Saturday, January 22, 2011

Horse Gram Sprouts Bassaru-ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಪಲ್ಯ:



ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ:


ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ಮೊಳಕೆ ಹುರುಳಿಕಾಳು - ಒಂದು ಬಟ್ಟಲು
ಹಸಿರು / ಕೆಂಪು ದಂಟಿನಸೊಪ್ಪು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಶಿಣ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ
ಉಪ್ಪು
ಎಣ್ಣೆ

ತಯಾರಿಸುವವಿಧಾನ:

ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ನೀರು ಹಾಕಿ, ಅದಕ್ಕೆ ಮೊಳಕೆ ಹುರುಳಿಕಾಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳು ಬೇಯಲು ಬಿಡಿ.ಹುರುಳೀಕಾಳು ಬೇಯುವುದು ನಿಧಾನ. ಅದಕ್ಕೆ ಅದನ್ನು ಒಂದು ವಿಷ್ಹಲ್ ಬರುವಷ್ಟು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಹುರುಳಿಕಾಳು ಕರಗದಂತೆ ಬೇಯಿಸಿಕೊಳ್ಳಿ. ನಂತರ ಹುರುಳಿಕಾಳು ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಬೇಯಿಸಿದ ಸೊಪ್ಪು-ಕಾಳಿನ ಕಟ್ಟು ಮತ್ತು ಸೊಪ್ಪುಕಾಳನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಕಾಳುಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-

ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪುಕಾಳಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಹುರುಳಿಕಾಳುಸೊಪ್ಪಿನ ಬಸ್ಸಾರು ತಯಾರು.

ಈಗ ಸೊಪ್ಪಿನ ಪಲ್ಯಕ್ಕೆ:

ಒಗ್ಗರಣೆಗೆ -


ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಅದನ್ನು ಹುರಿದುಕೊಂಡ ನಂತರ ಸೊಪ್ಪುಕಾಳಿನ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಹುರುಳಿಕಾಳುಸೊಪ್ಪಿನ ಪಲ್ಯ ತಯಾರು.

ಈ ಸಾರಿನ ಬಣ್ಣ ಸ್ವಲ್ಪ ಕಂದು ಬಣ್ಣವಿರುತ್ತದೆ.ಹುರುಳಿಕಾಳು ಮತ್ತು ದಂಟು ಎರಡು ಸೇರಿರುವ ಈ ಬಸ್ಸಾರು ಚೆನ್ನಾಗಿರುತ್ತದೆ.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
*ಸೊಪ್ಪಿನ ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
*ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
*ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
*ಈ ರೀತಿಯ ಬಸ್ಸಾರು, ಪಲ್ಯ ಮತ್ತು ರಾಗಿಮುದ್ದೆ ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ರೋಗಕ್ಕೆ ರಾಮಬಾಣ ರಾಗಿಮುದ್ದೆ.
*ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು,ಏಳೆಂಟು ಗಂಟೆ ನೆನೆಸಿ. ನೀರು ಸೋಸಿ,ಕಾಳುಗಳನ್ನು ಬಟ್ಟೆ ಕಟ್ಟಿಡಿ ಅಥವಾ ಕೊಲಾಂಡರ್ (ಸ್ಟ್ರೈನರ್)ನಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಡಿ. ಮಾರನೇದಿನ ಸ್ವಲ್ಪ ಮತ್ತು ಮತ್ತೊಂದು ದಿನ ಬಿಟ್ಟರೆ ತುಂಬಾ ಚೆನ್ನಾಗಿ, ಉದ್ದವಾಗಿ ಮೊಳಕೆ ಬಂದಿರುತ್ತವೆ. ಮೊಳಕೆ ಕಾಳುಗಳು ತುಂಬಾ ಒಳ್ಳೆಯದು.
*ಸೊಪ್ಪನ್ನು ಎಷ್ಟು ಬೇಕೋ ಅಷ್ಟು ಹಾಕಿ, ಸೊಪ್ಪು ಎಷ್ಟಾಕಿದರೂ ಬೆಂದ ನಂತರ ಸ್ವಲ್ಪವೇ ಆಗುತ್ತದೆ. ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

No comments:

Popular Posts