Showing posts with label Saaru / Samber-ಸಾರು/ಸಾಂಬಾರ್. Show all posts
Showing posts with label Saaru / Samber-ಸಾರು/ಸಾಂಬಾರ್. Show all posts

Thursday, August 4, 2011

Holige & Obbattu Saaru - ಹೋಳಿಗೆ & ಹೋಳಿಗೆ ಸಾರು:

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಬೇಕು. ಹೋಳಿಗೆ,ಕಡುಬು,ಪಾಯಸ,ಹಾಲು ಹೋಳಿಗೆ,ಮೋದಕ,ಶ್ಯಾವಿಗೆ,ಪೊಂಗಲ್,ಖೀರು ಮತ್ತು ಸಿಹಿ ಉಂಡೆಗಳು ಹೀಗೆ ಇನ್ನು ವಿವಿಧ ರೀತಿಯ ಸಿಹಿ ಅಡಿಗೆಗಳಿವೆ.  
ಶ್ರಾವಣ ಮಾಸ ಬಂದಾಗ, ಹಬ್ಬಗಳು ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣವಿದ್ದಾಗ, ಅಡುಗೆ ಮನೆಯಲ್ಲಿ ಸಿಹಿ ಅಡುಗೆಗಳ ಸಂಭ್ರಮ.

* ಶ್ರೀ ವರಮಹಾಲಕ್ಷ್ಮೀ  ಹಬ್ಬದ ಶುಭಾಷಯಗಳು !! 


"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ  ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ತೊಗರಿಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಅರ್ಧ ಕೆಜಿ
ತೆಂಗಿನಕಾಯಿ ತುರಿ - ಒಂದು ಬಟ್ಟಲು
ಬೆಲ್ಲ ರುಚಿಗೆ - ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು - ಎರಡು ಬಟ್ಟಲು
ಚಿರೋಟಿ ರವೆ - ಕಾಲು ಕಪ್
ಹಾಲು - ಕಾಲು ಕಪ್
ತುಪ್ಪ - ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ,ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ತೊಗರಿಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ನೀರು ಹೆಚ್ಚಾಗಿ ಹಾಕಿ, ಆ ಬಸಿದ ರಸದಿಂದ ಸಾರು ತಯಾರಿಸಬಹುದು. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ತೊಗರಿಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು  ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.

--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

•ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:


•ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
•ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.
•ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ,ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿ.

ಆಮೇಲೆ  ಹೂರಣವನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ.

ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು,ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ  ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ.

ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ,ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ,ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು  ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ,ಪ್ರಸಿದ್ಧಿ ಪಡೆದಿರುವ ಅಡಿಗೆ.


•ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
•ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
•ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
•ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
•ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.
•ಬೇಳೆ ಬಸಿದ ನೀರನ್ನು ಚೆಲ್ಲದೆ ಅದನ್ನು ಹೋಳಿಗೆ ಸಾರಿನಂತೆ ಉಪಯೋಗಿಸಿ,ಈ ಸಾರು ತುಂಬಾ ರುಚಿ ಮತ್ತು ಪೌಷ್ಠಿಕ ವಾಗಿರುತ್ತದೆ. ಏಕೆಂದರೆ ರಸದಲ್ಲೆ ಸಾರವೆಲ್ಲ  ಇರುವುದರಿಂದ ಬರೀ ಬೇಳೆಯಲ್ಲಿ ಏನು ಇರುವುದಿಲ್ಲ.

ಹೋಳಿಗೆ ಸಾರಿನ ರೆಸಿಪಿ:


ಹೋಳಿಗೆ /ಒಬ್ಬಟ್ಟಿನ ಸಾರು:

ಬೇಳೆ ಕಟ್ಟು ತೆಗೆಯುವ ವಿಧಾನವು ಹೋಳಿಗೆ ರೆಸಿಪಿಯಲ್ಲಿ ಇದೆ. ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು.ಬೇಳೆಯೂ ಕರಗದಂತೆ ಬೇಯಿಸಿ,ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ.ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು"ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ,ಬೆರೆಸಿ,ಒಲೆ ಮೇಲಿಟ್ಟು ಕುದಿಸಿ,ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು
ಕರಿಬೇವು ಎಸಳು - ಎರಡು

ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ
ಈರುಳ್ಳಿ - ಒಂದು
ಬೆಳ್ಳುಳ್ಳಿ ಐದಾರು ಎಸಳು
ತೆಂಗಿನಕಾಯಿ ತುರಿ ಸ್ವಲ್ಪ
ಹುಣಸೇಹಣ್ಣು / ಹುಣಸೇರಸ(ಪಲ್ಪ್)
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ / ತುಪ್ಪ
ಸಾಸಿವೆ, ಕರಿಬೇವು
ಇಂಗು,ಜೀರಿಗೆ
ಉಪ್ಪು



ಹುರಿದು ಮಸಾಲೆಪುಡಿ ಮಾಡಿಕೊಳ್ಳಬೇಕಾದ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ದೊಡ್ಡ ಚಮಚಗಳು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಕಾಲು ಚಮಚ
ಮೆಂತ್ಯ - ಕಾಲು ಚಮಚ
ಸಾಸಿವೆ - ಕಾಲು ಚಮಚ
ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ.
ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ.
ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.
ತೆಂಗಿನಕಾಯಿ ತುರಿಗೆ,ಹುರಿದಿರುವ ಈರುಳ್ಳಿ,ಬೆಳ್ಳುಳ್ಳಿ,ಮಸಾಲೆಪುಡಿ,ಹುಣಸೇಹಣ್ಣು,ಬೇಳೆ ಹೂರಣ,ಕೊತ್ತುಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು,ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ,ಎರಡನ್ನು ಚೆನ್ನಾಗಿ ಬೆರೆಸಿ,ಕುದಿಯಲು ಬಿಡಿ.ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ.ಒಂದು ಕುದಿ ಮಾತ್ರ ಕುದಿಸಿ ಇಳಿಸಿ.ಹೋಳಿಗೆ ಸಾರು ತಯಾರಾಗುತ್ತದೆ.
* ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು.
* ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ,ಕುದಿಸಿ,ಕುದಿಸಿ,ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ.

