Saturday, February 23, 2008

Puri Upma-ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ

ಕಡ್ಲೆಪುರಿಯನ್ನು ಒಂದೊಂದು ಕಡೆ ಬೇರೆ ಬೇರೆ ರೀತಿ ಕರೆಯುತ್ತಾರೆ. ಪುರಿ,ಮಂಡಕ್ಕಿ, ಮಂಡಾಳ, ಮುರಿ, ಕಡ್ಲೆಪುರಿ ಹೀಗೆ ಕರೆಯುವುದು ಹಲವು ಹೆಸರಲ್ಲೆ ಆದರೂ ಒಂದೇ. ಈ ತಿಂಡಿಯನ್ನು ಸಹ ಹಲವರು ಹಲವು ಬಗೆ ಕರೆಯುತ್ತಾರೆ.

ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ

ಬೇಕಾಗುವ ಸಾಮಗ್ರಿಗಳು;
ಕಡ್ಲೆಪುರಿ - ಒಂದು ಕೆಜಿ
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ(ಬೇಕಾದರೆ)
ಕೊತ್ತುಂಬರಿಸೊಪ್ಪು ,ಕಾಯಿತುರಿ
ಹುರಿಗಡಲೆ ಪುಡಿ - ಎರಡು ಚಮಚ

ತಯಾರಿಸುವ ವಿಧಾನ:
ಪುರಿ/ಮಂಡಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಳ್ಳೆಯ ನೀರಿನಲ್ಲಿ ಒಂದು ನಿಮಿಷ ಬಿಟ್ಟು,ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು , ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಮಂಡಕ್ಕಿ ಅಥವ ಪುರಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಕಡ್ಲೆಪುಡಿಯನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ.ಒಲೆಯಿಂದ ಇಳಿಸಿ. ಬಿಸಿಬಿಸಿ ಮಂಡಕ್ಕಿ/ಪುರಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಈ ತಿಂಡಿಯ ಜೊತೆ ಒಂದು ಲೋಟ ಬಿಸಿಯಾದ ಕಾಫಿ ಇದ್ದರಂತೂ ಇನ್ನೂ ಚೆನ್ನ.

Monday, February 18, 2008

Cucumber mixed salad/ಸೌತೆಕಾಯಿಹಸಿಕಾರ ಸಲಾಡ್

ಸೌತೆಕಾಯಿಹಸಿಕಾರ ಸಲಾಡ್:

ಸೌತೆಕಾಯಿ
ಟಮೋಟ
ಈರುಳ್ಳಿ
ಹಸಿಮೆಣಸಿನಕಾರ
ಕ್ಯಾರೆಟ್ ತುರಿ
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ಉಪ್ಪು

ವಿಧಾನ:
ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.
ವಾದರೂ ರುಚಿ ಮಾತ್ರ ಬಹಳ ಚೆನ್ನಾಗಿರುತ್ತವೆ.

ಸೌತೆಕಾಯಿ,ಈರುಳ್ಳಿ ಮತ್ತು ಟಮೋಟ ಹೆಚ್ಚಿ,ಅದಕ್ಕೆ ಕ್ಯಾರೆಟ್ ತುರಿ,ಕೊತ್ತುಂಬರಿ ಸೊಪ್ಪು,ನಿಂಬೆರಸ,ಉಪ್ಪು,ಹಸಿಮೆಣಸಿನಕಾರ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ತೆಂಗಿನಕಾಯಿತುರಿ ಸೇರಿಸಿ.ಮತ್ತೆ ಬೆರೆಸಿ.

Sunday, February 17, 2008

Jeera Rice / ಜೀರಿಗೆ ಅನ್ನ

ಜೀರಿಗೆ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಏಲಕ್ಕಿ,ಜೀರಿಗೆ ಹಾಕಿ ಹುರಿದು,ಅದಕ್ಕೆ ನೆನೆಸಿದ ಅಕ್ಕಿ ಹಾಕಿ,ಉಪ್ಪು ಸೇರಿಸಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ.ಬೇಯಿಸಿ.ಅನ್ನವನ್ನು ತಯಾರಿಸಿ.ಜೀರಿಗೆ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Saturday, February 16, 2008

