Thursday, January 29, 2009

Idli- Samabar / ಇಡ್ಲಿ - ಸಾಂಬಾರ್

ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಇಡ್ಲಿ:

ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು

ತಯಾರಿಸುವ ರೀತಿ:

ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ
ತಿರುಗಿಸದೇ ಹಗುರವಾಗಿ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ,ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-

ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -

ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.

Carrot Palya -ಕ್ಯಾರೆಟ್ ಪಲ್ಯ:

ಕ್ಯಾರೆಟ್ ಪಲ್ಯ:

ಸಾಮಗ್ರಿಗಳು:

ಕ್ಯಾರೆಟ್ ತುರಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಜೀರಿಗೆ,ಕರಿಬೇವು,ಹಸಿಮೆಣಸಿನಕಾಯಿ ಹಾಕಿ,ಕ್ಯಾರೆಟ್ ತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಕ್ಯಾರೆಟ್ ಅನ್ನು ಹಸಿಯಾಗಿಯೇ ಉಪಯೋಗಿಸುವುದರಿಂದ ಹೆಚ್ಚು ಬೇಯಿಸುವ ಅಗತ್ಯವಿಲ್ಲ.ಒಗ್ಗರಣೆಗೆ ಚೆನ್ನಾಗಿ ಬೆರೆಸಿ ಇಳಿಸಿದರೂ ಸಾಕು,ರುಚಿಯಾಗಿಯೇ ಇರುತ್ತದೆ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Vermicelli / Shyavige Upma - ಶ್ಯಾವಿಗೆ ಉಪ್ಪಿಟ್ಟು:

ಶ್ಯಾವಿಗೆ ಉಪ್ಪಿಟ್ಟು:

ಸಾಮಗ್ರಿಗಳು:

ಶ್ಯಾವಿಗೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಟಮೋಟ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:


ಶ್ಯಾವಿಗೆಯನ್ನು ಒಂದೆರಡು ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ, ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ. ಅಂದರೆ ಶ್ಯಾವಿಗೆಯ ಬಣ್ಣ ಸ್ವಲ್ಪ ಬದಲಾಗಿ ಹೊಂಬಣ್ಣ ಬಂದ ನಂತರ ಇಳಿಸಿ.ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಟಮೋಟ ಹಾಕಿ ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ಶ್ಯಾವಿಗೆಯನ್ನು ಕುದಿಯುತ್ತಿರುವ ನೀರಿಗೆ ಹಾಕುತ್ತಾ,ಆಗೆ ಗಂಟು ಬರದಂತೆ ಎಲ್ಲವನ್ನು ಚೆನ್ನಾಗಿ ತಿರುಗಿಸುತ್ತಿರಿ,ಪೂರ್ತಿ ಶ್ಯಾವಿಗೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಲೇ ಶ್ಯಾವಿಗೆ ಉಪ್ಪಿಟ್ಟನ್ನು ತಿನ್ನಬೇಕು. ಬೇಕಾದರೆ ಇದರ ಜೊತೆ ಕಾಯಿಚಟ್ನಿ ಕೊಡಿ ಇನ್ನೂ ಚೆನ್ನಾಗಿರುತ್ತದೆ.
*ಟಮೋಟವನ್ನು ಹೆಚ್ಚಿಗೆ ಹಾಕಬಹುದು, ಆಗ ಇನ್ನು ರುಚಿ ಹೆಚ್ಚುತ್ತದೆ.

Tuesday, January 27, 2009

Milk Powder Burfi / ಹಾಲಿನಪುಡಿ ಬರ್ಫಿ:

ಹಾಲಿನಪುಡಿ ಬರ್ಫಿ:

ಬೇಕಾಗುವ ಸಾಮಗ್ರಿಗಳು:

ಹಾಲಿನಪುಡಿ - ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಹಾಲು - ಅರ್ಧ ಕಪ್
ಬೆಣ್ಣೆ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:

ಹಾಲಿನ ಪುಡಿಯನ್ನು ಹಾಲಿನೊಂದಿಗೆ ಗಂಟಿಲ್ಲದಂತೆ ಬೆರೆಸಿಕೊಳ್ಳಿ.
ಪಾತ್ರೆಗೆ ಸಕ್ಕರೆ ಮತ್ತು ಬೆರೆಸಿದ ಹಾಲನ್ನು ಹಾಕಿ ಬೆರೆಸಿ, ಅದಕ್ಕೆ ಸ್ವಲ್ಪ ಹೊತ್ತಿನ ನಂತರ ಬೆಣ್ಣೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ,ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ,ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.ತಿನ್ನಲು ಹಾಲಿನಪುಡಿ ಬರ್ಫಿ ತಯಾರಾಗುತ್ತದೆ.