ಹೋಳಿಗೆ ತಯಾರಿಸುವ ವಿಧಾನದ ಲಿಂಕ್ :

http://indiankannadarecipes.blogspot.com/2007/06/holige-obbattu.html

Saturday, January 22, 2011

Horse Gram Sprouts Bassaru-ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಪಲ್ಯ:



ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ:


ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ಮೊಳಕೆ ಹುರುಳಿಕಾಳು - ಒಂದು ಬಟ್ಟಲು
ಹಸಿರು / ಕೆಂಪು ದಂಟಿನಸೊಪ್ಪು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಶಿಣ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ
ಉಪ್ಪು
ಎಣ್ಣೆ

ತಯಾರಿಸುವವಿಧಾನ:

ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ನೀರು ಹಾಕಿ, ಅದಕ್ಕೆ ಮೊಳಕೆ ಹುರುಳಿಕಾಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳು ಬೇಯಲು ಬಿಡಿ.ಹುರುಳೀಕಾಳು ಬೇಯುವುದು ನಿಧಾನ. ಅದಕ್ಕೆ ಅದನ್ನು ಒಂದು ವಿಷ್ಹಲ್ ಬರುವಷ್ಟು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಹುರುಳಿಕಾಳು ಕರಗದಂತೆ ಬೇಯಿಸಿಕೊಳ್ಳಿ. ನಂತರ ಹುರುಳಿಕಾಳು ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಬೇಯಿಸಿದ ಸೊಪ್ಪು-ಕಾಳಿನ ಕಟ್ಟು ಮತ್ತು ಸೊಪ್ಪುಕಾಳನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಕಾಳುಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-

ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪುಕಾಳಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಹುರುಳಿಕಾಳುಸೊಪ್ಪಿನ ಬಸ್ಸಾರು ತಯಾರು.

ಈಗ ಸೊಪ್ಪಿನ ಪಲ್ಯಕ್ಕೆ:

ಒಗ್ಗರಣೆಗೆ -


ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಅದನ್ನು ಹುರಿದುಕೊಂಡ ನಂತರ ಸೊಪ್ಪುಕಾಳಿನ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಹುರುಳಿಕಾಳುಸೊಪ್ಪಿನ ಪಲ್ಯ ತಯಾರು.

ಈ ಸಾರಿನ ಬಣ್ಣ ಸ್ವಲ್ಪ ಕಂದು ಬಣ್ಣವಿರುತ್ತದೆ.ಹುರುಳಿಕಾಳು ಮತ್ತು ದಂಟು ಎರಡು ಸೇರಿರುವ ಈ ಬಸ್ಸಾರು ಚೆನ್ನಾಗಿರುತ್ತದೆ.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
*ಸೊಪ್ಪಿನ ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
*ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
*ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
*ಈ ರೀತಿಯ ಬಸ್ಸಾರು, ಪಲ್ಯ ಮತ್ತು ರಾಗಿಮುದ್ದೆ ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ರೋಗಕ್ಕೆ ರಾಮಬಾಣ ರಾಗಿಮುದ್ದೆ.
*ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು,ಏಳೆಂಟು ಗಂಟೆ ನೆನೆಸಿ. ನೀರು ಸೋಸಿ,ಕಾಳುಗಳನ್ನು ಬಟ್ಟೆ ಕಟ್ಟಿಡಿ ಅಥವಾ ಕೊಲಾಂಡರ್ (ಸ್ಟ್ರೈನರ್)ನಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಡಿ. ಮಾರನೇದಿನ ಸ್ವಲ್ಪ ಮತ್ತು ಮತ್ತೊಂದು ದಿನ ಬಿಟ್ಟರೆ ತುಂಬಾ ಚೆನ್ನಾಗಿ, ಉದ್ದವಾಗಿ ಮೊಳಕೆ ಬಂದಿರುತ್ತವೆ. ಮೊಳಕೆ ಕಾಳುಗಳು ತುಂಬಾ ಒಳ್ಳೆಯದು.
*ಸೊಪ್ಪನ್ನು ಎಷ್ಟು ಬೇಕೋ ಅಷ್ಟು ಹಾಕಿ, ಸೊಪ್ಪು ಎಷ್ಟಾಕಿದರೂ ಬೆಂದ ನಂತರ ಸ್ವಲ್ಪವೇ ಆಗುತ್ತದೆ. ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Friday, February 12, 2010

Heerekaayi huli / Ridge gourd samber

ಹೀರೆಕಾಯಿ ಹುಳಿ:
ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ
ಹೀರೆಕಾಯಿ ಹೆಚ್ಚಿದ್ದು
ಟಮೋಟ ಹಣ್ಣು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು
ಜೊತೆಗೆ ಬೇಕಾದರೆ ಆಲೂಗೆಡ್ಡೆ/ಮೂಲಂಗಿ/ಹುರುಳಿಕಾಯಿ ಸೇರಿಸಿಕೊಳ್ಳಬಹುದು.