Tomato Bhath / Tomato pulao




ಟಮೋಟ ಬಾತ್ /ಪಲಾವ್:

ಟಮೋಟ ಹೆಚ್ಚಿದ್ದು
ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ
ಅಚ್ಚಖಾರದ ಪುಡಿ
ಜೀರಿಗೆ
ಅರಿಶಿಣದ ಪುಡಿ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ,ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ,ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ,ಟಮೋಟಗಳನ್ನು ಹಾಕಿ ಅದನ್ನು ಒಂದೆರಡು ನಿಮಿಷ ಹುರಿದು,ಅದಕ್ಕೆ ಅರಿಶಿಣ,ಕಾರದಪುಡಿ,ಉಪ್ಪು, ಕಾಯಿತುರಿ ಮತ್ತು ನೀರನ್ನು ಹಾಕಿ,ನೆನೆಸಿದ ಅಕ್ಕಿಯನ್ನು ಹಾಕಿ,ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ,ಚೆನ್ನಾಗಿ ಬೆರೆಸಿ,ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ. ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ಮೊಸರಿನ ರಾಯತದೊಂದಿಗೆ ಬಡಿಸಿ.

Friday, February 15, 2008

Bread Pudding

ಬ್ರೆಡ್ ಪುಡ್ಡಿಂಗ್

ಬೇಕಾಗುವ ಸಾಮಗ್ರಿಗಳು:
1 ಪೌಂಡ್ ಬ್ರೆಡ್ ಅಥವ 12 ಪೀಸಸ್, ಅಂಚು ಕತ್ತರಿಸಿಟ್ಟುಕೊಳ್ಳಿ.
1 ಲೀಟರ್ ಹಾಲು
7-8 ಮೊಟ್ಟೆ - ಒಡೆದು, ಬಟ್ಟಲಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿಡಿ (ಬ್ಲೆಂಡ್ ಮಾಡಿ)
1/4 ಕೆಜಿ ಸಕ್ಕರೆ
50 ಗ್ರಾಂ ಬೆಣ್ಣೆ
1/2 ಚಮಚ ಜಾಯಿಕಾಯಿ ರಸ (ತೇದಿದ್ದು)
ಸ್ವಲ್ಪ ಗೋಡಂಬಿ - ದ್ರಾಕ್ಷಿ
ಬಾದಾಮಿ ಬೇಕಾದರೆ
1ಚಮಚ ತುಪ್ಪ ( ಇದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಇಟ್ಟುಕೊಳ್ಳಿ)

ತಯಾರಿಸುವ ವಿಧಾನ:
ಹಾಲು ಚೆನ್ನಾಗಿ ಕಾಯಿಸಿ,ಅದಕ್ಕೆ ಸಕ್ಕರೆ,ಬೀಟ್ ಮಾಡಿದ ಮೊಟ್ಟೆ ಹಾಕಿ,ಕೈ ಬಿಡದೇ ತಳ ಹತ್ತದಂತೆ ಚೆನ್ನಾಗಿ ತಿರುವುತ್ತಿರಿ,ಮದ್ಯೆ ಜಾಯಿಕಾಯಿ ರಸ ಹಾಕಿ,ತಿರುವಿ. ಹಾಲಿನ ಮಿಶ್ರಣ ಅರ್ಧ ಭಾಗದಷ್ಟು ಆದಾಗ ಅದನ್ನು ಕೆಳಗಿಳಿಸಿ.ಕಾವಲಿ ಅಥವ ಒಂದು ಅಗಲವಾದ ಬಟ್ಟಲಿಗೆ ಬೆಣ್ಣೆಯನ್ನು ಸವರಿ ಅದರಲ್ಲಿ ತುಪ್ಪದಲ್ಲಿ ಕರಿದ ಬ್ರೆಡ್ ತುಂಡುಗಳನ್ನು ಜೋಡಿಸಿಟ್ಟು, ಅದರ ಮೇಲೆ ಈ ಹಾಲಿನ ಮಿಶ್ರಣವನ್ನು ಸುರಿದು ಸಮನಾಗಿ ಹರಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿ, ನಂತರ ತಣ್ಣಗಾದ ಮೇಲೆ ತಿನ್ನಲು ರೆಡಿಯಾಗಿರಿ. ಇದು ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟ ವಾಗುತ್ತದೆ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

