿ ಸರ್ವ್ ಮಾಡಿ.

Popular Posts