ತಯಾರಿಸುವ ವಿಧಾನ:

ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೀರೆಕಾಯಿ ಮತ್ತು ಟಮೋಟ ಹಾಕಿ,(ಇತರೆ ತರಕಾರಿ ಬಳಸುವುದಾದರೆ ಅದನ್ನು ಸೇರಿಸಿ)ತರಕಾರಿ ಬೇಯುವವರೆಗೂ ಬೇಯಿಸಿ,ನಂತರ ಸಾರಿನಪುಡಿ,ಹುಣಸೇರಸ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ,ಚೆನ್ನಾಗಿ ಕುದಿಸಿ.ನಂತರ ಅದಕ್ಕೆ ಒಗ್ಗರಣೆ ಸೇರಿಸಿ.ಇಳಿಸಿ.
* ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
* ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಈಗ ರುಬ್ಬಿ ತಯಾರಿಸುವ ಸಾಂಬಾರ್ ಗಿಂತ ಪುಡಿ ಉದುರಿಸಿ ತಯಾರಿಸುವ ಸಾರುಗಳೂ ಸಾಮಾನ್ಯವಾಗಿದೆ. ಇದು ಲೈಟ್ ಆಗಿರುತ್ತದೆ.
* ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್/ಬದನೆಕಾಯಿ ಸಹ ಸೇರಿಸಿ ತಯಾರಿಸಬಹುದು. ತರಕಾರಿಗಳು ಒಂದೇ ಹಾಕಿ ತಯಾರಿಸಿದಾಗ ಅದು ಅದರದ್ದೇ ಹೆಸರಿನ ಹುಳಿ ಆಗಿರುತ್ತದೆ. ಜೊತೆಗೆ ಬೇರೆ ಹಾಕಿದಾಗ ಅದು ಕಾಂಬಿನೇಷನ್ ಸಾರು ಆಗುತ್ತದೆ,ಅಷ್ಟೇ. ನಮಗೆ ಯಾವ ತರಕಾರಿ ಬಳಸಲು ಇಷ್ಟವೋ ಆ ತರಕಾರಿ ಬಳಸಿದರೆ ಆಯಿತು.
* ಕುಕ್ಕರ್ ನಲ್ಲಿ ತಯಾರಿಸುವುದು ಸುಲಭ. ಅದನ್ನು ತಯಾರಿಸುವ ಬಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಅಲ್ವಾ. ಆಗಾಗಿ ಅದರ ವಿವರ ಬೇಡ ಎನಿಸುತ್ತೆ.
* ಯಾವುದೇ ಸಾಂಬಾರ್ ಅಥವಾ ಹುಳಿ ತಯಾರಿಸಿದರೂ, ಪುಡಿ ಚೆನ್ನಾಗಿದ್ದು,ರುಚಿಯಾಗಿದ್ದರೆ ಮಾತ್ರ ಸಾರು ರುಚಿಯಾಗಿರುತ್ತದೆ.

Thursday, January 7, 2010

Idli - Sambar- Chutney

ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಇಡ್ಲಿ:

ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು


ತಯಾರಿಸುವ ರೀತಿ:

ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ ತಿರುಗಿಸದೇ ಮೆಲ್ಲಗೆ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.


ಚಟ್ನಿ / ಕಾಯಿಚಟ್ನಿ:

ಬೇಕಾಗುವ ಸಾಮಗ್ರಿಗಳು:

ತೆಂಗಿನಕಾಯಿ ತುರಿ -ಒಂದು ಬಟ್ಟಲು
ಕಡ್ಲೆ - ಸ್ವಲ್ಪ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ ರುಚಿಗೆ
ಉಪ್ಪು ರುಚಿಗೆ
ಶುಂಠಿ ತುಂಡು ಒಂದು ಚೂರು
ಬೆಳ್ಳುಳ್ಳಿ ೪-೫
ಜೀರಿಗೆ - ಅರ್ಧ ಚಮಚ
ಕೊತ್ತುಂಬರಿಸೊಪ್ಪು ಸ್ವಲ್ಪ

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ, ರುಬ್ಬಿ. ಕಾಯಿ ಚಟ್ನಿ ತಯಾರಾಗುತ್ತದೆ. ಒಗ್ಗರಣೆ ಇಷ್ಟಪಡುವವರು ಅದನ್ನು ಸೇರಿಸಬಹುದು್.
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಚಟಪಟಾಯಿಸಿ, ತಣ್ಣಗಾದ ಮೇಲೆ ಚಟ್ನಿಗೆ ಬೆರೆಸಿ. ಈ ಚಟ್ನಿಯೂ ಇಡ್ಲಿ,ದೋಸೆ,ಚಪಾತಿ,ರೊಟ್ಟಿಗಳು,ಬಜ್ಜಿ ಮತ್ತು ಪೂರಿ ಹಾಗು ಕೆಲವೊಮ್ಮೆ ಅನ್ನಕ್ಕೂ ರುಚಿಯಾಗಿರುತ್ತದೆ. ಇಡ್ಲಿಗಾದರೆ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ,ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-

ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -

ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.

Saturday, December 19, 2009

Dose/Dosa Saagu- ದೋಸೆ ಸಾಗು:


ದೋಸೆ ಸಾಗು:
ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಕುಸುಬಲಕ್ಕಿ- ಅರ್ಧಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ:

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ದೋಸೆಯೊಂದಿಗೆ ಸಾಗು ತುಂಬಾ ಚೆನ್ನಾಗಿರುತ್ತದೆ.
***********************************
ಸಾಗು ತಯಾರಿಸುವ ಬಗೆ;

ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು, ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು, ಹೆಚ್ಚಿದ ತರಕಾರಿಗಳನ್ನು ಹಾಕಿ, ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ, ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ತಿರುಗಿಸಿ, ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ, ಗರಂಮಸಾಲ ಸಹ ಹಾಕಿ ತಿರುಗಿಸಿ. ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು. ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ.

ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.