Tuesday, January 29, 2008

Khara Kadubu-Moongdal Kadubu-ಹೆಸರುಬೇಳೆ ಕಡುಬು/ಖಾರ ಕಡುಬು:

ಹೆಸರುಬೇಳೆ ಕಡುಬು:

ನಮ್ಮ ಪ್ರೀತಿಯ ದೇವ ಶ್ರೀ ಗಣೇಶನಿಗೆ ಪ್ರಿಯವಾದದ್ದು ಕಡುಬು. ಯಾವುದೇ ಅಡುಗೆ ಮಾಡಲಿ ಗಣೇಶ ಚತುರ್ಥಿಗೆ ಕಡುಬಂತೂ ಇರಲೇಬೇಕು. ಕಡುಬು ಮಾಡಿಟ್ಟು ಅದನ್ನು ಅವನಿಗೆ ನೈವೇದ್ಯ ಕೊಟ್ಟರೆ ಅವತ್ತಿನ ಗಣೇಶನ ಹಬ್ಬ ಆದಂತೆ.ಅವನಿಗೆ ಇಷ್ಟವಾದ ಕಡುಬನ್ನು ಸುಮಾರು ರೀತಿ ತಯಾರಿಸುತ್ತಾರೆ. ಒಬ್ಬೊಬ್ಬರದು ಒಂದೊಂದು ತರಹ ಆಚರಣೆ ಇರುತ್ತೆ. ಅದಕ್ಕೆ ಆ ಪದ್ಧತಿಗೆ ತಕ್ಕಂತೆ ಕಡುಬುಗಳನ್ನು ಮಾಡಿಕೊಳ್ಳುತ್ತಾರೆ. ಸಿಹಿ ಕಡುಬು,ಖಾರ ಕಡುಬು, ಬೇಳೆ ಕಡುಬು, ಎಳ್ಳಿನ ಕಡುಬು,ಹೂರಣದ ಕರಿಗಡುಬು, ಕರಿಗಡುಬು, ಕರ್ಜಿಕಾಯಿ ಅಂತ ಹೀಗೆ ವಿವಿಧ ರೀತಿಗಳಿವೆ. ಈಗ ಇಲ್ಲಿ ಹೆಸರುಬೇಳೆಯ ಖಾರದ ಕಡುಬು ತಯಾರಿಸುವ ವಿಧಾನವಿದೆ.

ಹೆಸರುಬೇಳೆ ಕಡುಬು / ಖಾರ ಕಡುಬು:

ಬೇಕಾಗುವ ಸಾಮಗ್ರಿಗಳು:

ಹೆಸರುಬೇಳೆ - ಒಂದು ಬಟ್ಟಲು
ಹಸಿಮೆಣಸಿನಕಾಯಿ ರುಚಿಗೆ
ಕೊತ್ತುಂಬರಿಸೊಪ್ಪು ಸ್ವಲ್ಪ
ಪುದೀನ ಸೊಪ್ಪು ಬೇಕಾದರೆ
ಒಂದು ಇಂಚು ಚೂರು ಶುಂಠಿ
ಒಂದೆರಡು ಚೆಕ್ಕೆ ಮತ್ತು ಲವಂಗ
ಉಪ್ಪು ರುಚಿಗೆ

ತಯಾರಿಸುವ ವಿಧಾನ:

ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ. ಅರ್ಧ/ಒಂದು ಗಂಟೆಯಾದರು ನೆನೆಯಬೇಕು.
ನೆನೆಸಿದ ಹೆಸರುಬೇಳೆಯ ಜೊತೆ, ಹಸಿಮೆಣಸಿನಕಾಯಿ,ಶುಂಠಿ,ಚೆಕ್ಕೆ,ಲವಂಗ,ಕೊತ್ತುಂಬರಿಸೊಪ್ಪನ್ನು ಮತ್ತು ಉಪ್ಪನ್ನು ಹಾಕಿ ಸ್ವಲ್ಪ ತರಿ-ತರಿಯಾಗಿ ರುಬ್ಬಿಕೊಳ್ಳಿ, ನೀರು ಸೇರಿಸಬಾರದು, ಆಗೇ ರುಬ್ಬಬೇಕು. ಇದನ್ನು ಹೂರಣ (ಫಿಲ್ಲಿಂಗ್) ಎನ್ನುತ್ತೇವೆ.
ಈಗ ಇದನ್ನು ಸ್ಟಫ್ ಮಾಡಬೇಕು. ಅದಕ್ಕಾಗಿ ಹಿಟ್ಟನ್ನು ತಯಾರಿಸಬೇಕು.