Friday, January 23, 2009

Peas Curry - ಬಟಾಣಿ ಸಾರು:



ಬಟಾಣಿ ಸಾರು:

ಬೇಕಾಗುವ ಸಾಮಗ್ರಿಗಳು:

ಬಟಾಣಿ- ಎರಡು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ-
ಆಲೂಗೆಡ್ಡೆ,ಬದನೆಕಾಯಿ,
ಹುರುಳಿಕಾಯಿ,ಹೂಕೋಸು
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ
ತಯಾರಿಸುವ ವಿಧಾನ:

ಬಟಾಣಿ ತಾಜಾ ಅಥವ ಟಿನ್ ಅಥವ ಫ್ರೋಜ಼ನ್ ಕಾಳುಗಳಾದರೆ, ಆಗೇ ತಯಾರಿಸಬಹುದು, ಆದರೆ ಒಣಗಿದ ಕಾಳುಗಳಾದರೆ, ಹಿಂದಿನ ರಾತ್ರಿಯೇ ನೆನೆಸಿಡಬೇಕು.

ಮಸಾಲೆ ತಯಾರಿಸಲು:

ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ,ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಬಟಾಣಿಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ ಬಟಾಣಿಕಾಳು ಸಾರು ತಯಾರಾಗುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.ಈ ಮಸಾಲೆ ಸಾರಿಗೆ ರಾಗಿಮುದ್ದೆ ಕೂಡಾ ಚೆನ್ನಾಗಿರುತ್ತದೆ.

* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಈ ಬಟಾಣಿ ಸಾರು ಬಟಾಣಿ ಇಷ್ಟ ಪಡುವ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Monday, January 19, 2009

Hesarukaalina kurma-ಹೆಸರುಕಾಳು ತಾಳು:

ಹೆಸರುಕಾಳು ತಾಳು:

ಸಾಮಾಗ್ರಿಗಳು:
ಹೆಸರುಕಾಳು - ಒಂದು ಬಟ್ಟಲು
ವಿವಿಧರೀತಿಯ ಹೆಚ್ಚಿದ ತರಕಾರಿಗಳು-
ಕ್ಯಾರೆಟ್, ಆಲೂಗೆಡ್ಡೆ,
ನವಿಲುಕೋಸು,
ಹೂಕೋಸು, ಸೋರೆಕಾಯಿ,
ಟಮೋಟೋ
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಅರಿಶಿಣದ ಪುಡಿ
ಧನಿಯಾಪುಡಿ
ಕಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು

ವಿಧಾನ:

ಹೆಸರುಕಾಳನ್ನು,ಒಂದು ಚಮಚ ಎಣ್ಣೆ,ಸ್ವಲ್ಪ ಅರಿಶಿಣ ಹಾಕಿ,ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು(ಹೆಸರುಕಾಳನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ತರಕಾರಿಗಳು,ಸಾರಿನಪುಡಿ,ಕಾರದಪುಡಿ,ಧನಿಯಾಪುಡಿ ಮತ್ತು ಉಪ್ಪು ಚೆನ್ನಾಗಿ ಬೆರೆಸಿ,ತರಕಾರಿಗಳು ಬೇಯುವವರೆಗೂ ಬೇಯಿಸಿಕೊಳ್ಳಿ.ಈ ಸಮಯದಲ್ಲಿ ಕಾಳು ಸರಿಯಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ, ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಈ ಕಾಳು ಅಥವಾ ತಾಳನ್ನು ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.ಇದನ್ನು ಊಟಕ್ಕೆ ಅಥವಾ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.
* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.
*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಮೊದಲು ಸ್ವಲ್ಪ ಕಾಳನ್ನು ಬೇಯಿಸಿ,ಒಗ್ಗರಣೆ ಮತ್ತು ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.

Saturday, January 17, 2009

Yoghurt Raita -ಮೊಸರು ರಾಯಿತ:

ಮೊಸರು ರಾಯಿತ:

ಮೊಸರಿಗೆ ,ಉಪ್ಪು,ಮೆಣಸಿನಪುಡಿ,ಹೆಚ್ಚಿದ ಕೊತ್ತುಂಬರಿಸೊಪ್ಪು ಮತ್ತು ಚಿಟಿಕೆ ಚಾಟ್ ಮಸಾಲಾ ಹಾಕಿ ಬೆರೆಸಿ. ಸಿಂಪಲ್ ರಾಯಿತ ರೆಡಿ.

****************************************

ಒಣದ್ರಾಕ್ಷಿ ಮತ್ತು ಅಂಜೂರದ ರಾಯಿತ:

ಮೊಸರಿಗೆ ದ್ರಾಕ್ಷಿಯನ್ನು ಮತ್ತು ಅಂಜೂರವನ್ನು ಪುಡಿಮಾಡಿ ಹಾಕಿ,ಉಪ್ಪು ಮತ್ತು ಮೆಣಸಿನಪುಡಿ ಉದುರಿಸಿ, ಬೆರೆಸಿ

Wednesday, January 14, 2009

Dosa/Masala Dose - ದೋಸೆ ಮತ್ತು ಮಸಾಲೆದೋಸೆ


ದೋಸೆ:

ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ;

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.ದೋಸೆಯೊಂದಿಗೆ ಸಾಗು ಕೂಡ ತುಂಬಾ ಚೆನ್ನಾಗಿರುತ್ತದೆ.