Monday, November 30, 2009

Nuggekaayi saaru/ Drumstick samber


ನುಗ್ಗೆಕಾಯಿ ಸಾರು/ಸಾಂಬಾರ್:

ಬೇಕಾಗುವ ಸಾಮಗ್ರಿಗಳು:

ನುಗ್ಗೆಕಾಯಿ - 2 ಅಥವ 3 ಇಂಚಿನಷ್ಟು ಕತ್ತರಿಸಿಕೊಳ್ಳಿ
ತೊಗರಿಬೇಳೆ - 1 ಬಟ್ಟಲು
ಈರುಳ್ಳಿ ಹೆಚ್ಚಿದ್ದು ಸ್ವಲ್ಪ
ಟಮೋಟ ಹೆಚ್ಚಿದ್ದು ಸ್ವಲ್ಪ
ಹುಣಸೆರಸ ಒಂದು ಚಮಚ
ಸಾಂಬಾರ್ / ಸಾರಿನ ಪುಡಿ ರುಚಿಗೆ
ಉಪ್ಪು ರುಚಿಗೆ
ಎಣ್ಣೆ, ಸಾಸಿವೆ
ಅರಿಶಿಣ
ಇಂಗು ಕರಿಬೇವಿನ ಸೊಪ್ಪು
ತಯಾರಿಸುವ ರೀತಿ:
ಮೊದಲು ತೊಗರಿಬೇಳೆಯನ್ನು ನೀರು ,ಅರಿಶಿಣ ಮತ್ತು ಒಂದು ಚಮಚ ಎಣ್ಣೆ ಹಾಕಿ,ಬೇಯಿಸಿಕೊಂಡು ಅದಕ್ಕೆ ನುಗ್ಗೆಕಾಯಿ, ಟಮೋಟ, ಹುಣಸೆರಸ, ಸಾಂಬಾರ್ ಪುಡಿ ಮತ್ತು ಉಪ್ಪು ಹಾಕಿ ನುಗ್ಗೆಕಾಯಿ ಬೇಯುವವರೆಗೂ ಬೇಯಿಸಿ, ಸಾರಿನ ಹದಕ್ಕೆ ತಕ್ಕಂತೆ ನೀರು ಬೆರೆಸಿಕೊಳ್ಳಿ. ಕಾಯಿ ಸ್ವಲ್ಪ ಗಟ್ಟಿಯಾಗಿರುವಾಗಲೆ ಇಳಿಸಿ. ಇದಕ್ಕೆ ಒಗ್ಗರಣೆ ಹಾಕಿ ಬೆರೆಸಿ.
ಒಗ್ಗರಣೆಗೆ- ಪುಟ್ಟ ಪಾತ್ರೆಯಲ್ಲಿ ಒಂದೆರಡು ಚಮಚ ಎಣ್ಣೆಯನ್ನು ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಸಿಡಿದ ನಂತರ ಕರಿಬೇವು, ಇಂಗು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷ ಬಾಡಿಸಿದ ನಂತರ ಅದನ್ನು ಸಾರಿಗೆ ಬೆರೆಸಿ. ನುಗ್ಗೆಕಾಯಿ ಸಾರು ಸಿದ್ಧ. ಇದನ್ನು ಅನ್ನದ ಜೊತೆ ಕೊಡಿ.

*-ನುಗ್ಗೆಕಾಯಿಯನ್ನು ಮೊದಲೆ ಬೇರೆ ಪಾತ್ರೆಯಲ್ಲಿ ಬೇಯಿಸಿ ಕೂಡ ಹಾಕಬಹುದು, ಇದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೈಕ್ರೋವೆವ್ ಇರುವವರು ಅದರಲ್ಲಿ ಬೇಯಿಸಿಕೊಳ್ಳಬಹುದು, ಇದು ಬಹಳ ಸುಲಭ ಮತ್ತು ಬೇಗ ಆಗುತ್ತದೆ. ತುಂಬಾ ಕುಕ್ ಮಾಡಿದರೆ ನುಗ್ಗೆಕಾಯಿಗಳು ಒಡೆದು ಹೋಗುತ್ತವೆ. ನೋಡಿಕೊಂಡು ಬೇಯಿಸಿಕೊಳ್ಳಿ.
*- ಕಾಯಿ ಬೇಯಿಸಿ ಹಾಕಿದರೆ ಬೇಳೆ ಜೊತೆ ಹಾಕಿದಾಗ ಒಂದೆರಡು ಕುದಿ ಕುದ್ದ ಮೇಲೆ ಸ್ಟೌವ್ ಆಫ್ ಮಾಡಿ.

Monday, September 14, 2009

Bitter Gourd / ಹಾಗಲಕಾಯಿ ಪಲ್ಯ:


ಹಾಗಲಕಾಯಿ ಪಲ್ಯ:

ಬೇಕಾಗುವ ಪದಾರ್ಥಗಳು;

ಹಾಗಲಕಾಯಿ-ಎರಡು
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ
ಹುಣಸೇರಸ ಸ್ವಲ್ಪ
ಬೆಲ್ಲ
ಕಾಯಿತುರಿ,ಕೊತ್ತುಂಬರಿಸೊಪ್ಪು
ಎಣ್ಣೆ,ಸಾಸಿವೆ
ಕರಿಬೇವು
ಅರಿಶಿನ
ಉಪ್ಪು

ವಿಧಾನ:
ಮೊದಲು ಹಾಗಲಕಾಯಿಯನ್ನು ಸಣ್ಣಗೆ ಅಥವ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ,ಸಾಸಿವೆ,ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ,ಬಾಡಿಸಿ,ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹಾಗಲಕಾಯಿಯನ್ನು ಸೇರಿಸಿ,ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಹುಣಸೇರಸ ಹಾಕಿ ಚೆನ್ನಾಗಿ ತಿರುವಿ. ನೀರು ಸ್ವಲ್ಪ ಹಾಕಿ ಹಾಗಲಕಾಯಿ ಬೇಯುವವರೆಗು ಬೇಯಿಸಿ. ಸ್ವಲ್ಪ ಬೆಲ್ಲ ಹಾಕಿ,ಚೆನ್ನಾಗಿ ಬೆರೆಸಿ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಬೆರೆಸಿ.ಇಳಿಸಿ.