ಅಕ್ಕಿಹಿಟ್ಟು ಅಥವಾ ಮುದ್ದೆಯನ್ನು ತಯಾರಿಸುವ ರೀತಿ:

ಕಡುಬಿನ ಹಿಟ್ಟು ತಯಾರಿಸುವ ರೀತಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು - ಒಂದು ಬಟ್ಟಲು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು ಅಗತ್ಯವಿದ್ದಷ್ಟು- ಎರಡು/ಮೂರು ಬಟ್ಟಲು

ವಿಧಾನ:

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ಎಣ್ಣೆ ಮತ್ತು ಉಪ್ಪು ಹಾಕಿಡಿ. ಅದನ್ನು ಚೆನ್ನಾಗಿ ಬೇಯಸಿ, ಹಿಟ್ಟನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ರಾಗಿಮುದ್ದೆ ಮಾಡುವವರಿಗೆ ಇದನ್ನು ತಯಾರಿಸಲು ಸುಲಭ ಮತ್ತು ಯಾವ ಹದದಲ್ಲಿ ತಯಾರಿಸಬೇಕು ಅಂತ ಗೊತ್ತಾಗುತ್ತೆ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.

ಕಡುಬನ್ನು ತಯಾರಿಸುವ ರೀತಿ:

ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೆಸರುಬೇಳೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಅರ್ಧ ವೃತ್ತಾಕಾರವಾಗಿ ಮಡಿಚಿ, ಅಂಚುಗಳನ್ನು ಸರಿಯಾಗಿ ಸೇರಿಸಿ, ಅದುಮಿ,ಬಿಟ್ಟುಕೊಳ್ಳದಂತೆ ಸರಿಯಾಗಿ ಅದು ಅಂಟಿಕೊಂಡಿದೆಯಾ ಎಂದು ಪರೀಕ್ಷಿಸಿ, ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಹೀಗೆ ಎಲ್ಲವನ್ನು ತಯಾರಿಸಿಕೊಂಡು, ಹಬೆಯಲ್ಲಿ ಹತ್ತು ಅಥವ ಹದಿನೈದು ನಿಮಿಷಗಳು ಬೇಯಿಸಿ. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬುಗಳನ್ನು ಹಬೆಯಲ್ಲಿ ಬೇಯಿಸಬೇಕು. ಇದನ್ನು ಬೇಯಿಸಿಯೇ ತಿನ್ನಬೇಕು, ಬೇಯಿಸಿದ ನಂತರ ತೆಗೆದು ತುಪ್ಪ ಹಾಕಿ ತಿನ್ನಲು ಕೊಡಿ. ಬಿಸಿ-ಬಿಸಿ ಕಡುಬು ರುಚಿ ಇರುತ್ತದೆ. ಅಲ್ಲದೇ ತಣ್ಣಗಾದ ಮೇಲು ಸಹ ತುಂಬಾನೇ ಚೆನ್ನಾಗಿರುತ್ತದೆ, ಯಾವ ರೀತಿ ಬೇಕಾದರೂ ,ಯಾವಾಗ ಬೇಕಾದರೂ ಓಡಾಡಿಕೊಂಡು ತಿನ್ನಬಹುದು. ತುಪ್ಪದ ಜೊತೆ, ತೆಂಗಿನಕಾಯಿ ಚಟ್ನಿ ಒಳ್ಳೆಯ ಸೂಪರ್ ಕಾಂಬಿನೇಷನ್.