ಮಸಾಲೆದೋಸೆ:

ತವಾ ಮೇಲೆ ದೋಸೆಯನ್ನು ಮಾಡಿ, ಸ್ವಲ್ಪ ತುಪ್ಪ ಹಾಕಿ ಬೇಯಿಸಿ.ಅದರ ಮಧ್ಯ ಭಾಗದಲ್ಲಿ ಆಲೂಗೆಡ್ಡೆ ಪಲ್ಯವನ್ನು ತುಂಬಿ,ಬೇಕಾದ ಆಕಾರಕ್ಕೆ ಮಡಿಸಿ, ಮೇಲೆ ಬೆಣ್ಣೆಯನ್ನು ಹಾಕಿ ಕೊಡಿ.
* ದೋಸೆಗೆ ಮೊದಲು ಚಟ್ನಿಯನ್ನು ಸವರಿ ನಂತರ ಪಲ್ಯವನ್ನು ತುಂಬಬಹುದು.
* ಖಾರಚಟ್ನಿ ತಯಾರಿಸಿ ಕೂಡ ಮೊದಲು ಅದನ್ನು ಹಚ್ಚಿ, ಪಲ್ಯವನ್ನು ತುಂಬಿ ಮಸಾಲೆ ದೋಸೆ ತಯಾರಿಸಿ.

****************************************

ಖಾರಚಟ್ನಿ/ಕೆಂಪು ಚಟ್ನಿ:

ಕೆಂಪುಮೆಣಸಿನಕಾಯಿ / ಒಣಮೆಣಸಿನಕಾಯಿ
ಉಪ್ಪು
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ ಸ್ವಲ್ಪ

ವಿಧಾನ:

ಇವೆಲ್ಲವನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ, ಕೆಂಪು ಚಟ್ನಿ ಅಥವ ಖಾರ ಚಟ್ನಿ ತಯಾರಾಗುತ್ತದೆ.

*****************************************
ಆಲೂಗೆಡ್ಡೆ ಪಲ್ಯ:

ಸಾಮಗ್ರಿಗಳು:
ಆಲೂಗೆಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:
ಮೊದಲಿಗೆ ಆಲೂಗೆಡ್ಡೆಯನ್ನು ಸಿಪ್ಪೆ ಸಮೇತ ಬೇಯಿಸಿಕೊಳ್ಳಿ,ನಂತರ ತಣ್ಣಗಾದ ಮೇಲೆ ಸಿಪ್ಪೆ ತೆಗೆದು,ಪುಡಿ ಅಂದರೆ ಅದನ್ನು ಕೈನಲ್ಲಿಯೇ ಅದುಮಿದರೆ ಸಾಕು ಪುಡಿಯಾಗುತ್ತದೆ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಸಾಸಿವೆ,ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಹಾಕಿ, ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಮತ್ತು ಅರಿಶಿನ ಹಾಕಿ,ಪುಡಿ ಮಾಡಿದ ಆಲೂಗೆಡ್ಡೆಯನ್ನು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಅದನ್ನು ಬೆರೆಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ದೋಸೆಗೆ,ಚಪಾತಿಗೆ ಮತ್ತು ಪೂರಿಗೆ ಜೊತೆಯಾಗಿ ತಿನ್ನಲು ಉಪಯೋಗಿಸಬಹುದು.

***************************************

ಕಾಯಿಚಟ್ನಿ:

ಸಾಮಗ್ರಿಗಳು;
ಕಾಯಿತುರಿ
ಕಡ್ಲೆ
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಹಸಿಶುಂಠಿ
ಉಪ್ಪು
ಕೊತ್ತುಂಬರಿಸೊಪ್ಪು
ಪುದೀನ
ವಿಧಾನ:
ಚಟ್ನಿಗೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ನಂತರ ತೆಳ್ಳಗೆ ಬೇಕಾದರೆ ಮತ್ತೆ ಸ್ವಲ್ಪ ನೀರು ಸೇರಿಸ ಬಹುದು. ಚಟ್ನಿ ತಯಾರಾಗುತ್ತದೆ. ಬೇಕೆನಿಸಿದರೆ, ಸಾಸಿವೆ, ಕರಿಬೇವು ಮತ್ತು ಉದ್ದಿನಬೇಳೆಯ ಒಗ್ಗರಣೆ ಕೊಡಬಹುದು.

Friday, January 9, 2009

Moong gram Sabji - ಹೆಸರುಕಾಳು ಉಸಲಿ:

ಹೆಸರುಕಾಳು ಉಸಲಿ:

ಸಾಮಗ್ರಿಗಳು:
ಹೆಸರುಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:

ಹೆಸರುಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಹೆಸರುಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.

Popular Posts