Friday, January 23, 2009

Peas Curry - ಬಟಾಣಿ ಸಾರು:



ಬಟಾಣಿ ಸಾರು:

ಬೇಕಾಗುವ ಸಾಮಗ್ರಿಗಳು:

ಬಟಾಣಿ- ಎರಡು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ-
ಆಲೂಗೆಡ್ಡೆ,ಬದನೆಕಾಯಿ,
ಹುರುಳಿಕಾಯಿ,ಹೂಕೋಸು
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ
ತಯಾರಿಸುವ ವಿಧಾನ:

ಬಟಾಣಿ ತಾಜಾ ಅಥವ ಟಿನ್ ಅಥವ ಫ್ರೋಜ಼ನ್ ಕಾಳುಗಳಾದರೆ, ಆಗೇ ತಯಾರಿಸಬಹುದು, ಆದರೆ ಒಣಗಿದ ಕಾಳುಗಳಾದರೆ, ಹಿಂದಿನ ರಾತ್ರಿಯೇ ನೆನೆಸಿಡಬೇಕು.

ಮಸಾಲೆ ತಯಾರಿಸಲು:

ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ,ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಬಟಾಣಿಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ ಬಟಾಣಿಕಾಳು ಸಾರು ತಯಾರಾಗುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.ಈ ಮಸಾಲೆ ಸಾರಿಗೆ ರಾಗಿಮುದ್ದೆ ಕೂಡಾ ಚೆನ್ನಾಗಿರುತ್ತದೆ.

* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಈ ಬಟಾಣಿ ಸಾರು ಬಟಾಣಿ ಇಷ್ಟ ಪಡುವ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Sunday, November 16, 2008

Cucumber Green Salad/ಸೌತೆಕಾಯಿ ಗ್ರೀನ್ ಸಲಾಡ್

ಸೌತೆಕಾಯಿ ಗ್ರೀನ್ ಸಲಾಡ್:

ಸೌತೆಕಾಯಿ
ನಿಂಬೆರಸ
ಹಸಿಮೆಣಸಿನಕಾರ
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.


ಸೌತೆಕಾಯಿಯನ್ನು ದಪ್ಪ ಚೂರುಗಳಾಗಿ ಹೆಚ್ಚಿಕೊಂಡು,ಅದಕ್ಕೆ ನಿಂಬೆರಸ,ಉಪ್ಪು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾರ ಹಾಕಿ ಚೆನ್ನಾಗಿ ಬೆರೆಸಿ. ತಕ್ಷಣ ತಿನ್ನಿ.

Wednesday, November 12, 2008

Tamarind gojju / ಹುಣಸೆಗೊಜ್ಜು


ಹುಣಸೆಹಣ್ಣಿನ ಹುಳಿಗೊಜ್ಜು:

ಸಾಮಗ್ರಿಗಳು:

ಹುಣಸೆಹಣ್ಣಿನರಸ - ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಹಸಿಮೆಣಸಿನಕಾಯಿ -ಒಂದು ಉದ್ದಕ್ಕೆ ಹೆಚ್ಚಿ
ಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು

ವಿಧಾನ:
ಹುಣಸೆಹಣ್ಣಿನ ರಸವನ್ನು ಸ್ವಲ್ಪ ನೀರು ಹಾಕಿ ಬೆರೆಸಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ,ಕಾರದ ಪುಡಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಿವುಚಿ. ಸ್ವಲ್ಪ ಸಾರಿನ ಪುಡಿ ಬೇಕಾದರೂ ಹಾಕಬಹುದು. ಹುಣಸೆಗೊಜ್ಜು ರೆಡಿ. ಇದು ಉಪ್ಪಿಟ್ಟಿನ ಜೊತೆ ಒಳ್ಳೆಯ ಜೊತೆ. ಅದಕ್ಕೆ ಕಲಸಿಕೊಂಡು ತಿನ್ನಬಹುದು. ಅನ್ನಕ್ಕೂ ಸೈ. ಅರುಚಿ ಆದವರಿಗೂ ಮತ್ತು ಪಿತ್ತಕ್ಕೂ ಒಳ್ಳೆಯದು.

Thursday, October 23, 2008

Massoppu- ಮಸ್ಸೊಪ್ಪು:


ಸೊಪ್ಪನ್ನು ಮಸೆದು ತಯಾರಿಸುವ ಸಾರಿಗೆ ’ಮಸ್ಸೊಪ್ಪು’ /’ಮಸ್ಸೊಪ್ಪು ಸಾರು’ ಎಂದು ಕರೆಯುವರು.

ಮಸ್ಸೊಪ್ಪು:

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ - ಒಂದು ಕಪ್
ಪಾಲಕ್ ಸೊಪ್ಪು/ ಮೆಂತ್ಯದ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ, ಬೆಳ್ಳುಳ್ಳಿ
ಕಾಯಿತುರಿ
ಹುಣಸೇರಸ
ಎಣ್ಣೆ,ಸಾಸಿವೆ
ಅರಿಸಿನ,ಇಂಗು
ಕರಿಬೇವು
ಉಪ್ಪು

ತಯಾರಿಸುವ ರೀತಿ:
ತೊಗರಿಬೇಳೆಯನ್ನು ಬೇಯಿಸಿಕೊಂಡು ಅದಕ್ಕೆ ತೊಳೆದು,ಕತ್ತರಿಸಿದ ಸೊಪ್ಪನ್ನು ಹಾಕಿ,ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿಯನ್ನು ಹಾಕಿ,ಟಮೋಟ ಕೂಡ ಹಾಕಿ ಸೊಪ್ಪು ಬೇಯುವವರೆಗು ಬೇಯಿಸಿ. ಬೆಂದ ನಂತರ ಸ್ವಲ್ಪ ಬೇಳೆಸೊಪ್ಪಿನ ಮಿಶ್ರಣವನ್ನು ಮಸೆದುಕೊಳ್ಳಿ.
ಈ ಕಡೆ ಕಾಯಿತುರಿ,ಸ್ವಲ್ಪ ಈರುಳ್ಳಿ,ಸಾರಿನಪುಡಿ,ಒಂದು ಅಳಕುಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ,ಸಾಸಿವೆ,ಕರಿಬೇವು,ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ,ಕುದಿಸಿ,ಉಪ್ಪು ಸೇರಿಸಿ,ಮಸೆದಿರುವ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ,ಹುಣಸೇಹುಳಿ ಸೇರಿಸಿ ಒಂದು ಬಾರಿ ಕುದಿಸಿ. ಕೆಳಗಿಳಿಸಿ. ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.