*ಹಬೆಯಲ್ಲಿ ಬೇಯಿಸಲು ಕುಕ್ಕರ್ / ಇಡ್ಲಿ ಬೇಯಿಸುವ ಪಾತ್ರೆ/ ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ , ಕಡುಬು ಜೋಡಿಸಿದ ತಟ್ಟೆ ಅಥವಾ ಬಟ್ಟಲನ್ನು ಅದರಲ್ಲಿ ಇಟ್ಟು ಬೇಯಿಸಿ. ತುಂಬಾ ಹೊತ್ತು ಬೇಯಿಸಿದರೆ ಕಡುಬುಗಳು ತುಂಬಾ ಗಟ್ಟಿಯಾಗುತ್ತವೆ. ಬೇಗ ತೆಗೆದರೆ ಒಳಗೆ ಬೆಂದಿರುವುದಿಲ್ಲ. ಆಗಾಗಿ ಸರಿಯಾಗಿ ಬೇಯಿಸಿಕೊಳ್ಳಿ.

Wednesday, January 23, 2008

Shavige Payasa

ಶ್ಯಾವಿಗೆ ಖೀರು

ಸಾಮಗ್ರಿಗಳು :

ಶ್ಯಾವಿಗೆ - 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - ಸ್ವಲ್ಪ
ಏಲಕ್ಕಿ - 5,
ಸಕ್ಕರೆ - ರುಚಿಗೆ ತಕ್ಕಷ್ಟು
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಶ್ಯಾವಿಗೆಯನ್ನು ಸ್ವಲ್ಪ ಕೆಂಪಾಗುವವರೆಗೂ ಹುರಿಯಿರಿ.
ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
[ಕಾಯಿತುರಿ /ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು].

ಮಾಡುವ ವಿಧಾನ : ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಹುರಿಯಲ್ಲಿ ಕುದಿಸಬೇಕು. ಕುದಿಯುತ್ತಿರುವಾಗಲೆ ಶ್ಯಾವಿಗೆಯನ್ನು ಹಾಕಿ ಬೇಯಿಸಿ, ಸಕ್ಕರೆ ಸೇರಿಸಿ ಮಧ್ಯೆ ಮಧ್ಯೆ ಕಲಕುತ್ತಿರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಬೇಕಾದರೆ ಕುದಿಯುವಾಗ 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಶ್ಯಾವಿಗೆ ಬೆಂದ ನಂತರ ಒಲೆಯಿಂದ ಇಳಿಸಿ . ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ರುಚಿಯಾದ ಶ್ಯಾವಿಗೆ ಪಾಯಸ ಸಿದ್ಧ.

Monday, January 14, 2008

ನಿಂಬೆಹಣ್ಣಿನ ಶರಬತ್ತು / Lemon Juice

ನಿಂಬೆಹಣ್ಣಿನ ಶರಬತ್ತು:

ನಿಂಬೆರಸ-ಒಂದು ಚಮಚ/ರುಚಿಗೆ
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ

ವಿಧಾನ:

ನೀರಿಗೆ ಸಕ್ಕರೆ,ಉಪ್ಪು,ನಿಂಬೆರಸ,ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಕಲಕಿದರೆ. ನಿಂಬೆ ಶರಬತ್ತು/ಪಾನೀಯ ತಯಾರಾಗುತ್ತದೆ.
*ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸಲು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಮೊದಲಿಂದಲೂ ಯಾರ ಮನೆಗಾದರೂ ಬಿಸಿಲಿನಲ್ಲಿ ಹೋದ ತಕ್ಷಣ ನಿಂಬೆಹಣ್ಣಿನ ಶರಬತ್ತು ಅಥವಾ ಮಜ್ಜಿಗೆ ಕೊಡುವ ವಾಡಿಕೆ ಇದೆ ಅಲ್ಲವೇ!ಅದೊಂದು ತರಹ ಸಂಪ್ರದಾಯವೇ ಆಗಿತ್ತು ಆಗ. ಆಯಾಸಕ್ಕೆ ಪರಿಹಾರ ನೀಡುವ ಅಂಶ ಅದರಲ್ಲಿದೆ.
*ಇದಕ್ಕೆ ಸ್ವಲ್ಪ ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ

Saturday, January 12, 2008

Tomato Rasam-ಟಮೋಟ ರಸಂ:


ಟಮೋಟ ರಸಂ:

ಬೇಕಾಗುವ ಸಾಮಗ್ರಿಗಳು:
ಟಮೋಟ ಹಣ್ಣು
ಬೆಳ್ಳುಳ್ಳಿ ನಾಲ್ಕು ಎಸಳು, ಜಜ್ಜಿದ್ದು
ಹುಣಸೇರಸ ಒಂದು ಚಮಚ
ಅಚ್ಚಖಾರದಪುಡಿ
ಉಪ್ಪು
ಎಣ್ಣೆ,ಸಾಸೆವೆ,ಜೀರಿಗೆ,ಕರಿಬೇವು,ಇಂಗು
ಕೊತ್ತುಂಬರಿಸೊಪ್ಪು

ತಯಾರಿಸುವ ವಿಧಾನ:
ಟಮೋಟ ಹಣ್ಣನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಅದರ ಸಿಪ್ಪೆಯನ್ನು ತೆಗೆದು,ಮಿಕ್ಸಿಗೆ ಹಾಕಿ ಮತ್ತೆ ಸ್ವಲ್ಪ ನೀರು ಹಾಕಿ ರುಬ್ಬಿ.
ಪಾತ್ರೆಗೆ ಎಣ್ಣೆಯನ್ನು ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಬೆಳ್ಳುಳ್ಳಿ ಮತ್ತು ಇಂಗು ಹಾಕಿ, ಆಮೇಲೆ ರುಬ್ಬಿದ ಟಮೋಟ ರಸ ಹಾಕಿ, ಹುಣಸೇರಸ,ಉಪ್ಪು ಮತ್ತು ಅಚ್ಚಖಾರದಪುಡಿ ಹಾಕಿ,ಮತ್ತೆ ಒಂದಿಷ್ಟು ನೀರು ಹಾಕಿ ಬೆರೆಸಿ. ಆಮೇಲೆ ಒಂದೆರಡು ಕುದಿ ಕುದಿಸಿ. ಇಳಿಸಿ,ಕೊತ್ತುಂಬರಿಸೊಪ್ಪನ್ನು ಹಾಕಿ. ರುಚಿಯಾದ ಸರಳವಾದ ಟಮೋಟ ರಸಂ ತಯಾರಾಗುತ್ತದೆ. ಇದನ್ನು ಊಟಕ್ಕೆ ಮುಂಚೆ ಕುಡಿಯಲು ಅಥವಾ ಬಿಳಿಅನ್ನಕ್ಕೆ ಅಥವಾ ಊಟದ ನಂತರ ಕುಡಿಯಲು,ಹೀಗೆ ಹೇಗಾದರೂ ಸರ್ವ್ ಮಾಡಬಹುದು. ಎಲ್ಲದಕ್ಕು ಚೆನ್ನಾಗಿರುತ್ತದೆ. ಮಕ್ಕಳಂತೂ ಇದರ ಜೊತೆ ಹಪ್ಪಳ ಅಥವಾ ಸೆಂಡಿಗೆ ಕೊಟ್ಟರೆ ಗಲಾಟೆಯಿಲ್ಲದೆ ಊಟ ಮಾಡುತ್ತಾರೆ.

Monday, January 7, 2008

Pongal /ಸಿಹಿ ಪೊಂಗಲ್

ಸಂಕ್ರಾಂತಿ ಹಬ್ಬದ ವಿಶೇಷ ಅಡಿಗೆ ಪೊಂಗಲ್. ಪೊಂಗಲ್ ಮತ್ತು ಎಳ್ಳು ಬೆಲ್ಲವಿಲ್ಲದೆ ಸಂಕ್ರಾಂತಿ ಸಂಪೂರ್ಣ ಎನಿಸುವುದಿಲ್ಲ. ವರುಷದ ಮೊದಲ ಹಬ್ಬದ ಮೊದಲ ಸಿಹಿ ಇದಾಗಿರುತ್ತದೆ. ಬೇಕೆನಿಸಿದಾಗ ತಯಾರಿಸಿ ತಿಂದರೂ ಸಹ ,ಆದರೂ ಅದೇನೋ ಹಬ್ಬದ ದಿನ ತಯಾರಿಸಿದ ಅಡಿಗೆಗಳಿಗೆ ಒಂದು ತರಹದ ವಿಶೇಷ ರುಚಿ.