* ಮಸಾಲೆ ರುಬ್ಬದೇ,ಬರೀ ಸಾರಿನಪುಡಿ ಮಾತ್ರ ಹಾಕಿ ಸಹ ತಯಾರಿಸಬಹುದು,ಆಗ ತೆಂಗಿನತುರಿ ಬಿಡಬೇಕು.
* ಒಗ್ಗರಣೆ ಹಾಕಿದ ಮೇಲೆ ಅದಕ್ಕೆ ಬೇಯಿಸಿದ-ಮಸೆದ ಮಿಶ್ರಣವನ್ನು ಹಾಕಿ,ಸಾರಿನಪುಡಿ,ಉಪ್ಪು ಮತ್ತು ಹುಳಿಯನ್ನು ರುಚಿಗೆ ತಕ್ಕಷ್ಟು ಸೇರಿಸಿಕೊಂಡು ಕುದಿಸಿ.ಇಳಿಸಿ.

Tuesday, May 27, 2008

Sambar - ಸಾಂಬಾರ್ / ಇಡ್ಲಿ ಸಾಂಬಾರ್-Idli Sambar


ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ. ಕೆಲವು ಸಾರಿ ಇಡ್ಲಿ - ಸಾಂಬಾರ್ ಜೊತೆ ರುಚಿ ಎನಿಸಿದರೆ, ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ, ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು,
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಿ, ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ, (ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ, ಹೆಚ್ಚಿದ ಪಾಲಕ್ ಎಲೆಗಳು, ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ, ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ, ಕುದಿಯುವಾಗ ಹುಣಸೇಹಣ್ಣಿನ ರಸ, ಬೆಲ್ಲ ಮತ್ತು ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ , ಇಳಿಸಿ. ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ, ಜೀರಿಗೆ,ಇಂಗು, ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ, ಹೇಗೆ ಹಾಕಲಿ, ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.

Friday, November 2, 2007

Massoppu Saaru - ಕಾಳು ಮಸ್ಸೊಪ್ಪು ಸಾರು:

* ಈ ಮಸ್ಸೊಪ್ಪು ಸಾರು ತುಂಬಾ ರುಚಿಯಾಗಿರುತ್ತದೆ. ವಿವಿಧ ಕಾಳುಗಳು ಅದರಲ್ಲೂ ಮೊಳಕೆ ಕಾಳುಗಳು ಸೇರಿರುವುದರಿಂದ ಬಹಳ ಪೌಷ್ಟಿಕವಾಗಿಯೂ, ಆರೋಗ್ಯಕರವಾಗಿಯೂ ತುಂಬಾನೇ ಸೊಗಸಾಗಿರುತ್ತದೆ. ನಮ್ಮ ಅಜ್ಜಿ ಇದನ್ನು ನಾನು ಚಿಕ್ಕವಳಿದ್ದಾಗ ಹೆಚ್ಚಾಗಿ ತಯಾರಿಸುತ್ತಿದ್ದರು. ಇದಕ್ಕೆ ರೊಟ್ಟಿ ತುಂಬಾ ಚೆನ್ನಾಗಿ ಹೊಂದುತ್ತದೆ. ಮುದ್ದೆ ಸಹ. ಆಗ ಅಜ್ಜಿ ಮಾಡುತ್ತಿದ್ದ ರುಚಿ ಈಗ ಬರಲ್ಲ. ಈಗಿನ ಕಾಳುಗಳೆಲ್ಲಾ ಹೈಬ್ರೀಡ್ ಆಗಿರುವುದರಿಂದ ಅಜ್ಜಿ ತಯಾರಿಸುತ್ತಿದ್ದ ಅಡುಗೆಗಳು ಈಗ ನಾವು ಹೇಗೆ ತಯಾರಿಸಿದರು ಪರವಾಗಿಲ್ಲ ಎನಿಸುತ್ತೆ. ಆಗಿನ ಕಾಲದಲ್ಲಿ ಎಲ್ಲಾ ನಾಟಿ ಬೆಳೆಗಳನ್ನು ಬೆಳೆಯುತ್ತಿದ್ದುದರಿಂದ ಅದರಲ್ಲಿ ಪೌಷ್ಠಿಕಾಂಶಗಳು,ಖನಿಜ,ಲವಣ,ವಿಟಮಿನ್ ಗಳು ಎಲ್ಲಾ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಇರುತ್ತಿತ್ತು. ಅದಕ್ಕೆ ನಮ್ಮಗಳಿಗೆ ಆಗಿನ ಕಾಲದ ಅಡುಗೆಗಳೇ ಹೆಚ್ಚು ಇಷ್ಟವಾಗುತ್ತವೆ ಏನೋ ಅನಿಸುತ್ತೆ. ಇಷ್ಟೆಲ್ಲಾ ಒಂದೇ ಅಡುಗೆಗಳಿಗೆ ಹಾಕಿ ಆಗಿನ ಕಾಲದಲ್ಲಿ ಅಡುಗೆಗಳನ್ನು ತಯಾರಿಸುತ್ತಿದ್ದುದಕ್ಕೆ ಇರಬೇಕು ಅವರುಗಳು ಅಷ್ಟು ವಯಸ್ಸಾದರೂ ಏನು ಕಾಯಿಲೆಗಳು ಬರದೇ,ಓಡಾಡಿಕೊಂಡು ಗಟ್ಟಿಮುಟ್ಟಾಗಿ ಚೆನ್ನಾಗಿದ್ದರೇನೋ ಅಲ್ವಾ!! ಈ ಮಸ್ಸೊಪ್ಪಿಗೂ ನಾವು ಒಂದು ಚೂರು ಬೇಳೆಗೆ ಒಂದು ರೀತಿದು ಯಾವುದೋ ಒಂದು ಸೊಪ್ಪು ಹಾಕಿ,ತಯಾರಿಸಿದ ಮಸ್ಸೊಪ್ಪು ರುಚಿಗೂ ಬಹಳ ವ್ಯತ್ಯಾಸವಿದೆ. ಬೇಯಿಸಿದ ಕಾಳುಗಳನ್ನು ಮಸೆದು ತಯಾರಿಸಿದಾಗ ಅದು ಇನ್ನು ರುಚಿ ಹೆಚ್ಚು. ತಯಾರಿಸಿ ನೋಡಿ,ಈಗಿನ ದೀಡೀರ್ ಮಸ್ಸೊಪ್ಪಿನ ಸಾರಿಗೂ ,ನಮ್ಮ ಅಜ್ಜಿ ಕಾಲದ ಮಸ್ಸೊಪ್ಪು ಸಾರಿಗೂ ಇರುವ ವ್ಯತ್ಯಾಸವನ್ನು!!!! ಈ ಮಸ್ಸೊಪ್ಪು ಸಾರು ಕುದಿಸಿದಷ್ಟು,ಅಂದರೆ ಹಳೆಯದಾದರೆ ರುಚಿ ಇನ್ನೂ ಜಾಸ್ತಿಯಾಗುತ್ತದೆ. ಮಾರನೇದಿನಕ್ಕೆ ತುಂಬಾ ರುಚಿ.