ಸಿಹಿ ಪೊಂಗಲ್:

ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು

ತಯಾರಿಸುವ ವಿಧಾನ:

ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ,ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು ,ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ,ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ,ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ.ಇಳಿಸಿ.ಪೊಂಗಲ್ ತಿನ್ನಲು ತಯಾರಾಗುತ್ತದೆ.ಕೇಸರಿ ಮತ್ತು ಹೆಸರುಬೇಳೆಯ ಅದರದ್ದೆ ಆದ ನೈಜ ಬಣ್ಣಗಳಿಂದ ಪೊಂಗಲ್ ನೋಡಲು ಚೆನ್ನಾಗಿ ಕಾಣುತ್ತದೆ.
* ಬಾದಾಮಿಯನ್ನು ಸೇರಿಸಬಹುದು. ತುಪ್ಪ ತಮ್ಮ ಇಷ್ಟದಂತೆ ಸೇರಿಸಿಕೊಳ್ಳಿ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.

Sunday, January 6, 2008

Kadubina Hittu/Mudde - ಅಕ್ಕಿಹಿಟ್ಟು/ಮುದ್ದೆ

ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ. ಕಡುಬಿನ ಬಗ್ಗೆ ಒಂದಿಷ್ಟು ಮಾಹಿತಿ.

ಕಡುಬಿನ ಹಿಟ್ಟು ತಯಾರಿಸುವ ರೀತಿ:

ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ,ಎಣ್ಣೆ ಮತ್ತು ಉಪ್ಪು ಹಾಕಿಡಿ. ಹಿಟ್ಟನ್ನು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.

ಕಡುಬನ್ನು ತಯಾರಿಸುವ ರೀತಿ:

ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಬಗ್ಗೆ ಮಾಹಿತಿ.

* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.

ಕಡುಬುಗಳಲ್ಲಿ ವಿವಿಧ ರೀತಿ, ಹಲವು ಬಗೆ, ಒಬ್ಬೊಬ್ಬರು ಒಂದೊಂದು ರೀತಿ ತಯಾರಿಸುತ್ತಾರೆ. ಕೆಲವು ರೆಸಿಪಿಗಳನ್ನು ತಿಳಿಸಿರುವೆ, ಕಡುಬಿನ ಲೇಬಲ್ ನಲ್ಲಿ ನೋಡಿ.

Friday, December 21, 2007

Bassaru /ಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ


ಬಸ್ಸಾರು ಮತ್ತು ಸೊಪ್ಪಿನ ಪಲ್ಯ:

ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ತೊಗರಿಬೇಳೆ - ಒಂದು ಕಪ್
ಸಬ್ಬಸ್ಸಿಗೆ ಸೊಪ್ಪು/ಬೆರೆಕೆಸೊಪ್ಪು/ದಂಟಿನಸೊಪ್ಪು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಶಿಣ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ
ತಯಾರಿಸುವವಿಧಾನ:
ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ತೊಗರೆಬೇಳೆಯನ್ನು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಬೇಳೆ ಬೇಯಲು ಬಿಡಿ.ಬೇಳೆಯನ್ನು ತುಂಬಾ ನುಣ್ಣಗೆ ಬೇಯಿಸಬೇಡಿ, ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಬೇಳೆ ಕರಗದಂತೆ ಬೇಯಿಸಿಕೊಳ್ಳಿ. ನಂತರ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಸೊಪ್ಪಿನ ಕಟ್ಟು ಮತ್ತು ಸೊಪ್ಪನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.
ಸಾರಿಗೆ ರುಬ್ಬಿಕೊಳ್ಳಲು:
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಬಸ್ಸಾರು ತಯಾರು.
ಈಗ ಸೊಪ್ಪಿನ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಅದನ್ನು ಹುರಿದುಕೊಂಡ ನಂತರ ಸೊಪ್ಪುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಸೊಪ್ಪಿನ ಪಲ್ಯ ತಯಾರು.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ, ಕುದಿಸಿ, ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
*ಸೊಪ್ಪಿನ ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು, ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
*ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
*ಸೊಪ್ಪಿನಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
*ಈ ರೀತಿಯ ಸೊಪ್ಪಿನ ಬಸ್ಸಾರು, ಪಲ್ಯ ಮತ್ತು ರಾಗಿಮುದ್ದೆ ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ರೋಗಕ್ಕೆ ರಾಮಬಾಣ ರಾಗಿಮುದ್ದೆ.

Popular Posts