ಕಾಳು ಮಸ್ಸೊಪ್ಪು ಸಾರು:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಒಂದು ಕಪ್
ಮೊಳಕೆ ಕಡ್ಲೆಕಾಳು
ಮೊಳಕೆ ಹುರುಳಿಕಾಳು
ಹೆಸರುಕಾಳು
ಹಲಸಂದೆಕಾಳು
ಹರಿವೆ ಸೊಪ್ಪು
ದಂಟುಸೊಪ್ಪು
ಬೆರೆಕೆ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ
ಬೆಳ್ಳುಳ್ಳಿ
ಅರಿಸಿನ
ಇಂಗು
ಕರಿಬೇವು
ಎಣ್ಣೆ,ಸಾಸಿವೆ
ಉಪ್ಪು
ಕಾಯಿತುರಿ
ಹುಣಸೇರಸ

ತಯಾರಿಸುವ ರೀತಿ:

ಎಲ್ಲಾ ಕಾಳುಗಳನ್ನು ಕ್ರಮವಾಗಿ ಕಾಲು ಬಟ್ಟಲು ತೆಗೆದುಕೊಳ್ಳಿ, ಎಲ್ಲಾ ಕಾಳುಗಳನ್ನು ನೀರು,ಉಪ್ಪು,ಅರಿಸಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಇದರ ಜೊತೆಗೆ ತೊಗರಿಬೇಳೆಯನ್ನು ಬೇಯಿಸಿಕೊಂಡು ಅದಕ್ಕೆ ತೊಳೆದು,ಕತ್ತರಿಸಿದ ಎಲ್ಲಾ ಸೊಪ್ಪುಗಳನ್ನು ಹಾಕಿ, ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿಯನ್ನು ಹಾಕಿ,ಟಮೋಟ ಕೂಡ ಹಾಕಿ ಸೊಪ್ಪು ಬೇಯುವವರೆಗು ಬೇಯಿಸಿ. ಬೆಂದ ನಂತರ ಕಾಳು-ಬೇಳೆ-ಸೊಪ್ಪಿನ ಮಿಶ್ರಣವನ್ನು ಸ್ವಲ್ಪ ಮಸೆದುಕೊಳ್ಳಿ.
ಈ ಕಡೆ ಕಾಯಿತುರಿ,ಸ್ವಲ್ಪ ಈರುಳ್ಳಿ,ಸಾರಿನಪುಡಿ,ಒಂದು ಅಳಕುಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ,ಸಾಸಿವೆ,ಕರಿಬೇವು,ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ,ಕುದಿಸಿ,ಉಪ್ಪು ಸೇರಿಸಿ,ಮಸೆದಿರುವ ಕಾಳು,ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ,ಹುಣಸೇಹುಳಿ ಸೇರಿಸಿ,ಒಂದು ಬಾರಿ ಕುದಿಸಿ.ಕೆಳಗಿಳಿಸಿ.ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.
* ಕಾಳು ಮತ್ತು ಸೊಪ್ಪುಗಳನ್ನು ನಿಮಗೆ ಬೇಕಾದ ಅಳತೆಯಲ್ಲಿ ಹಾಕಿಕೊಳ್ಳಿ. ಎಲ್ಲಾ ಹಾಕುವುದು ಕಷ್ಟ ಎನಿಸಿದರೆ,ನಿಮಗೆ ಬೇಕಾದ ಕಾಳು ಮತ್ತು ಸೊಪ್ಪನ್ನು ಹಾಕಿಕೊಳ್ಳಿ.

Tuesday, October 16, 2007

Aloo Peas Curry /ಆಲೂ-ಬಟಾಣಿ ಮಸಾಲೆ:


ಆಲೂ-ಬಟಾಣಿ ಮಸಾಲೆ:
ಬೇಕಾಗುವ ಸಾಮಗ್ರಿಗಳು;
ಬಟಾಣಿ
ಆಲೂಗೆಡ್ಡೆಯನ್ನು ಹೆಚ್ಚಿಕೊಳ್ಳಿ
ಹೆಚ್ಚಿದ ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅಚ್ಚಖಾರದಪುಡಿ
ಧನಿಯ
ಜೀರಿಗೆಪುಡಿ
ಗರಂಮಸಾಲಾ
ಕೊತ್ತುಂಬರಿಸೊಪ್ಪು
ಎಣ್ಣೆ, ಜೀರಿಗೆ, ಕರಿಬೇವು
ಉಪ್ಪು ರುಚಿಗೆ

ವಿಧಾನ;
ಪಾತ್ರೆಗೆ ಎಣ್ಣೆಯನ್ನು ಹಾಕಿ, ಜೀರಿಗೆ ಹಾಕಿ ಚಟಪಟ ಅಂದಾಗ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಎರಡು ನಿಮಿಷದ ನಂತರ ಆಲೂಗೆಡ್ಡೆಯನ್ನು ಹಾಕಿ. ಒಂದೆರಡು ನಿಮಿಷ ಹುರಿದು ಬಟಾಣಿ ಕಾಳುಗಳನ್ನು ಹಾಕಿ,ಅದರ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಐದಾರು ನಿಮಿಷ ಹುರಿದು,ಕಾರದಪುಡಿ,ಧನಿಯ ಮತ್ತು ಜೀರಿಗೆಪುಡಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ,ಬಟಾಣಿ ಮತ್ತು ಆಲೂಗೆಡ್ಡೆ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ. ಒಂದು ನಿಮಿಷದ ನಂತರ ಇಳಿಸಿ,ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಈ ಮಸಾಲೆಯನ್ನು ಚಪಾತಿ ಮತ್ತು ಪರೋಟದೊಂದಿಗೆ ನೀಡಬಹುದು.
* ಹಸಿಬಟಾಣಿ ಉಪಯೋಗಿಸುವವರು ನೇರವಾಗಿ ಒಗ್ಗರಣೆಗೆ ಸೇರಿಸಿ.
* ಒಣಗಿದ ಬಟಾಣಿ ಉಪಯೋಗಿಸುವವರು ನಾಲ್ಕು-ಐದು ಗಂಟೆ ನೆನೆಸಿ.

Wednesday, July 4, 2007

Radish Samber / Moolangi Saaru

ಮೂಲಂಗಿ ಹುಳಿ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ
ಮೂಲಂಗಿ, ಹೆಚ್ಚಿದ್ದು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು

ತಯಾರಿಸುವ ವಿಧಾನ:

ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು ಅದಕ್ಕೆ ಮೂಲಂಗಿ ಮತ್ತು ಟಮೋಟ ಹಾಕಿ, ಮೂಲಂಗಿ ಬೇಯುವವರೆಗೂ ಬೇಯಿಸಿ, ನಂತರ ಸಾರಿನಪುಡಿ, ಹುಣಸೇರಸ ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ, ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಒಗ್ಗರಣೆ ಸೇರಿಸಿ. ಇಳಿಸಿ.
*ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
*ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಮೂಲಂಗಿ ಜೊತೆ ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್ ಸಹ ಸೇರಿಸಿ ತಯಾರಿಸಬಹುದು.

Sunday, June 3, 2007

Holige/Obbattu Saaru - ಹೋಳಿಗೆ/ಒಬ್ಬಟ್ಟಿನ ಸಾರು:


ಹೋಳಿಗೆ /ಒಬ್ಬಟ್ಟಿನ ಸಾರು:

ಬೇಳೆ ಕಟ್ಟು ತೆಗೆಯುವ ವಿಧಾನವು ಹೋಳಿಗೆ ರೆಸಿಪಿಯಲ್ಲಿ ಇದೆ. ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು.ಬೇಳೆಯೂ ಕರಗದಂತೆ ಬೇಯಿಸಿ,ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ.ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು"ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ,ಬೆರೆಸಿ,ಒಲೆ ಮೇಲಿಟ್ಟು ಕುದಿಸಿ,ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".
ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು
ಕರಿಬೇವು ಎಸಳು - ಎರಡು
ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ
ಈರುಳ್ಳಿ - ಒಂದು
ಬೆಳ್ಳುಳ್ಳಿ ಐದಾರು ಎಸಳು
ತೆಂಗಿನಕಾಯಿ ತುರಿ ಸ್ವಲ್ಪ
ಹುಣಸೇಹಣ್ಣು / ಹುಣಸೇರಸ(ಪಲ್ಪ್)
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ / ತುಪ್ಪ
ಸಾಸಿವೆ, ಕರಿಬೇವು
ಇಂಗು,ಜೀರಿಗೆ
ಉಪ್ಪು

ಹುರಿದು ಮಸಾಲೆಪುಡಿ ಮಾಡಿಕೊಳ್ಳಬೇಕಾದ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ದೊಡ್ಡ ಚಮಚಗಳು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಕಾಲು ಚಮಚ
ಮೆಂತ್ಯ - ಕಾಲು ಚಮಚ
ಸಾಸಿವೆ - ಕಾಲು ಚಮಚ
ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ.
ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ.
ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.
ತೆಂಗಿನಕಾಯಿ ತುರಿಗೆ,ಹುರಿದಿರುವ ಈರುಳ್ಳಿ,ಬೆಳ್ಳುಳ್ಳಿ,ಮಸಾಲೆಪುಡಿ,ಹುಣಸೇಹಣ್ಣು,ಬೇಳೆ ಹೂರಣ,ಕೊತ್ತುಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು,ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ,ಎರಡನ್ನು ಚೆನ್ನಾಗಿ ಬೆರೆಸಿ,ಕುದಿಯಲು ಬಿಡಿ.ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ.ಒಂದು ಕುದಿ ಮಾತ್ರ ಕುದಿಸಿ ಇಳಿಸಿ.ಹೋಳಿಗೆ ಸಾರು ತಯಾರಾಗುತ್ತದೆ.
* ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು.
* ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ,ಕುದಿಸಿ,ಕುದಿಸಿ,ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ.

Popular Posts